ಭಾರತದ ಕಂಟೇನ್ಮೆಂಟ್ ಝೋನ್ ಮಾರುಕಟ್ಟೆಗಳಿಗೆ ಹೊಸ ಮಾರ್ಗಸೂಚಿ
ನವದೆಹಲಿ, ಡಿಸೆಂಬರ್.01: ಭಾರತದಲ್ಲಿ ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಿರುವ ಪ್ರದೇಶಗಳಲ್ಲಿರುವ ಎಲ್ಲ ಮಾರುಕಟ್ಟೆಗಳನ್ನು ಮುಚ್ಚುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆದೇಶಿಸಿದೆ.
ದೇಶದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ದೃಷ್ಟಿಯಿಂದ ಮಾರುಕಟ್ಟೆ ಪ್ರದೇಶಗಳಲ್ಲಿ ಏನೆಲ್ಲ ನಿಯಮಗಳನ್ನು ಪಾಲಿಸಬೇಕು ಎನ್ನುವುದರ ಕುರಿತು ಮತ್ತೊಂದು ಮಾರ್ಗಸೂಚಿಯನ್ನು ಹೊರಡಿಸಿದೆ.
ಹೊಸ ಕೋವಿಡ್ ಪ್ರಕರಣದಲ್ಲಿ ದಾಖಲೆ ಬರೆದ ಬಳ್ಳಾರಿ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ, ಕಂಟೇನ್ಮೆಂಟ್ ಝೋನ್ ಗಳಲ್ಲಿರುವ ಮಾರುಕಟ್ಟೆಗಳನ್ನು ಮುಚ್ಚಬೇಕು. ಕಂಟೇನ್ಮೆಂಟ್ ಝೋನ್ ನಿಂದ ಹೊರಪ್ರದೇಶಗಳಲ್ಲಿ ಮಾತ್ರ ಮಾರುಕಟ್ಟೆಗಳನ್ನು ತೆರೆಯುವುದಕ್ಕೆ ಅನುಮತಿ ನೀಡಲಾಗಿದೆ.
ಆರೋಗ್ಯ ಸಚಿವಾಲಯದ ಎಚ್ಚರಿಕೆ:
ದೇಶದಲ್ಲಿ ಕೊವಿಡ್-19 ಸೋಂಕು ನಿಯಂತ್ರಿಸುವುದಕ್ಕೆ ಜನರು ಜಾಗೃತಿ ವಹಿಸಬೇಕು. 65 ವರ್ಷದ ಮೇಲ್ಮಟ್ಟ ವೃದ್ಧರು, ಆರೋಗ್ಯ ಸಮಸ್ಯೆ ಉಳ್ಳವರು, ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು ಅನಗತ್ಯವಾಗಿ ಸಂಚರಿಸುವುದು ಸೂಕ್ತವಲ್ಲ. ಮೂಲಭೂತ ಸೌಕರ್ಯಗಳಿಗೆ ಮಾತ್ರ ಹೊರಗೆ ಬರಬೇಕು. ಉಳಿದ ಸಮಯದಲ್ಲಿ ಸಾಧ್ಯವಾದಷ್ಟು ಮನೆಗಳಲ್ಲಿಯೇ ಇರವುದು ಉತ್ತಮ ಎಂದು ಎಚ್ಚರಿಸಿದೆ.
ಮಾರುಕಟ್ಟೆಗಳಲ್ಲಿ ಅಂಗಡಿ ಇಟ್ಟುಕೊಂಡಿರುವ ವ್ಯಾಪಾರಿಗಳಿಗೆ ಕೊವಿಡ್-19 ಸೋಂಕಿನಿಂದ ಹೆಚ್ಚು ಅಪಾಯವಿರುತ್ತದೆ. ಈ ಹಿನ್ನೆಲೆ ವ್ಯಾಪಾರಿಗಳು ಹೆಚ್ಚುವರಿಯಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಾರ್ವಜನಿಕರಿಂದ ನೇರ ಸಂಪರ್ಕ ಹೊಂದುವುದನ್ನು ಸಾಧ್ಯವಾದಷ್ಟು ಕಡಿತಗೊಳಿಸಬೇಕು ಎಂದು ಸೂಚಿಸಲಾಗಿದೆ.
ಕಂಟೇನ್ಮೆಂಟ್ ಝೋನ್ ನಲ್ಲಿರುವ ಮಾರುಕಟ್ಟೆಗಳ ಮಾಲೀಕರ ಸಂಘವು ಈ ನಿಯಮಾವಳಿಗಳು ಜಾರಿಯಾಗುವಂತೆ ನೋಡಿಕೊಳ್ಳಬೇಕು. ಹೊಸ ನಿಯಮಗಳು ಪಾಲನೆಯಾಗುತ್ತಿರುವ ಬಗ್ಗೆ ನಿಗಾ ವಹಿಸುವುದಕ್ಕೆ ಉಪ ಸಮಿತಿಯೊಂದನ್ನು ರಚಿಸಬೇಕು. ಸಾರ್ವಜನಿಕರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಸರ್ ಬಳಕೆ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸೂಚಿಸಿದೆ.