ಯಾವುದೇ ಚರ್ಚೆಗೆ ಕೇಂದ್ರ ಸಿದ್ಧವಿಲ್ಲ, ಸದನ ಬರೀ ನೆಪ; ಖರ್ಗೆ ಆರೋಪ
ನವದೆಹಲಿ, ಆಗಸ್ಟ್ 02: "ಕೇಂದ್ರ ಸರ್ಕಾರಕ್ಕೆ ದೇಶದ ಯಾವ ಸಮಸ್ಯೆಗಳ ಕುರಿತು ಚರ್ಚಿಸಲು ಆಸಕ್ತಿಯಿಲ್ಲ" ಎಂದು ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಕಿಡಿಕಾರಿದ್ದಾರೆ.
ದೇಶದಲ್ಲಿ ಅತಿ ಪ್ರಮುಖ ಸಮಸ್ಯೆಯಾಗಿರುವ ಇಂಧನ ಬೆಲೆ ಏರಿಕೆ, ಕೊರೊನಾ ಸೋಂಕು, ಪೆಗಾಸಸ್ ಈ ಯಾವ ವಿಷಯಗಳ ಕುರಿತೂ ಚರ್ಚಿಸಲು ಕೇಂದ್ರ ಸರ್ಕಾರ ಸಿದ್ಧವಿಲ್ಲ ಎಂದು ಸೋಮವಾರ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.
ಸಂಸತ್ ಅಧಿವೇಶನಕ್ಕೂ ಮುನ್ನ ಕಾಂಗ್ರೆಸ್ ಸಮಿತಿ ಬದಲಾವಣೆ!
ಮುಂಗಾರು ಅಧಿವೇಶನ ಆರಂಭವಾಗಿ ಇಷ್ಟುದಿನವಾದರೂ ಲೋಕಸಭೆ ರಾಜ್ಯಸಭೆಯಲ್ಲಿ ಯಾವುದೇ ಚರ್ಚೆ ನಡೆಯುತ್ತಿಲ್ಲ. ಸದನದಲ್ಲಿ ನಿರಂತರ ಗದ್ದಲದಿಂದಾಗಿ ಕಲಾಪಗಳನ್ನು ಮುಂದೂಡುತ್ತಲೇ ಬರಲಾಗಿದೆ.
ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಮಲ್ಲಿಕಾರ್ಜುನ ಖರ್ಗೆ, "ಮೋದಿ ಸರ್ಕಾರ ತಮ್ಮ ಘನತೆಯನ್ನು ಕಳೆದುಕೊಳ್ಳುವ ಅಪಾಯ ಎದುರಾಗಿರುವುದರಿಂದ ಸದನದಲ್ಲಿ ಪೆಗಾಸಸ್ ಗೂಢಚರ್ಯೆ ಪ್ರಕರಣದ ಕುರಿತ ಚರ್ಚೆಯನ್ನು ತಪ್ಪಿಸಲು ನೋಡುತ್ತಿದೆ" ಎಂದು ಆರೋಪಿಸಿದ್ದಾರೆ.
"ದೇಶದಲ್ಲಿ ಬಿಕ್ಕಟ್ಟಿನ ಸಮಸ್ಯೆಗಳನ್ನು ಚರ್ಚಿಸಲು ಮೋದಿ ಸರ್ಕಾರ ಆಸಕ್ತಿ ಹೊಂದಿಲ್ಲ ಮತ್ತು ಕೇವಲ ಮಸೂದೆಗಳನ್ನು ತೆರವುಗೊಳಿಸಲು ಬಯಸಿ ಸದನದ ನೆಪ ಹೂಡಿದೆ ಅಷ್ಟೆ" ಎಂದು ಖರ್ಗೆ ಹೇಳಿದ್ದಾರೆ.
ಮುಂಗಾರು ಅಧಿವೇಶನದಲ್ಲಿ ಸದನಗಳು ನಡೆಯುತ್ತಿಲ್ಲ ಎಂದರೆ ಅದಕ್ಕೆ ಕೇಂದ್ರ ಸರ್ಕಾರವೇ ಕಾರಣ. ತನ್ನನ್ನು ತಾನು ತೆರೆದುಕೊಳ್ಳಲು ಸರ್ಕಾರ ಬಯಸುತ್ತಿಲ್ಲ ಎಂಬುದು ಇದರಿಂದ ಕಾಣುತ್ತಿದೆ ಎಂದು ಹೇಳಿದರು.
ಪೆಗಾಸಸ್ ಕುರಿತು ಚರ್ಚೆ ಆರಂಭವಾದರೆ ಸರ್ಕಾರಕ್ಕೆ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಇದರಿಂದ ಅವರ ಘನತೆ ಕಳೆದುಹೋಗುತ್ತದೆ. ಈ ಕುರಿತು ಚರ್ಚೆಗೆ ಸಿದ್ಧ ಎಂದು ಬರೀ ಬಾಯಿ ಮಾತಿನಲ್ಲಿ ಹೇಳುತ್ತಿದ್ದಾರೆಯೇ ಹೊರತು ಆ ಕೆಲಸವನ್ನು ಕೇಂದ್ರ ಮಾಡುತ್ತಿಲ್ಲ. ಸದನಗಳನ್ನು ಮುಂದೂಡುವ ಮೂಲಕ ಚರ್ಚೆಯನ್ನು ತಪ್ಪಿಸಲು ನೋಡುತ್ತಿದೆ ಎಂದು ಆರೋಪಿಸಿದರು.
"ಇದೇ ರೀತಿ ಸದನ ಮುಂದುವರೆಯಬೇಕೆಂದು ಅವರು ಬಯಸಿದ್ದಾರೆ. ಬರೀ ಮಸೂದೆಗಳನ್ನು ಹೊರಡಿಸುತ್ತಿದ್ದಾರೆ. ದೇಶದ ಸಮಸ್ಯೆಗಳ ಕುರಿತು ಯಾವುದೇ ಚರ್ಚೆಗೆ ಅವಕಾಶ ಮಾಡಿಕೊಡುತ್ತಿಲ್ಲ. ವಿರೋಧ ಪಕ್ಷಗಳ ಮೇಲೆ ನೆಪ ಹೇಳಿಕೊಂಡು ಮುಂದೂಡಿಕೊಂಡು ಬಂದಿದ್ದಾರೆ" ಎಂದರು.
ಈ ಮಧ್ಯೆ ಕಾಂಗ್ರೆಸ್ ಸಂಸದರಾದ ಮಾಣಿಕ್ಕಂ ಟಾಗೋರ್ ಹಾಗೂ ಮನೀಶ್ ತಿವಾರಿ "ಪೆಗಾಸಸ್" ಮಾಧ್ಯಮ ವರದಿ ಕುರಿತು ಪ್ರಧಾನ ಮಂತ್ರಿ ಅಥವಾ ಗೃಹ ಸಚಿವರ ಸಮ್ಮುಖದಲ್ಲಿ ಸದನದಲ್ಲಿ ಚರ್ಚೆ ನಡೆಸಲು ಒತ್ತಾಯಿಸಿದರು.
ಈ ಹಿಂದೆಯೂ ಖರ್ಗೆ ಕೇಂದ್ರ ಸರ್ಕಾರದ ನಡೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಪೆಗಾಸಸ್ ಬೇಹುಗಾರಿಕೆ ಪ್ರಕರಣ ಸಂಬಂಧ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. "ದೇಶದ ಆಡಳಿತದಲ್ಲಿ ಸರ್ವಾಧಿಕಾರಿ ಧೋರಣೆ ಎದ್ದು ಕಾಣುತ್ತಿದೆ. ಈ ಪ್ರಕರಣವನ್ನು ಪ್ರಜಾಪ್ರಭುತ್ವ ಮಾರ್ಗದಲ್ಲಿ ಪರಿಹರಿಸಲು ಕೇಂದ್ರ ಸಿದ್ಧವಿಲ್ಲ" ಎಂದು ಆರೋಪಿಸಿದ್ದರು.
"ಕೇಂದ್ರ ಸರ್ಕಾರವೇ ಪೆಗಾಸಸ್ ಬೇಹುಗಾರಿಕೆಗೆ ಅವಕಾಶ ನೀಡಿದಂತಿದೆ. ನ್ಯಾಯಾಧೀಶರ, ಸೇನಾಧಿಕಾರಿಗಳ, ಪತ್ರಕರ್ತರ, ವಿರೋಧ ಪಕ್ಷಗಳ ನಾಯಕರ ಮೇಲೆ ಕಣ್ಗಾವಲಿಗೆ ಅವಕಾಶ ನೀಡಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. "ದೇಶದಲ್ಲಿ ಸರ್ವಾಧಿಕಾರ, ನಿರಂಕುಶ ಆಡಳಿತವಿದೆ. ಈ ಪ್ರಕರಣವನ್ನು ಪ್ರಜಾಪ್ರಭುತ್ವದ ಮಾರ್ಗದಲ್ಲಿ ನಿರ್ವಹಿಸಲು ಮೋದಿ ಸಿದ್ಧರಿಲ್ಲ. ಈ ವಿಷಯದ ಕುರಿತು ನಾವೆಲ್ಲರೂ ಹೋರಾಟ ಮುಂದುವರೆಸುತ್ತೇವೆ" ಎಂದಿದ್ದರು.
"ಕಣ್ಗಾವಲು ನಡೆಸಲು ಕೇಂದ್ರದ ಅನುಮತಿ ಬೇಕು ಎಂದು ಐಟಿ ಕಾಯ್ದೆ ಹೇಳುತ್ತದೆ. ಕೇಂದ್ರವೇ ಇದಕ್ಕೆ ಅನುಮತಿ ನೀಡಿದಂತೆ ಕಾಣುತ್ತಿದೆ. ವಿಶ್ವದ ಯಾವ ಪ್ರಜಾಪ್ರಭುತ್ವವೂ ಹೀಗೆ ಮಾಡಲು ಸಾಧ್ಯವಿಲ್ಲ. ಈ ಕುರಿತ ಚರ್ಚೆಗೆ ವಿರೋಧ ಪಕ್ಷ ಸಿದ್ಧವಿದೆ. ಕೇಂದ್ರ ಸರ್ವಪಕ್ಷ ಸಭೆ ಕರೆಯಬೇಕು" ಎಂದು ವಾರದ ಹಿಂದೆ ಆಗ್ರಹಿಸಿದ್ದರು. ಇಂದು ಮತ್ತೆ ಅದೇ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಈ ಬಾರಿ ಜುಲೈ 19ರಿಂದ ಮುಂಗಾರು ಅಧಿವೇಶನವನ್ನು ಆರಂಭಿಸಲಾಗಿದ್ದು, ಆಗಸ್ಟ್ 13ರವರೆಗೂ ಸದನ ಮುಂದುವರೆಯಲಿದೆ.