'ಸಾಮಾನ್ಯ ವಾಟ್ಸಾಪ್ ಬಳಕೆದಾರರು ಹೊಸ ಐಟಿ ನಿಯಮಗಳ ಬಗ್ಗೆ ಭಯಪಡಬೇಕಾಗಿಲ್ಲ' : ರವಿಶಂಕರ್
ನವದೆಹಲಿ, ಮೇ 27: ಗೌಪ್ಯತೆಯ ಹಕ್ಕನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ ಹಾಗೂ ಗೌರವಿಸುತ್ತದೆ. ವಾಟ್ಸಾಪ್ನ ಸಾಮಾನ್ಯ ಬಳಕೆದಾರರು ಹೊಸ ಐಟಿ ನಿಯಮದ ಬಗ್ಗೆ ಭಯಪಡಬೇಕಾಗಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಗುರುವಾರ ಹೇಳಿದ್ದಾರೆ.
ಸರ್ಕಾರದ ಹೊಸ ಐಟಿ ನಿಯಮಗಳು ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಅಸಂವಿಧಾನಿಕ ಎಂದು ಆರೋಪಿಸಿ ಫೇಸ್ಬುಕ್ ಒಡೆತನದ ವಾಟ್ಸಾಪ್ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು ಕೇಂದ್ರದ ಹೊಸ ಐಟಿ ನಿಯಮಗಳನ್ನು ಪ್ರಶ್ನಿಸಿದೆ.
ಸಾಮಾಜಿಕ ಜಾಲತಾಣ ನಿಯಂತ್ರಣಕ್ಕೆ ಕೇಂದ್ರದ ಹೊಸ ಮಾರ್ಗಸೂಚಿ
ಈ ಬೆಳವಣಿಗೆಯ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿ ಟ್ವೀಟ್ ಮಾಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಗೌಪ್ಯತೆಯ ಹಕ್ಕನ್ನು ಸರ್ಕಾರ ಸಂಪೂರ್ಣವಾಗಿ ಪರಿಗಣಿಸುತ್ತದೆ ಹಾಗೂ ಗೌರವಿಸುತ್ತದೆ. ವಾಟ್ಸಾಪ್ನ ಸಾಮಾನ್ಯ ಬಳಕೆದಾರರು ಹೊಸ ನಿಯಮಗಳ ಬಗ್ಗೆ ಭಯಪಡಬೇಕಾಗಿಲ್ಲ. ನಿಯಮಗಳಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ಅಪರಾಧಗಳಿಗೆ ಸಂಬಂಧಿಸಿದ ಸಂದೇಶವನ್ನು ಯಾರು ಮೊದಲು ಹಂಚಿಕೊಂಡಿದ್ದಾರೆ ಎಂಬುದನ್ನು ಕಂಡುಹಿಡಿಯುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಭಾರತದ ಸಾರ್ವಭೌಮತ್ವ, ಸಮಗ್ರತೆ ಮತ್ತು ಸುರಕ್ಷತೆ, ಸಾರ್ವಜನಿಕ ಸುವ್ಯವಸ್ಥೆ, ಅತ್ಯಾಚಾರ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಅಪರಾಧಗಳಿಗೆ ಸಂಬಂಧಿಸಿದ ಈಗಾಗಲೇ ಚಲಾವಣೆಯಲ್ಲಿರುವ ಆಕ್ರಮಣಕಾರಿ ಸಂದೇಶದ ಮೊದಲ ಮೂಲವನ್ನು ಬಹಿರಂಗಪಡಿಸುವ ನಿಟ್ಟಿನಲ್ಲಿ ಈ ಹೊಸ ಐಟಿ ನಿಯಮಗಳು ರೂಪಿಸಲಾಗಿದೆ. ಅದೂ ಕೂಡಾ ಅಪರಾಧ ಕೃತ್ಯ ಎಸಗಿದವರ ಮೂಲ ಪತ್ತೆ ಹೆಚ್ಚಲು ಇತರ ಯಾವುದೇ ದಾರಿಯಿಲ್ಲ ಎಂಬ ಪರಿಸ್ಥಿತಿಯಲ್ಲಿ ಮಾತ್ರ ಈ ಹೊಸ ನಿಯಮದಡಿ ಮೂಲ ಪತ್ತೆಹಚ್ಚಲಾಗುತ್ತದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಮಸ್ಯೆಯನ್ನು ಬಗೆಹರಿಸಲು ಲಕ್ಷಾಂತರ ಭಾರತೀಯ ಬಳಕೆದಾರರಿಗೆ ಸಹಾಯವಾಗಲು ಹೊಸ ನಿಯಮಗಳ ಪ್ರಕಾರ ಸಾಮಾಜಿಕ ಮಾಧ್ಯಮ ಕಂಪೆನಿಗಳು ಭಾರತ ಮೂಲದ ಕುಂದುಕೊರತೆ ಪರಿಹಾರ ಅಧಿಕಾರಿ, ನೋಡಲ್ ಅಧಿಕಾರಿ ಹಾಗೂ ಮತ್ತೋರ್ವ ಅಧಿಕಾರಿಯನ್ನು ನೇಮಿಸುವ ಅಗತ್ಯವಿದೆ ಎಂದು ಕೇಂದ್ರ ಸಚಿವರು ಟ್ವೀಟ್ನಲ್ಲಿ ಮಾಹಿತಿ ನೀಡಿದ್ದಾರೆ.
ಭಾರತದಲ್ಲೇ ಮೊಬೈಲ್ ತಯಾರಿಸಿಲು ಮುಗಿಬಿದ್ದ ಕಂಪನಿಗಳು: 11 ಲಕ್ಷ ಕೋಟಿ ರೂ. ಪ್ರಸ್ತಾಪ
ಹೊಸ ನಿಯಮಗಳನ್ನು ಸಾಮಾಜಿಕ ಮಾಧ್ಯಮಗಳ ದುರುಪಯೋಗ ತಡೆಯಲು ಮಾತ್ರ ರೂಪಿಸಲಾಗಿದೆ. ಪ್ರಶ್ನೆಗಳನ್ನು ಕೇಳುವ ಹಕ್ಕು ಜನರಿಗಿದೆ, ಸರ್ಕಾರ ಟೀಕೆಗಳನ್ನು ಸ್ವಾಗತಿಸುತ್ತದೆ. ಸಾಮಾಜಿಕ ಮಾಧ್ಯಮದ ಸಾಮಾನ್ಯ ಬಳಕೆದಾರರು ಸಾಮಾಜಿಕ ಮಾಧ್ಯಮದ ಮೂಲಕ ದೌರ್ಜನ್ಯಕ್ಕೆ ಒಳಗಾದಾಗ ಈ ನಿಯಮಗಳು ಕಾರ್ಯ ರೂಪಕ್ಕೆ ತರಲಾಗುತ್ತದೆ ಎಂದು ತಿಳಿಸಿದ್ದಾರೆ.
ಹೊಸ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು, 2021 ರ ಫೆಬ್ರವರಿ 25 ರಂದು ಸರ್ಕಾರ ಘೋಷಿಸಿದೆ. ಮೇ 25 ರೊಳಗೆ ಮಾನದಂಡಗಳನ್ನು ಅನುಸರಿಸಲು ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ನಂತಹ ದೊಡ್ಡ ಸಾಮಾಜಿಕ ಮಾಧ್ಯಮ ವೇದಿಕೆಗಳು ಪಾಲಿಸಬೇಕಾಗಿತ್ತು. ಆದರೆ ಈ ನಿಯಮ ಜನ ಸಾಮಾನ್ಯರ ಗೌಪ್ಯತೆಗೆ ಅಪಾಯ ಎಂದು ವಾಟ್ಸಾಪ್ ತನ್ನ ಅರ್ಜಿಯಲ್ಲಿ ಹೈಕೋರ್ಟ್ಗೆ ಹೇಳಿದೆ.
(ಒನ್ಇಂಡಿಯಾ ಸುದ್ದಿ)