ವಿತ್ತ ಸಚಿವಾಲಯದ ಸಮೀಪ ಆತ್ಮಹತ್ಯೆ ಮಾಡಿಕೊಂಡ ಕಾನ್ಸ್ ಟೇಬಲ್
ನವದೆಹಲಿ, ಜೂನ್ 25: ಕೇಂದ್ರ ಬಜೆಟ್ ತಯಾರಿಯಲ್ಲಿ ವಿತ್ತ ಸಚಿವಾಲಯದ ಸಿಬ್ಬಂದಿ ನಿರತರಾಗಿದ್ದರೆ, ಅವರನ್ನು ಕಾಯಲು ನಿಯೋಜನೆಗೊಂಡಿದ್ದ ಪೊಲೀಸ್ ಪೇದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ(ಜೂನ್ 25)ದಂದು ನಡೆದಿದೆ.
ವಿತ್ತ ಸಚಿವಾಲಯದ ಹೊರಗಡೆ ಕಾರ್ಯ ನಿರ್ವಹಿಸುತ್ತಿದ್ದ ರಾಜಸ್ಥಾನ್ ಸಶಸ್ತ್ರ ಕಾನ್ಸ್ಟಾಬುಲರಿ(ಆರ್ ಎಸಿ) ಕಾನ್ಸ್ ಟೇಬಲ್ ಅವರು ತಮ್ಮ ಬಳಿ ಇದ್ದ ಸರ್ವೀಸ್ ರಿವಾಲ್ವರ್ ನಿಂದ ಗುಂಡಿಕ್ಕಿಕೊಂಡಿದ್ದಾರೆ.
ಕೇಂದ್ರ ಬಜೆಟ್ 2019 : ಮೋದಿ ಕನಸಿನ ಬಜೆಟ್ ವಿನ್ಯಾಸದಲ್ಲಿ ನಿರ್ಮಲಾ ಹಾಗೂ ತಂಡ
ಮೃತ ಕಾನ್ಸ್ ಟೇಬಲ್ ಹೆಸರು ಜೈ ನಾರಾಯಣ್ ಎಂದು ಗುರುತಿಸಲಾಗಿದ್ದು, ಅವರಿಗೆ 48 ವರ್ಷ ವಯಸ್ಸಾಗಿತ್ತು. ವಿತ್ತ ಸಚಿವಾಲಯದ ನಾರ್ಥ್ ಬ್ಲಾಕಿನ ಕಟ್ಟಡದ ಗೇಟ್ 2ರಲ್ಲಿ ಭದ್ರತೆ ಒದಗಿಸಲು ನಿಯೋಜನೆಗೊಂಡಿದ್ದರು. ಮಂಗಳವಾರ ಮಧ್ಯಾಹ್ನ 12.40ರ ಸುಮಾರಿಗೆ ಘಟನೆ ನಡೆದಿದೆ. ಕರ್ತವ್ಯ ನಿರತ ಪೇದೆ ತನ್ನ ಸರ್ವೀಸ್ ರಿವಾಲ್ವರ್ ಬಳಸಿ ಶೂಟ್ ಮಾಡಿಕೊಂಡಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ದೆಹಲಿ ಡಿಸಿಪಿ ಮಧುರ್ ವರ್ಮಾ ಹೇಳಿದ್ದಾರೆ.
ಘಟನೆ ಬಗ್ಗೆ ಸಿಸಿಟಿವಿ ದೃಶ್ಯದಲ್ಲಿ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಇತರೆ ಪೊಲೀಸ್ ಸಿಬ್ಬಂದಿಗಳು ನೆರವಿಗೆ ಧಾವಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಗೆ ಸೇರಿಸುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.