ಎಚ್ಡಿ ದೇವೇಗೌಡ ಕುಟುಂಬದ ನಿಗದಿತ ಅಮರನಾಥ ಯಾತ್ರೆ ರದ್ದು
ಬೆಂಗಳೂರು, ಜು.24: ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಹಾಗೂ ಕುಟುಂಬ ಸದಸ್ಯರು ಬುಧವಾರ ಕೈಗೊಳ್ಳಬೇಕಿದ್ದ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿದೆ.
ಎಚ್ಡಿ ದೇವೇಗೌಡ ಮತ್ತು ಕುಟುಂಬದವರು ಜು.25ರಂದು ಬುಧವಾರ ಅಮರನಾಥ ಯಾತ್ರೆಗೆ ತೆರಳಲು ಉದ್ದೇಶಿಸಿದ್ದರು. ದೇವೇಗೌಡರ ಪತ್ನಿ ಚೆನ್ನಮ್ಮ, ಪುತ್ರ ರೇವಣ್ ಹಾಗೂ ಸೊಸೆ ಭವಾನಿ ಮತ್ತು ಮೊಮ್ಮಕ್ಕಳೊಂದಿಗೆ ಯಾತ್ರೆಗೆ ತೆರಳುವವರಿದ್ದರು. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆಯಿಂದಾಗಿ ಯಾತ್ರೆಯನ್ನು ರದ್ದುಗೊಳಿಸಲಾಗಿದೆ.
ಅಮರನಾಥ ಯಾತ್ರೆ: ಉಧಾಂಪುರ ರೈಲು ಮಾರ್ಗದಲ್ಲಿ ವಿಶೇಷ ಭದ್ರತೆ
ದೇವೇಗೌಡರ ಕುಟುಂಬದವರು ದೇವರು, ಜ್ಯೋತಿಷ್ಯದ ಮೇಲೆ ನಂಬಿಕೆ ಇರಿಸಿದ್ದಾರೆ. ರಾಜ್ಯ ರಾಜಕೀಯದಲ್ಲಿ ಅಸ್ಥಿರತೆಯ ಬಗ್ಗೆ ಭವಿಷ್ಯವಾಣಿಗಳು ಕೇಳಿ ಬರುತ್ತಿದ್ದಂತೆ ದೇವೇಗೌಡರ ಕುಟುಂಬ ಗ್ರಹಣ ದೋಷ ನಿವಾರಣೆಗಾಗಿ ಮಹಾ ಪೂಜೆ ನಡೆಸಲು ನಿರ್ಧರಿಸಿದೆ. ಸುದೀರ್ಘ ಗ್ರಹಣ ಮುಗಿದ ಬೆಳಗಿನ ಜಾವ ಗ್ರಹಣ ದೋಷ ನಿವಾರಣೆಗಾಗಿ ಗವಿ ಗಂಗಾಧರ ದೇಗುಲದಲ್ಲಿ ಶಿವಾರಾಧನೆ, ಹೋಮ, ಯಜ್ಞ ಯಾಗಗಳನ್ನು ನಡೆಸಲಿದ್ದಾರೆ ಎಂದು ಸೋಮಸುಂದರ ದೀಕ್ಷಿತ್ ತಿಳಿಸಿದ್ದರು.
ಪತ್ನಿ ಚೆನ್ನಮ್ಮ ಅವರು ಅಮರನಾಥ ಯಾತ್ರೆ ಮಾಡಬೇಕೆಂಬ ಕುಟುಂಬದವರ ಬಳಿ ವ್ಯಕ್ತಪಡಿಸಿದ್ದರು. ಸದಾ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿರುವ ದೇವೇಗೌಡರು ಪತ್ನಿ ಆಸೆಯನ್ನು ಈಡೇರಿಸಲು ಮುಂದಾಗಿದ್ದರು. ಅದರಂತೆ ದೇವೇಗೌಡರು ಬುಧವಾರ ಬೆಳಗ್ಗೆ ದೆಹಲಿಯಿಂದ ಅಮರನಾಥ ಯಾತ್ರೆ ಮಾಡಲು ನಿರ್ಧರಿಸಿದ್ದರು. ಆದರೆ ಈಗ ಮಳೆಯಿಂದ ಅಮರನಾಥ ಯಾತ್ರೆಯನ್ನು ರದ್ದು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.