ದೆಹಲಿ, ಗುರ್ ಗಾಂವ್ ನಲ್ಲಿ ಭಾರೀ ಮಳೆ, ಕರ್ನಾಟಕದ ಕರಾವಳಿಯಲ್ಲಿ ಎಚ್ಚರ
Recommended Video
ನವದೆಹಲಿ, ಆಗಸ್ಟ್ 28: ದೆಹಲಿ ಹಾಗೂ ಗುರ್ ಗಾಂವ್ ನಲ್ಲಿ ಮಂಗಳವಾರ ಭಾರಿ ಮಳೆಯಾಗಿ, ಪ್ರವಾಹ ಪರಿಸ್ಥಿತಿ ಏರ್ಪಟ್ಟಿತು. ಇದರಿಂದ ಸಂಚಾರ ದಟ್ಟಣೆಯಾಗಿ ರಸ್ತೆಯುದ್ದಕ್ಕೂ ವಾಹನಗಳು ಸಾಲಾಗಿ ನಿಂತವು. ಶಾಲೆಗೆ ತೆರಳುವ ಮಕ್ಕಳು ಹಾಗೂ ಅವರ ಪೋಷಕರು ಗಂಟೆಗಟ್ಟಲೆ ರಸ್ತೆಯಲ್ಲೇ ನಿಲ್ಲಬೇಕಾಯಿತು. ಮುಂದೆ ಸಾಗಲಾರದೆ ಕೆಲವರು ಮನೆಗಳಿಗೆ ಹಿಂತಿರುಗಿದರು.
ಸಂಚಾರ ದಟ್ಟಣೆ ಬಗ್ಗೆ ದೆಹಲಿ ಸಂಚಾರ ಪೊಲೀಸರು ಟ್ವಿಟ್ಟರ್ ನಲ್ಲಿ ಎಚ್ಚರಿಕೆ ನೀಡಿದರು. ಸಾಲುಗಟ್ಟಿ ನಿಂತಿದ್ದ ಕಾರು-ಬೈಕ್ ಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ದೆಹಲಿ-ಜೈಪುರ್-ಮುಂಬೈ ಹೆದ್ದಾರಿ ಮಾರ್ಗದಲ್ಲೂ ಸಂಚಾರಕ್ಕೆ ಸಮಸ್ಯೆಯಾಯಿತು. "ಸಂಚಾರ ವ್ಯವಸ್ಥೆ ಸುಗಮ ಮಾಡಲು ನಮ್ಮ ತಂಡ ಶ್ರಮಿಸುತ್ತಿದೆ" ಎಂದು ಗುರ್ ಗಾಂವ್ ಅ ಎಸಿಪಿ ಹೀರಾ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದೆಹಲಿ ವಿಮಾನ ನಿಲ್ದಾಣ, ಕೇಂದ್ರ ದೆಹಲಿ, ಆರ್.ಕೆ.ಪುರಂನಲ್ಲಿ ಮಂಗಳವಾರ ಬೆಳಗ್ಗೆ ಗುಡುಗು-ಮಿಂಚು ಸಹಿತ ಮಳೆಯಾದ ಬಗ್ಗೆ ವರದಿಯಾಗಿದೆ. ಮರಗಳು ಉರುಳಿ, ವಿದ್ಯುತ್ ಸಂಪರ್ಕ ಕಡಿತವಾಗಿ, ಕೆಲವೆಡೆ ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ಕೂಡ ಸಾರ್ವಜನಿಕರು ದೂರು ನೀಡಿದ್ದಾರೆ. ನೋಯಿಡಾ ಹಾಗೂ ಘಾಜಿಯಾಬಾದ್ ನ ನಿವಾಸಿಗಳು ಕೂಡ ಮಳೆಯ ಕಾರಣಕ್ಕೆ ಬೆಳಗಿನ ಜಾವ ನಿದ್ದೆಯಿಂದ ಎಚ್ಚರವಾಗಿದ್ದಾರೆ.
ಕಳೆದ ಮೂರು ವರ್ಷಗಳ ಆಗಸ್ಟ್ ತಿಂಗಳಲ್ಲೇ ಈ ಬಾರಿಯೇ ಅತಿ ಹೆಚ್ಚು ಮಳೆಯಾಗಿದೆ. ಗುರುವಾರದ ತನಕ ಇದೇ ರೀತಿ ಮಳೆ ಆಗಬಹುದು ಎಂಬ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಸಿದೆ.
ಉತ್ತರಾಖಂಡ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರಪ್ರದೇಶ, ಪೂರ್ವ ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ ಗಢ, ಮಹಾರಾಷ್ಟ್ರದ ವಿದರ್ಭ ಭಾಗ, ಹಿಮಾಲಯ ಭಾಗದ ಪಶ್ಚಿಮ ಬಂಗಾಲ, ಸಿಕ್ಕಿಂ, ನಾಗಾಲ್ಯಾಂಡ್, ಮಣಿಪುರ್, ಮಿಜೋರಾಂ, ತ್ರಿಪುರಾ, ಕೊಂಕಣ ಕರಾವಳಿ, ಗೋವಾ, ತೆಲಂಗಾಣ ಮತ್ತು ಕರ್ನಾಟಕದ ಕರಾವಳಿಯಲ್ಲಿ ಭಾರೀ ಮಳೆ ಆಗುವ ಬಗ್ಗೆ ಎಚ್ಚರಿಕೆ ನೀಡಿದೆ.