ದೆಹಲಿಯಲ್ಲಿ ಪಟಾಕಿ ಮಾರಾಟ, ಬಳಕೆ ನಿಷೇಧ ವಿಸ್ತರಣೆ: ಹಸಿರು ನ್ಯಾಯಪೀಠ
ನವದೆಹಲಿ,ಡಿಸೆಂಬರ್ 2: ದೆಹಲಿಯಾದ್ಯಂತ ಪಟಾಕಿ ಮಾರಾಟ ಮತ್ತು ಬಳಕೆ ನಿಷೇಧ ವಿಸ್ತರಣೆ ಮಾಡಿ ಹಸಿರು ನ್ಯಾಯಾಧೀಕರಣ ಆದೇಶ ಹೊರಡಿಸಿದೆ.
ಕೊರೊನಾ ಸೋಂಕು ನಿತ್ಯ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಗಾಳಿಯ ಗುಣಮಟ್ಟ ಕಳಪೆಯಾಗಿರುವ ದೆಹಲಿ ಹಾಗೂ ಸುತ್ತಮತ್ತಲಿನ ನಗರ-ಪಟ್ಟಣಗಳಲ್ಲಿ ಇದೇ ಪರಿಸ್ಥಿತಿ ಎದುರಾಗಿರುವ ಇತರೆ ಕಡೆಯಲ್ಲೂ ಎಲ್ಲ ಬಗೆಯ ಪಟಾಕಿ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣ ನಿಷೇಧಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಪೀಠ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ದೀಪಾವಳಿ; ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯ ಕಡಿಮೆ
ಗಾಳಿಯ ಗುಣಮಟ್ಟ ಮಧ್ಯಮ ಹಂತದಲ್ಲಿರುವ ನಗರ- ಪಟ್ಟಣದಲ್ಲಿ ಮಾತ್ರ ಕ್ರಿಸ್ಮಸ್, ಹೊಸ ವರ್ಷಾಚರಣೆ ಸಂದರ್ಭದಲ್ಲಿ ರಾತ್ರಿ ಕೆಲ ಸಮಯದವರೆಗೆ ಮಾತ್ರ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಲು ಅನುಮತಿ ನೀಡಲಾಗಿದೆ. ಒಂದು ವೇಳೆ ನಿಷೇಧಿತ ಪಟಾಕಿಗಳ ಮಾರಾಟವಾಗುತ್ತಿದ್ದರೆ ಅವುಗಳನ್ನು ಕೂಡಲೇ ವಶಕ್ಕೆ ತೆಗೆದುಕೊಂಡು ಅವರಿಗೆ ದಂಡ ಹಾಕಬೇಕು ಎಂದೂ ಪೀಠ ಎಚ್ಚರಿಸಿದೆ.
ರಾಷ್ಟ್ರೀಯ ಹಸಿರು ನ್ಯಾಯಪೀಠದ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯೆಲ್ ನೇತೃತ್ವದ ಪೀಠ ಈ ಬಗ್ಗೆ ನಿರ್ದೇಶನ ನೀಡಿದೆ.
ಗಾಳಿಯ ಗುಣಮಟ್ಟ ಮಧ್ಯಮ ಪ್ರಮಾಣಕ್ಕಿಂತಲೂ ಕಡಿಮೆ ಇರುವ ನಗರಗಳಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಹಸಿರು ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಬಾರದು ಎಂಬ ಷರತ್ತು ವಿಧಿಸಿದೆ.
ದೆಹಲಿಯಲ್ಲಿ ವಾಯುಗುಣಮಟ್ಟವೂ ಕೂಡ ಚೆನ್ನಾಗಿಲ್ಲ, ಕೊರೊನಾ ಜತೆಗೆ ವಾಯುಮಾಲಿನ್ಯ ಸೇರಿದರೆ ಹಲವು ರೀತಿಯ ಉಸಿರಾಟ ತೊಂದರೆಗಳು ಶುರುವಾಗಬಹುದು ಎಂದು ಅಂದಾಜಿಸಲಾಗಿದೆ.