ನಾವಿನ್ನು ಮದುವೆಗೆ ಕಾಶ್ಮೀರಿ ಯುವತಿಯರನ್ನು ತರಬಹುದು: ಸಿಎಂ ವಿವಾದಾತ್ಮಕ ಹೇಳಿಕೆ
ನವದೆಹಲಿ, ಆಗಸ್ಟ್ 10: ಜಮ್ಮು ಮತ್ತು ಕಾಶ್ಮೀರದಲ್ಲಿ 370 ಪರಿಚ್ಛೇದದ ರದ್ದತಿಯಿಂದ ಕಾಶ್ಮೀರದ ಹೆಣ್ಣುಮಕ್ಕಳನ್ನು ಮದುವೆಗಾಗಿ ಕರೆತರಲು ಇನ್ನು ಅವಕಾಶ ಸಿಗಲಿದೆ ಎಂದು ಹೇಳುವ ಮೂಲಕ ಹರಿಯಾಣದ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ವಿವಾದ ಸೃಷ್ಟಿಸಿದ್ದಾರೆ.
ಫತೇಹಬಾದ್ನಲ್ಲಿ 'ಬೇಟಿ ಬಚಾವೋ, ಬೇಟಿ ಪಡಾವೋ' ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ಅವರು, 370ನೇ ಪರಿಚ್ಛೇದದ ರದ್ದತಿಯ ನಂತರ ಈಗ ಕಾಶ್ಮೀರದ ಹೆಣ್ಣುಮಕ್ಕಳನ್ನು ಮದುವೆಗೆ ಕರೆತರಲು ಹಾದಿ ಸುಗಮವಾಗಿದೆ ಎಂದು ಹೇಳಿದ್ದಾರೆ.
ಶ್ರೀನಗರದಲ್ಲಿ ಪ್ರತಿಭಟನೆಯೇ ನಡೆದಿಲ್ಲ: ಗೃಹ ಸಚಿವಾಲಯ ಸ್ಪಷ್ಟನೆ
'ನಮ್ಮ ಸಚಿವ ಓಪಿ ಧನಕರ್ ಅವರು ಬಿಹಾರದಿಂದ ಸೊಸೆಯನ್ನು ತರುವುದಾಗಿ ಹೇಳುತ್ತಿದ್ದರು. ಇಂದಿನ ದಿನಗಳಲ್ಲಿ ಜನರು ಕಾಶ್ಮೀರದ ದಾರಿ ಈಗ ಮುಕ್ತಗೊಂಡಿದೆ ಎಂದು ಹೇಳುತ್ತಿದ್ದಾರೆ. ನಾವೀಗ ಕಾಶ್ಮೀರದಿಂದ ಹೆಣ್ಣುಮಕ್ಕಳನ್ನು ಕರೆತರಬಹುದು' ಎಂದು ಖಟ್ಟರ್ ಹೇಳಿದ್ದಾರೆ.
ಖಟ್ಟರ್ ಅವರ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಖಟ್ಟರ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಕಾಶ್ಮೀರಿ ಮಹಿಳೆಯರ ಕುರಿತು ಖಟ್ಟರ್ ನೀಡಿರುವ ಹೇಳಿಕೆ ಆಕ್ಷೇಪಾರ್ಹ. ದುರ್ಬಲ, ಅಭದ್ರ ಮತ್ತು ಶೋಚನೀಯ ವ್ಯಕ್ತಿಯ ತಲೆಯೊಳಗೆ ಆರೆಸ್ಸೆಸ್ ಯಾವ ತರಬೇತಿ ನೀಡಿದೆ ಎನ್ನುವುದು ಇದರಿಂದ ಗೊತ್ತಾಗುತ್ತದೆ. ಮಹಿಳೆಯರು, ಪುರುಷರು ತಮ್ಮ ಅಧೀನದಲ್ಲಿ ಇರಿಸಿಕೊಳ್ಳುವ ವಸ್ತುಗಳಲ್ಲ' ಎಂದು ರಾಹುಲ್ ಕಿಡಿಕಾರಿದ್ದಾರೆ.
ಅಕ್ಟೋಬರ್ 31ರಿಂದ ಜಮ್ಮು-ಕಾಶ್ಮೀರ, ಲಡಾಖ್ ಕೇಂದ್ರಾಡಳಿತ ಪ್ರದೇಶ ಅಸ್ತಿತ್ವಕ್ಕೆ
ಆದರೆ, ಅನೇಕರು ಖಟ್ಟರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹರಿಯಾಣದ ಲಿಂಗಾನುಪಾತದ ಕುರಿತು ಮಾತನಾಡುವಾಗ ರಾಜ್ಯದಲ್ಲಿ ಈ ಅನುಪಾತದಲ್ಲಿ ಇರುವ ತೀವ್ರ ವ್ಯತ್ಯಾಸದ ಬಗ್ಗೆ ಅವರು ಮಾತನಾಡಿದ್ದರು. ಕಾಶ್ಮೀರಿ ಮಹಿಳೆಯರನ್ನು ಮದುವೆಯಾಗಲು ಈಗ ಅವಕಾಶ ಸಿಕ್ಕಂತಾಗಿದೆ ಎಂದು ಜನರು ಹೇಳುತ್ತಿದ್ದಾರೆ ಎಂಬುದನ್ನು ಉಲ್ಲೇಖಿಸಿದ್ದ ಅವರು, ಈ ಹೇಳಿಕೆಗಳನ್ನು ವಿನೋದದ ವಿಚಾರವಾಗಿ ಪ್ರಸ್ತಾಪಿಸಿದ್ದರು ಎಂದು ವಿವರಣೆ ನೀಡಲಾಗಿದೆ.
'ನಾವಿನ್ನು ಬಿಳಿ ಚರ್ಮದ ಕಾಶ್ಮೀರಿ ಹೆಣ್ಣುಮಕ್ಕಳನ್ನು ಮದುವೆಯಾಗಬಹುದು ಎಂದು ಮುಸ್ಲಿಂ ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರದ ನಿರ್ಧಾರದಿಂದ ಖುಷಿಪಡಬೇಕು' ಎನ್ನುವ ಮೂಲಕ ಬಿಜೆಪಿ ಶಾಸಕ ವಿಕ್ರಮ್ ಸಿಂಗ್ ಸೈನಿ ವಿವಾದ ಸೃಷ್ಟಿಸಿದ್ದರು.