ಹೊಸ ಎಲೆಕ್ಟ್ರಿಕ್ ವಾಹನಗಳನ್ನ ಬಿಡುಗಡೆ ಮಾಡದಂತೆ ಕೇಂದ್ರ ಸರ್ಕಾರ ಸೂಚನೆ
ನವದೆಹಲಿ, ಏಪ್ರಿಲ್ 28 : ಇತ್ತೀಚಿಗೆ ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ ಬೆಂಕಿ ಅವಘಡಗಳು ಹೆಚ್ಚಾಗುತ್ತಿರುವ ಹಿನ್ನಲೆ, ಕೇಂದ್ರ ಸರ್ಕಾರ ಈ ಘಟನೆಗಳ ಸೂಕ್ತ ತನಿಖೆಯಾಗುವವರೆಗೂ ಯಾವುದೇ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡದಂತೆ ಎಲೆಕ್ಟ್ರಿಕ್ ವಾಹನ ಕಂಪನಿಗಳಿಗೆ ಸೂಚಿಸಿದೆ.
ಸೋಮವಾರ ಎಲೆಕ್ಟ್ರಿಕ್ ವಾಹನಗಳು ಬೆಂಕಿಗೆ ಆಹುತಿಯಾಗುತ್ತಿರುವ ಘಟನೆ ಕುರಿತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಸಭೆ ನಡೆಸಿತ್ತು. ಸಭೆಯಲ್ಲಿ ಎಲೆಕ್ಟ್ರಿಕ್ ವಾಹನ ತಯಾರಕರು ಸಹ ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ಹೊಸದಾಗಿ ತಯಾರಿಸಿದ ಯಾವುದೇ ಎಲೆಕ್ಟ್ರಿಕ್ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಡಿ ಎಂದು ತಿಳಿಸಲಾಯಿತು. ಅಲ್ಲದೆ ಎಲ್ಲಾ ಎಲೆಕ್ಟ್ರಿಕ್ ವಾಹನ ತಯಾರಕರು ಸ್ವಯಂ ಪ್ರೇರಣೆಯಿಂದ ಯಾವ ಕಂಪನಿಯ ವಾಹನಗಳು ಬೆಂಕಿಗೆ ಆಹುತಿಯಾಯಿತು ಆ ವಾಹನಗಳ ಎಲ್ಲಾ ಬ್ಯಾಚ್ನ್ನು ಹಿಂಪಡೆದು ಪರಿಶೀಲಿಸುವಂತೆ ಸೂಚಿಸಿದೆ.
Breaking; ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸರ್ಕಾರದ ತಡೆ
ಕಳೆದ ವಾರವಷ್ಟೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡ ಎಲೆಕ್ಟ್ರಿಕ್ ವಾಹನಗಳ ಅಗ್ನಿ ದುರಂತದ ಬಗ್ಗೆ ಪ್ರತಿಕ್ರಿಯಿಸಿದ್ದರು. ದೋಷಯುಕ್ತ ಎಲೆಕ್ಟಿಕ್ ವಾಹನಗಳನ್ನ ತಯಾರಿಸಿದ ಕಂಪನಿಗೆ ಭಾರೀ ಮೊತ್ತದ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಇದಿಷ್ಟೇ ಅಲ್ಲದೆ ಎಲ್ಲಾ ಎಲೆಕ್ಟ್ರಿಕ್ ಕಂಪನಿಗಳ ಪರಿಶೀಲನೆ ನಡೆಸುವಂತೆ ಸಮಿತಿ ಕೂಡ ರಚಿಸಲಾಗಿದೆ. ಹೀಗಾಗಿ ದೋಷಯುಕ್ತ ಎಲೆಕ್ಟ್ರಿಕ್ ವಾಹನಗಳನ್ನ ಸ್ವಯಂಪ್ರೇರಿತವಾಗಿ ಕಂಪನಿಗಳು ವಾಪಾಸ್ ಪಡೆಯಬೇಕು ಎಂದು ಹೇಳಿದ್ದರು.
ಸೋಮವಾರ ನಡೆದ ಸಭೆಯಲ್ಲೂ ಕೂಡ ದೋಷಯುಕ್ತ ಎಲೆಕ್ಟ್ರಿಕ್ ವಾಹನಗಳನ್ನ ಹಿಂಪಡೆಯುವಂತೆ ಪುನರುಚ್ಚರಿಸಲಾಗಿದೆ. ಅಲ್ಲದೆ ಈಗಾಗಲೇ ಮಾರಾವಾದ ವಾಹನಗಳಲ್ಲಿ ಸಮಸ್ಯೆ ಕಂಡುಬಂದರೆ ಕಂಪನಿಗಳು ಹೆಚ್ಚಿನ ನಿಗಾ ತೆಗೆದುಕೊಂಡು ಸರಿಪಡಿಸಿಕೊಂಡುವಂತೆ ಸೂಚಿಸಿದೆ,
ಕಳೆದ ಎರಡು ಮೂರು ತಿಂಗಳುಗಳಲ್ಲಿ ಓಲಾ, ಓಕಿನಾವಾ ಮತ್ತು ಪ್ಯೂರ್ ಎಲೆಕ್ಟ್ರಿಕ್ ವಾಹನಗಳೇ ಹೆಚ್ಚು ಬೆಂಕಿಗೆ ಆಹುತಿಯಾಗಿದೆ. ಈ ದುರಂತದಲ್ಲಿ ನಾಲ್ಕೈದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ಇಷ್ಟೇಲ್ಲಾ ಆದ ನಂತರ ಕೇಂದ್ರ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಿದ್ದು, ಈಗ ಹೊಸ ವಾಹನಗಳನ್ನ ಮಾರುಕಟ್ಟೆಗೆ ತರದಂತೆ ಸೂಚನೆ ನೀಡಿದೆ.