ದೆಹಲಿ ಗಡಿಯಲ್ಲಿ 60,000 ರೈತರು; ಪರಿಸ್ಥಿತಿ ಕೈಮೀರುವ ಸೂಚನೆ ಕೊಟ್ಟ ಪೊಲೀಸರು
ನವದೆಹಲಿ, ಡಿಸೆಂಬರ್ 15: ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದ್ದು, ದಿನದಿಂದ ದಿನಕ್ಕೆ ಬೇರೆ ಕಡೆಗಳಿಂದ ಪ್ರತಿಭಟನೆಗೆ ಸೇರ್ಪಡೆಯಾಗುತ್ತಿರುವ ರೈತರ ಸಂಖ್ಯೆಯೂ ಏರಿಕೆಯಾಗುತ್ತಿದೆ. "ಗಡಿಯಲ್ಲಿ ರೈತರ ಸಂಖ್ಯೆ ಹೆಚ್ಚುತ್ತಿದ್ದು, ಹೀಗೇ ಮುಂದುವರೆದರೆ ಪರಿಸ್ಥಿತಿ ಕೈಮೀರಲಿದೆ" ಎಂದು ಹರಿಯಾಣ ಪೊಲೀಸರು ತಿಳಿಸಿದ್ದಾರೆ.
ದೆಹಲಿ ಗಡಿ ಪ್ರದೇಶ ಸಿಂಘು ಹಾಗೂ ಟಿಕ್ರಿಯಲ್ಲಿ ಪ್ರತಿಭಟನೆಗೆ ಸುಮಾರು 60,000ಕ್ಕೂ ಹೆಚ್ಚಿನ ರೈತರು ಜಮಾಯಿಸಿದ್ದಾರೆ. ಇನ್ನಷ್ಟು ರೈತರು ಸೇಪರ್ಡೆಯಾಗುವುದಾಗಿ ರೈತ ಮುಖಂಡರು ತಿಳಿಸಿದ್ದಾರೆ. ಹರಿಯಾಣ, ಮಧ್ಯಪ್ರದೇಶ, ಉತ್ತರ ಪ್ರದೇಶದಿಂದ ಮತ್ತಷ್ಟು ರೈತರು ಬರುತ್ತಿರುವ ಸೂಚನೆಯಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪಂಜಾಬ್ ಹಾಗೂ ಹರಿಯಾಣ ಗಡಿಗಳಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ. ಇದಾಗಿಯೂ ಪೊಲೀಸರು ರೈತರ ಸಂಖ್ಯೆ ಏರುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.
ರಸ್ತೆ ಅಪಘಾತ; ಪ್ರತಿಭಟನೆಯಿಂದ ಹಿಂದಿರುಗುತ್ತಿದ್ದ ರೈತರ ಸಾವು
ಗಡಿಯನ್ನು ಸೀಲ್ ಮಾಡಬಹುದು. ಆದರೆ ಜನರ ಓಡಾಟಕ್ಕೆ ಇದರಿಂದ ತೊಂದರೆಯಾಗುತ್ತದೆ. ದೆಹಲಿ ಅಹಮದಾಬಾದ್ ಮತ್ತು ದೆಹಲಿ ಹಿಸಾರ್ ಈ ಎರಡೂ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ. ದೆಹಲಿಗೆ ಬರಬೇಕಾದರೆ ಗ್ರಾಮಗಳ ಮುಖಾಂತರ ಬರಬೇಕಿದೆ ಎಂದು ಮಾಹಿತಿ ನೀಡಿದ್ದಾರೆ ಹರಿಯಾಣ ಡಿಜಿಪಿ ಮನೋಜ್ ಯಾದವ್.
"ನಾವು ರೈತ ಮುಖಂಡರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ದೆಹಲಿ ಗಡಿಯಲ್ಲಿ ಹೆಚ್ಚಿನ ಪ್ರತಿಭಟನಾಕಾರರು ಸೇರದೇ ಇರುವಂತೆ ತಿಳಿಸುತ್ತಿದ್ದೇವೆ. ಪಂಜಾಬ್ ಸರ್ಕಾರಕ್ಕೂ ದೆಹಲಿಗೆ ಹೆಚ್ಚು ಜನರು ಬರದಂತೆ ತಡೆಯಲು ಸೂಚನೆ ನೀಡಿದ್ದೇವೆ. ಚಳಿಗಾಲವಾದ್ದರಿಂದ ಜನರ ಸಂಖ್ಯೆ ಹೆಚ್ಚಾಗದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ಜನ ಹೆಚ್ಚಿದಷ್ಟೂ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಈಗಾಗಲೇ ಅನಾರೋಗ್ಯದಿಂದ 30-40 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ" ಎಂದು ಹೇಳಿದರು.
ಇದು ಒಂದೆಡೆಯ ಪರಿಸ್ಥಿತಿಯಾದರೆ, ಇನ್ನೊಂದೆಡೆ, "ನಾವು ಆರು ತಿಂಗಳಿಗಾಗುವಷ್ಟು ದಿನಸಿ ತಂದಿದ್ದೇವೆ. ಬರಿಗೈಯಲ್ಲಿ ಹಿಂದಿರುಗುವ ಮಾತೇ ಇಲ್ಲ" ಎನ್ನುತ್ತಿದ್ದಾರೆ ರೈತರು. ಸದ್ಯಕ್ಕೆ ಸಿಂಘು ಹಾಗೂ ಟಿಕ್ರಿ ಗಡಿಯಲ್ಲಿನ ನಿಯಂತ್ರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.