"ಲಸಿಕೆ ಹಾಕುವ ಬದಲು ಲಸಿಕೆ ಬಗ್ಗೆ ಅನುಮಾನ ಹುಟ್ಟುಹಾಕಿರುವುದು ನೀವೇ"
ನವದೆಹಲಿ, ಏಪ್ರಿಲ್ 19: ಕೊರೊನಾ ನಿರ್ವಹಣೆ ಕುರಿತು ಸರ್ಕಾರದ ಕಾರ್ಯವೈಖರಿ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮನಮೋಹನ್ ಸಿಂಗ್ ಅವರ ಪತ್ರಕ್ಕೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿರುಗೇಟು ನೀಡಿದ್ದಾರೆ.
ದೇಶದಲ್ಲಿ ಕೊರೊನಾ ಎರಡನೇ ಅಲೆ ಕಾಂಗ್ರೆಸ್ ಆಡಳಿತದ ರಾಜ್ಯಗಳಿಂದ ಪ್ರಚೋದನೆ ಪಡೆದುಕೊಂಡಿದೆ. ಜನರಿಗೆ ಲಸಿಕೆ ಹಾಕುವುದರ ಬದಲು ಲಸಿಕೆಗಳ ಕುರಿತು ಅನುಮಾನ ಹುಟ್ಟುಹಾಕುವಲ್ಲಿ ಕಾಂಗ್ರೆಸ್ ನಿರತವಾಗಿದೆ ಎಂದು ದೂರಿದರು.
ಕೊರೊನಾ ನಿಯಂತ್ರಣಕ್ಕೆ ಪಂಚಸೂತ್ರ; ಪ್ರಧಾನಿಗೆ ಮನಮೋಹನ್ ಸಿಂಗ್ ಪತ್ರ!
ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಮುಖವಾಗಿರುವ ಲಸಿಕಾ ಮಹತ್ವವನ್ನು ಸಿಂಗ್ ಅರ್ಥ ಮಾಡಿಕೊಂಡಿದ್ದರೂ ಕೆಲವು ಕಾಂಗ್ರೆಸ್ ನಾಯಕರು ನೀಡಿದ ಬೇಜವಾಬ್ದಾರಿ ಹೇಳಿಕೆಗಳಿಂದ ರಾಷ್ಟ್ರೀಯ ಸರಾಸರಿ ಲಸಿಕಾ ಕಾರ್ಯಕ್ರಮಕ್ಕೆ ಅಡ್ಡಿಯಾಗಿದೆ. ಹಿರಿಯ ನಾಗರಿಕರು ಹಾಗೂ ಕೊರೊನಾ ವಿರುದ್ಧದ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವಲ್ಲಿಯೂ ಕಾಂಗ್ರೆಸ್ ಆಡಳಿತದ ಸರ್ಕಾರಗಳು ಹಿಂದುಳಿದಿವೆ ಎಂದು ದೂರಿದರು.
ಸಿಂಗ್ ಅವರು ಬರೆದ ಪತ್ರವನ್ನು ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದು, "ನಿಮ್ಮ ಈ ಸಹಕಾರ ಹಾಗೂ ಅಮೂಲ್ಯವಾದ ಸಲಹೆಯನ್ನು ನಿಮ್ಮ ಕಾಂಗ್ರೆಸ್ ನಾಯಕರೂ ಅನುಸರಿಸಿದರೆ ಒಳ್ಳೆಯದು" ಎಂದು ಹೇಳಿದ್ದಾರೆ.
ಸೋಮವಾರ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಮನಮೋಹನ್ ಸಿಂಗ್, "ಲಸಿಕಾ ಕಾರ್ಯಕ್ರಮಕ್ಕೆ ಇನ್ನಷ್ಟು ವೇಗ ತುಂಬಬೇಕು. ಇದಷ್ಟೇ ಕೊರೊನಾ ಪಿಡುಗಿನ ನಿಯಂತ್ರಣಕ್ಕೆ ಇರುವ ದಾರಿ. ಸರ್ಕಾರ ಇಂತಿಷ್ಟು ಮಂದಿಗೆ ಲಸಿಕೆ ನೀಡಿದ್ದೇವೆ ಎಂದು ಸಂಖ್ಯೆ ಹೇಳುವುದಕ್ಕಿಂತ ಶೇಕಡಾವಾರು ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳಬೇಕು" ಎಂದು ಹೇಳಿದ್ದರು.