ಕಾವೇರಿಗಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ದೇವೇಗೌಡ
ನವ ದೆಹಲಿ, ಮಾರ್ಚ್ 09: ನೀರಾವರಿ, ಮಾಜಿ ಪ್ರಧಾನಿ ದೇವೇಗೌಡರ ಅತ್ಯಂತ ಆಸಕ್ತಿಯ ವಿಷಯ, ಅದರಲ್ಲಿಯೂ ಕಾವೇರಿಯ ವಿಷಯ ಬಂದರೆ ಅವರೊಬ್ಬ ಕಾನೂನು ತಜ್ಞ, ಜಲಸಂಪನ್ಮೂಲ ತಜ್ಞ, ನೀರಾವರಿ ಹೋರಾಟಗಾರ ಎಲ್ಲವೂ ಆಗಿಬಿಡುತ್ತಾರೆ.
ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಇತ್ತೀಚೆಗಷ್ಟೆ ಸುಪ್ರಿಂ ಕೋರ್ಟ್ ತೀರ್ಪು ಬಂದ ಹಿನ್ನೆಲಯಲ್ಲಿ ಅವರು ನಿನ್ನೆ (ಮಾರ್ಚ್ 09)ರಂದು ಕೇಂದ್ರ ಹೆದ್ದಾರಿ ಮತ್ತು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಕಾವೇರಿ ತೀರ್ಪಿಗೆ ಕೇಂದ್ರ ಮರು ಪರಿಶೀಲನಾ ಅರ್ಜಿ ಹಾಕಲಿ: ದೇವೇಗೌಡ ಸಲಹೆ
ನೀರು ನಿರ್ವಹಣಾ ಮಂಡಳಿ ರಚಿಸುವಂತೆ ತಮಿಳುನಾಡು ಸಂಸದರು ಪ್ರತಿಭಟನೆ ಮೂಲಕ ಒತ್ತಡ ಹಾಕುವ ವೇಳೆಯಲ್ಲೇ ಮಾಜಿ ಪ್ರಧಾನಿಗಳು ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದು, ನಿರ್ವಹಣಾ ಮಂಡಳಿ ರಚಿಸುವ ಮುನ್ನಾ ರಾಜ್ಯದ ರೈತರ ಮನವಿಯನ್ನು ಆಲಿಸಿ, ಪರಿಗಣಿಸುವಂತೆ ಮನವಿ ಮಾಡಿದ್ದಾರೆ.
ಮೇಕೆದಾಟು ಯೋಜನೆ, ಏತ ನೀರಾವರಿ ಯೋಜನೆ ಮೂಲಕ ನೀರಾವರಿ ಸೌಲಭ್ಯ ಹಾಗೂ ಕಣಿವೆ ಆಚೆಗೂ ನೀರಾವರಿ ಉದ್ದೇಶಕ್ಕೆ ನೀರು ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ತಿರುವು ಯೋಜನೆಗೆ ಅವಕಾಶ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯನ್ನು ಸಚಿವ ಗಡ್ಕರಿ ಅವರಿಗೆ ಸಲ್ಲಿಸಲಾಗಿದೆ' ಎಂದ ದೇವೇಗೌಡ ಅವರು, ತಮ್ಮ ಮನವಿಗೆ ನಿತಿನ್ ಗಡ್ಕರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ದೇವೇಗೌಡ ಅವರು ನಗರದಲ್ಲಿ ಸುದ್ದಿಗೋಷ್ಠಿ ಕರೆದು ಕಾವೇರಿ ಜಲ ವಿವಾದದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದರು, ಹಾಗೂ ಅಂದೇ ನಿತಿನ್ ಗಡ್ಕರಿ ಅವರನ್ನು ಭೇಟಿ ಆಗಿ ಮನವಿ ಸಲ್ಲಿಸುವುದಾಗಿಯೂ ಭರವಸೆ ನೀಡಿದ್ದರು.