ಮಸೂದೆಗಳು ರೈತ ವಿರೋಧಿ ಎಂದೇ ಇಲ್ಲ: ಉಲ್ಟಾ ಹೊಡೆದ ಹರ್ಸಿಮ್ರತ್ ಕೌರ್
ನವದೆಹಲಿ, ಸೆಪ್ಟೆಂಬರ್ 19: ಕೇಂದ್ರ ಸರ್ಕಾರ ಮಂಡಿಸಿದ ಮಸೂದೆಗಳು ರೈತ ವಿರೋಧಿ ಎಂದು ಆರೋಪಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಿರೋಮಣಿ ಅಕಾಲಿ ದಳದ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಈಗ ಉಲ್ಟಾ ಹೊಡೆದಿದ್ದಾರೆ. ತಾವು ಈ ಮಸೂದೆಗಳನ್ನು ರೈತ ವಿರೋಧಿ ಎಂದು ಹೇಳಿಯೇ ಇಲ್ಲ ಎಂದಿದ್ದಾರೆ.
ಟೆಲಿವಿಷನ್ ಸಂದರ್ಶನದಲ್ಲಿ ಮಾತನಾಡಿದ ಅವರು, 'ಅ ಮಸೂದೆಗಳನ್ನು ರೈತ ವಿರೋಧಿ ಎಂದು ನಾನು ಹೇಳುತ್ತಿಲ್ಲ. ಅದನ್ನು ರೈತ ವಿರೋಧಿ ಎನ್ನುತ್ತಿರುವವರು ರೈತರು. ಮುಖ್ಯವಾಗಿ ಇದನ್ನು ಎಲ್ಲರೂ ಸ್ಪಷ್ಟಪಡಿಸಿಕೊಳ್ಳಬೇಕು' ಎಂದು ಹೇಳಿದ್ದಾರೆ.
ಮೂರು ಮಸೂದೆಗಳು ರೈತ ವಿರೋಧಿ ಎಂದು ವೈಯಕ್ತಿಕವಾಗಿ ಅನಿಸುತ್ತಿದೆಯೇ ಎಂಬ ಪ್ರಶ್ನೆಗೆ, ಅದು ಇಲ್ಲಿ ವಿಷಯವೇ ಅಲ್ಲ. ಮಸೂದೆಗಳು ರೈತರ ಪ್ರಯೋಜನಕ್ಕಾಗಿ ಸಂಸತ್ನಲ್ಲಿ ಮಂಡನೆಯಾಗಿವೆ. ಹೀಗಾಗಿ ಅವರು ಅದು ರೈತರ ಒಳ್ಳೆಯದಕ್ಕಾಗಿಯೇ ಬಂದಿವೆ ಎಂದು ನಂಬಲೇಬೇಕು ಎಂದಿದ್ದಾರೆ.
ಆದರೆ ಮೋದಿ ಸರ್ಕಾರದಲ್ಲಿನ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಟ್ವೀಟ್ ಮಾಡಿದ್ದ ಹರ್ಸಿಮ್ರತ್ ಕೌರ್, 'ರೈತ ವಿರೋಧಿ ಸುಗ್ರೀವಾಜ್ಞೆಗಳು ಮತ್ತು ಮಸೂದೆಯನ್ನು ವಿರೋಧಿಸಿ ನಾನು ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದ್ದೇನೆ. ರೈತರ ಹೆಣ್ಣುಮಕ್ಕಳು ಮತ್ತು ಸಹೋದರಿಯರ ಜತೆ ನಿಲ್ಲಲು ಹೆಮ್ಮೆಯಾಗುತ್ತಿದೆ' ಎಂದು ಹೇಳಿದ್ದರು.