ಸುಶಾಂತ್ ಸಿಂಗ್ ಕತೆಯುಳ್ಳ ನ್ಯಾಯ್ ಚಿತ್ರ ಬಿಡುಗಡೆಗೆ ಹಸಿರು ನಿಶಾನೆ
ನವದೆಹಲಿ, ಜೂನ್ 10: 2020ರಲ್ಲಿ ಮೃತಪಟ್ಟ ಹಿಂದಿ ಚಿತ್ರರಂಗದ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಿಗೂಢತೆ ಕುರಿತ ಚಿತ್ರ ನ್ಯಾಯ್: ದಿ ಜಸ್ಟೀಸ್ ಬಿಡುಗಡೆಗೆ ಇದ್ದ ಅಡ್ಡಿ ಆತಂಕ ದೂರಾಗಿದೆ. ತಮ್ಮ ಪುತ್ರನ ಸಾವಿನ ಕುರಿತ ಚಿತ್ರ ನ್ಯಾಯ್: ದಿ ಜಸ್ಟೀಸ್ ಚಿತ್ರ ಬಿಡುಗಡೆ ಮಾಡದಂತೆ ಸುಶಾಂತ್ ತಂದೆ ಕೃಷ್ಣ ಕಿಶೋರ್ ಸಿಂಗ್ ಅರ್ಜಿ ಸಲ್ಲಿಸಿದ್ದರು. ಆದರೆ, ಬಿಡುಗಡೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ಗುರುವಾರ ನಿರಾಕರಿಸಿದೆ.
ಸುಶಾಂತ್ ವೈಯಕ್ತಿಕ ಜೀವನ, ಹೆಸರು, ಚಿತ್ರಗಳು, ಕ್ಯಾರಿಕೇಚರ್, ಜೀವನಶೈಲಿ ಅಥವಾ ಅವರನ್ನು ಹೋಲುವ ಜೀವನಾಧಾರಿತ ಚಿತ್ರ ಅಥವಾ ಕತೆಯನ್ನು ಹೆಣೆಯುವಂತಿಲ್ಲ, ಅನೇಕ ಮಂದಿ ನನ್ನ ಮಗನ ಸಾವಿನ ಲಾಭವನ್ನು ಅನೇಕರು ಪಡೆದುಕೊಳ್ಳಲು ಹೊರಟಿದ್ದಾರೆ ಎಂದು ಕೃಷ್ಣ ಕಿಶೋರ್ ಸಿಂಗ್ ಅರ್ಜಿಯಲ್ಲಿ ಕೋರಿದ್ದರು. ಆದರೆ, ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ನರುಲಾ ಅವರಿದ್ದ ಪೀಠ ಮಧ್ಯಂತರ ಆದೇಶ ನೀಡಿ, ಚಿತ್ರ ಬಿಡುಗಡೆಗೆ ಹಸಿರು ನಿಶಾನೆ ನೀಡಿದೆ.
''ನ್ಯಾಯ್: ದಿ ಜಸ್ಟೀಸ್'', 'ಸೂಯಿಸೈಡ್ ಆರ್ ಮರ್ಡರ್: ಎ ಸ್ಟಾರ್ ವಾಸ್ ಲಾಸ್ಟ್', 'ಶಶಾಂಕ್' ಹೆಸರಿನ ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ. ನಾಟಕ, ಚಲನಚಿತ್ರ, ವೆಬ್ ಸರಣಿ, ಪುಸ್ತಕ, ಸಂದರ್ಶನ ಅಥವಾ ಇನ್ನಾವುದೇ ರೂಪದಲ್ಲಿ ಪ್ರಕಟವಾಗುವ ವಿಚಾರಗಳು ಸುಶಾಂತ್ ಮತ್ತು ಅವರ ಕುಟುಂಬದ ಪ್ರತಿಷ್ಠೆಗೆ ಧಕ್ಕೆ ತರಬಹುದು ಎಂದು ಸಿಂಗ್ ಪರ ವಕೀಲ ವಿಕಾಸ್ ಸಿಂಗ್ ವಾದಿಸಿದ್ದರು. ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರ ಪರವಾಗಿ ಹಿರಿಯ ವಕೀಲ ಚಂದರ್ ಲಾಲ್ ಮತ್ತು ವಕೀಲ ಹಿರೇನ್ ಕಮೋದ್ ಹಾಜರಿದ್ದರು.