ಹಫೀಜ್ ಬಂಧನ ಪಾಕಿಸ್ತಾನದ ಹೊಸ ನಾಟಕ ಎಂದ ಭಾರತ
ನವದೆಹಲಿ, ಜುಲೈ 18: ಮುಂಬೈ ಭಯೋತ್ಪಾದಕ ದಾಳಿ ಸಂಚುಕೋರ, ಲಷ್ಕರ್ ಇ ತೊಯಬಾ ಮುಖಂಡನಾಗಿದ್ದ ಹಫೀಜ್ ಸಯ್ಯದ್ ನನ್ನು ಪಾಕಿಸ್ತಾನ ಬಂಧಿಸಿರುವುದು ಅದರ ಹೊಸ ನಾಟಕ ಎಂದು ಭಾರತ ಲೇವಡಿ ಮಾಡಿದೆ.
ಬುಧವಾರ ಹಫೀಜ್ ಸಯ್ಯದ್ ಬಂಧನಕ್ಕೊಳಗಾದ ಸುದ್ದಿಯ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಹಫೀಜ್ ನನ್ನು ಬಂಧಿಸುತ್ತಿರುವುದು ಇದೇ ಮೊದಲೇನಲ್ಲ. 2001 ರಿಂದ ಒಟ್ಟು 8 ಬಾರಿ ಆತನನ್ನು ಬಂಧಿಸಿ, ಪಾಕಿಸ್ತಾನ ಬಿಡುಗಡೆ ಮಾಡಿದೆ. ಇದು ನಾಟಕ' ಎಂದರು.
ಉಗ್ರ ಹಫೀಜ್ ಕುರಿತ ಟ್ರಂಪ್ ಟ್ವೀಟ್ಗೆ ಅಮೆರಿಕ ಸದನ ಸಮಿತಿ ತಿರುಗೇಟು
ಆತನ್ನು ಬಂಧಿಸುವುದು ದೊಡ್ಡ ವಿಷಯವಲ್ಲ. ಆದರೆ ಈ ಬಾರಿಯಾದರೂ ಆತ ಮಾಡಿದ ಕೃತ್ಯಗಳಿಗೆ ಪಾಕಿಸ್ತಾನ ಶಿಕ್ಷೆ ನೀಡುತ್ತದೆಯೇ ಇಲ್ಲವೇ ಎಂಬುದು ಈಗಿರುವ ಪ್ರಶ್ನೆ ಎಂದು ರವೀಶ್ ಕುಮಾರ್ ಹೇಳಿದ್ದಾರೆ.
ಪುಲ್ವಾಮಾದಲ್ಲಿ ನಲವತ್ತಕ್ಕೂ ಹೆಚ್ಚು ಯೋಧರನ್ನು ಹತ್ಯೆಗೈದ ಹೀನಾತಿಹೀನ ಉಗ್ರದಾಳಿಯ ನಂತರ ಪಾಕಿಸ್ತಾನದ ಮೇಲೆ ಜಾಗತಿಕವಾಗಿ ಒತ್ತಡ ಹೆಚ್ಚಿದೆ. ಈ ದಾಳಿಯ ಸಂಚುಕೋರ ಜೈಶ್ ಇ ಮೊಹಮ್ಮದ್ ನಾಯಕ ಮಸೂದ್ ಅಜರ್ ಪಾಕಿಸ್ತಾನದಲ್ಲೇ ಇರುವುದು ದೃಢವಾಗಿದ್ದು, ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನಕ್ಕೆ ವಿರುದ್ಧ ಇಡೀ ವಿಶ್ವವೂ ಛೀಮಾರಿ ಹಾಕಿತ್ತು. ನಂತರ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಲಾಗಿತ್ತು.
ಮುಂಬೈ ಟೆರರ್ ಅಟ್ಯಾಕ್ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಬಂಧನ
ಈ ಎಲ್ಲ ಬೆಳವಣಿಗೆಯ ನಂತರ ಇದೀಗ 2008 ರ ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯ್ಯದ್ ನನ್ನು ಪಾಕಿಸ್ತಾನ ಬಂಧಿಸಿದೆ. 2008 ರ ನವೆಂಬರ್ 26 ರಂದು ನಡೆದ ಈ ದಾಳಿಯಲ್ಲಿ 168 ಜನ ಪ್ರಾಣ ಕಳೆದುಕೊಂದಿದ್ದರೆ, 400 ಕ್ಕೂ ಹೆಚ್ಚು ಜನ ಗಂಭಿರವಾಗಿ ಗಾಯಗೊಂದಿದ್ದರು. ಮುಂಬೈ ತಾಜ್ ಮತ್ತು ಒಬೆರಾಯ್ ಹೊಟೇಲ್ ಗಳ ಮೇಲೆ ದಾಳಿ ನಡೆದಿತ್ತು.