ಸುಪ್ರೀಂ ಕೋರ್ಟನ್ನು ಬಿಜೆಪಿ ಜೇಬಲ್ಲಿಟ್ಟುಕೊಂಡಿದೆಯೆ? : ಕಾಂಗ್ರೆಸ್ ಕಿಡಿ
ನವದೆಹಲಿ, ಫೆಬ್ರವರಿ 9 : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರಿಗೆ ಪಕ್ಷ ತ್ಯಜಿಸುವ ಮತ್ತು ಮಂತ್ರಿಗಿರಿ ನೀಡುವ ಆಮಿಷ ಒಡ್ಡಿದ್ದಾರೆ ಎಂದು ದಾಖಲಾಗಿರುವ ಆಡಿಯೋ ಸೋರಿಕೆ ಆಗುತ್ತಿದ್ದಂತೆ ಕಾಂಗ್ರೆಸ್ ಕೆಂಡಾಮಂಡಲವಾಗಿದೆ.
ಕಾಂಗ್ರೆಸ್ ನ ವಕ್ತಾರರಾದ ರಣದೀಪ್ ಸುರ್ಜೇವಾಲಾ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಅವರು ಶನಿವಾರ ಪತ್ರಿಕಾಗೋಷ್ಠಿ ನಡೆಸಿ, ಯಡಿಯೂರಪ್ಪ ಮತ್ತು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಶರಣಗೌಡ ಹಾಗೂ ಯಡಿಯೂರಪ್ಪ ನಡುವೆ ನಡೆದ ಸಂಭಾಷಣೆ ಏನು?
ಆಡಿಯೋ ಕ್ಲಿಪ್ ನಲ್ಲಿ 18 ಶಾಸಕರ ಬಗ್ಗೆ ಪ್ರಸ್ತಾಪವಿರುವುದು ಸ್ಪಷ್ಟವಾಗಿದೆ. ಪ್ರತಿ ಶಾಸಕರಿಗೆ ಯಡಿಯೂರಪ್ಪನವರು 10 ಕೋಟಿ ರುಪಾಯಿ ನೀಡುವುದಾಗಿ ವಾಗ್ದಾನ ನೀಡಿದ್ದಾರೆ. ಎಲ್ಲ ಸೇರಿ ಹೆಚ್ಚೂ ಕಡಿಮೆ 200 ಕೋಟಿ ರುಪಾಯಿ ಬರುತ್ತದೆ. ಅಲ್ಲದೆ, 12 ಶಾಸಕರಿಗೆ ಮಂತ್ರಿಗಿರಿ ಮತ್ತು 6 ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷಗಿರಿ ನೀಡುವುದಾಗಿ ಹೇಳಿದ್ದಾರೆ ಎಂದು ಕೆಸಿ ವೇಣುಗೋಪಾಲ್ ಆರೋಪಿಸಿದರು.
ಶಾಸಕರು ರಾಜೀನಾಮೆ ನೀಡಿದ ಮೇಲೆ ಎಲ್ಲರ ಚುನಾವಣಾ ಖರ್ಚನ್ನು ಭರಿಸುವುದಾಗಿ ಮಾತು ಕೊಟ್ಟಿದ್ದಾರೆ. ಶಾಸಕರನ್ನು ಅನರ್ಹಗೊಳಿಸದಿರಲು ವಿಧಾನಸಭಾಧ್ಯಕ್ಷರಿಗೆ 50 ಕೋಟಿ ರುಪಾಯಿ ನೀಡುವ ಆಮಿಷ ಒಡ್ಡಿದ್ದಾರೆ. (ಈ ಆರೋಪವನ್ನು ಸಭಾಧ್ಯಕ್ಷರಾದ ರಮೇಶ್ ಕುಮಾರ್ ಅವರೇ ಅಲ್ಲಗಳೆದಿದ್ದಾರೆ. ಯಡಿಯೂರಪ್ಪನವರು ಈ ಮಾತು ಹೇಳಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.) ಯಡಿಯೂರಪ್ಪನವರ ಮುಖಾಂತರ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರೇ ಈ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಆಪರೇಷನ್ ಕಮಲ : ಸ್ಪೀಕರ್ಗೆ ಎಚ್.ಡಿ.ಕುಮಾರಸ್ವಾಮಿ ದೂರು
ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಸುರ್ಜೇವಾಲಾ ಅವರು, ಯಾವ ಸಾಮರ್ಥ್ಯದಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸರ್ವೋಚ್ಚ ನ್ಯಾಯಾಲಯವನ್ನು ಸಂಪರ್ಕಿಸಿ ಕೇಸನ್ನು ಬಗೆಹರಿಸುವುದಾಗಿ ಹೇಳಿದ್ದಾರೆ? ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಯಡಿಯೂರಪ್ಪನವರಿಗೆ ಈರೀತಿ ವಾಗ್ದಾನ ನೀಡಿದ್ದಾರೆಯೆ? ಸುಪ್ರೀಂ ಕೋರ್ಟ್ ಏನು ಬಿಜೆಪಿಯ 'ಜೇಬಿ ದುಕಾನ್' (ಕಿಸೆಯಲ್ಲಿಟ್ಟುಕೊಂಡಿರುವ ಅಂಗಡಿ) ಆಗಿದೆಯೆ ಎಂದು ಪ್ರಶ್ನಿಸಿದರು.
ಬಜೆಟ್ ಮಂಡನೆಯ ನಂತರ ನಡೆಸುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು, ಶರಣಗೌಡ ಮತ್ತು ಯಡಿಯೂರಪ್ಪ ನಡುವೆ ನಡೆದಿದೆಯೆನ್ನಲಾದ ಆಡಿಯೋಗಳನ್ನು ಬಿಡುಗಡೆ ಮಾಡಿ ಇಡೀ ದೇಶದಾದ್ಯಂತ ಸಂಚಲನವೆಬ್ಬಿಸಿದ್ದಾರೆ. ಆದರೆ, ಈ ಆಡಿಯೋವನ್ನು ಕುಮಾರಸ್ವಾಮಿ ಅವರೇ ಪ್ರೊಡ್ಯೂಸ್ ಮಾಡಿದ್ದಾರೆ ಎಂದು ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಈ ಆಡಿಯೋದ ಸತ್ಯಾಸತ್ಯತೆ ಇನ್ನೂ ಬಯಲಾಗಬೇಕಿದೆ. ಆದರೆ, ಅಷ್ಟರಲ್ಲಿಯೇ ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಕ್ ಪ್ರಹಾರ ಆರಂಭಿಸಿದೆ.
ರಾಜ್ಯದ ಜನ ಇನ್ನೆಷ್ಟು ದಿನ ರಾಜಕೀಯ ದೊಂಬರಾಟ ನೋಡಬೇಕು?
ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಸೋತ ರಣದೀಪ್ ಸುರ್ಜೇವಾಲಾ ಅವರು ತೀರ ಹತಾಶರಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ. ಈ ರೀತಿ ಆರೋಪಿಸುವ ಮೊದಲು ಆಡಿಯೋವನ್ನು ಪರೀಕ್ಷೆಗೆ ಒಳಪಡಿಸಬಾರದೆ ಎಂದು ನೆಟ್ಟಿಗರು ಕಾಂಗ್ರೆಸ್ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಶುಕ್ರವಾರ ಕೂಡ ರಪೇಲ್ ಡೀಲ್ ಗೆ ಸಂಬಂಧಿಸಿದಂತೆ, ಪತ್ರವೊಂದರಲ್ಲಿ ಮಾಡಲಾಗಿರುವ ಅಡಿಟಿಪ್ಪಣಿಯನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡದೆ, ಬಿಜೆಪಿ ಮೇಲೆ ಮುಗಿಬಿದ್ದು ಕಾಂಗ್ರೆಸ್ ನಾಯಕರು ಆಕ್ರೋಶಕ್ಕೀಡಾಗಿದ್ದರು.