ಲೋಕಸಭೆಯಲ್ಲಿ ತ್ರಿವಳಿ ತಲಾಖ್ ನಿಷೇಧ ವಿಧೇಯಕ ಮಂಡನೆ
ನವದೆಹಲಿ, ಜುಲೈ 25: ಲೋಕಸಭೆಯಲ್ಲಿ ಗುರುವಾರ ವಿವಾದಾತ್ಮಕ ತ್ರಿವಳಿ ತಲಾಖ್ ನಿಷೇಧ ಮಸೂದೆಯನ್ನು ಮಂಡಿಸಲಾಗಿದೆ.
ತ್ರಿವಳಿ ತಲಾಖ್ ಎಂಬುದು ಯಾವುದೇ ಧರ್ಮಕ್ಕೆ ಸಂಬಂಧಿಸಿದ್ದಲ್ಲ, ಬದಲಾಗಿ ಇದು ಲಿಂಗ ಸಮಾನತೆಗೆ ಸಂಬಂಧಿಸಿದ್ದು ಎಂದು ಮಸೂದೆಯನ್ನು ಪರಿಚಯಿಸಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.
ಏನಿದು ತ್ರಿವಳಿ ತಲಾಖ್ ಕಾಯ್ದೆ: ಪ್ರಸ್ತುತ ತಿದ್ದುಪಡಿಯಲ್ಲೇನಿದೆ?
ಪತ್ನಿಯರಿಗೆ ದಿಡೀರ್ ವಿಚ್ಛೇದನ ನೀಡುವ ಈ ತ್ರಿವಳಿ ತಲಾಖ್ ಪದ್ಧತಿಯ ವಿರುದ್ಧ ಕೆಲವು ಮುಸ್ಲಿಂ ಮಹಿಳೆಯರೇ ಧ್ವನಿ ಎತ್ತಿದ್ದರು. ತ್ರಿವಳಿ ತಲಾಖ್ ಅನ್ನು ಅಪರಾಧ ಎಂದು ಪರಿಗಣಿಸಿ, ಲಿಖಿತ ಕಾನೂನಾತ್ಮಕ ದಾಖಲೆಗಳಿಲ್ಲದೆ, ಮೌಖಿಕವಾಗಿ ಅಥವಾ ಎಸ್ ಎಂಎಸ್ ಮೂಲಕ ವಿಚ್ಛೇದನ ನೀಡುವವರಿಗೆ ಜೈಲು ಶಿಕ್ಷೆ ನೀಡುವ ಈ ಕಾಯ್ದೆಯನ್ನು ಇಂದು ಲೋಕಸಭೆಯಲ್ಲಿ ಮಂಡನೆ ಮಾಡಲಾಗಿದೆ. ಕಳೆದ ಜೂನ್ ನಲ್ಲೇ ರವಿಶಂಕರ್ ಪ್ರಸಾದ್ ಈ ಮಸೂದೆಯನ್ನು ಪರಿಚಯಿಸಿದ್ದರು.
ಈಗಾಗಲೇ ಎರಡು ಬಾರಿ ರಾಜ್ಯ ಸಭೆಯಲ್ಲಿ ಒಪ್ಪಿಗೆ ಸಿಗದೆ ಈ ಮಸೂದೆ ಕಾನೂನಾಗಿ ಜಾರಿಗೆ ಬರುವುದಕ್ಕೆ ಸಾಧ್ಯವಾಗಿಲ್ಲ. ಪ್ರಸ್ತುತ ರಾಜ್ಯ ಸಭೆಯಲ್ಲೂ ಒಪ್ಪಿಗೆ ಸಿಗುವ ಸಾಧ್ಯತೆ ಕಡಿಮೆ. ಏಕೆಂದರೆ ಈ ಮಸೂದೆಗೆ ಪರವಾಗಿ ಬಿಜೆಪಿ ಮಿತ್ರ ಪಕ್ಷ ಜೆಡಿಯು ಸಹ ಬೆಂಬಲ ಸೂಚಿಸಿಲ್ಲ.
ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತ ಇರುವುದರಿಂದ ಮಸೂದೆಯನ್ನು ಮಂಡನೆ ಮಾಡಲು ಮತ್ತು ಅದಕ್ಕೆ ಅಧಿವೇಶನದಲ್ಲಿ ಅಂಗೀಕಾರ ದೊರಕಲು ಕಷ್ಟವಾಗಲಿಲ್ಲ. ಆದರೆ ರಾಜ್ಯ ಸಭೆಯಲ್ಲಿ ಆರು ಜನ ಜೆಡಿಯು ಸಂಸದರು ಬಿಜೆಪಿಗೆ ಬೆಂಬಲ ನೀಡದೆ ಇದ್ದಲ್ಲಿ ಸಮಸ್ಯೆಯಾದೀತು. ಸದ್ಯಕ್ಕೆ ರಾಜ್ಯ ಸಭೆಯಲ್ಲಿ ಎನ್ ಡಿಎ ಬಲಾಬಲ 109(245) ಸಂಸದರು. ಆದರೆ ಅಗತ್ಯವಿರುವ ಮತಗಳು 123(245). ಸಂಸದರ ಗೈರನ್ನು ಪರಿಗಣಿಸಿ ಬಿಜೆಪಿಗೆ ಅರ್ಧಕ್ಕಿಂತ ಹೆಚ್ಚು ಮತ ಬೇಕೆಂದರೂ ಜೆಡಿಯು ಬೆಂಬಲ ಅಗತ್ಯ. ಅಕಸ್ಮಾತ್ ಬೆಂಬಲ ದೊರಕದೆ ಇದ್ದಲ್ಲಿ ಮತ್ತೆ ತ್ರಿವಳಿ ತಲಾಖ್ ಮಸೂದೆ ಜಾರಿಗೆ ಬರುವುದಕ್ಕೆ ಸಾಧ್ಯವಾಗಲಾರದು.
ಮುಸ್ಲಿಂ ಪತಿಯು, ತನ್ನ ಪತ್ನಿಗೆ ಮೂರು ಬಾರಿ ತಲಾಖ್ ಎನ್ನುವ ಮೂಲಕ ಯಾವುದೇ ಲಿಖಿತ ದಾಖಲೆಗಳಿಲ್ಲದೆ ವಿಚ್ಛೇದನ ನೀಡುವುದಕ್ಕೆ ತ್ರಿವಳಿ ತಲಾಖ್ ನಲ್ಲಿ ಅವಕಾಶವಿತ್ತು. ಆದರೆ ತ್ರಿವಳಿ ತಲಾಖ್ ನಿಂದಾಗಿ ಮುಸ್ಲಿಂ ಮಹಿಳೆಯರ ಹಕ್ಕನ್ನು ಕಸಿಯಲಾಗುತ್ತಿದೆ, ಮತ್ತು ಅವರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂಬುದನ್ನು ಮನಗಂಡ ಸರ್ಕಾರ, ತ್ರಿವಳಿ ತಲಾಖ್ ಅನ್ನು ಅಪರಾಧವನ್ನಾಗಿ ಪರಿಗಣಿಸುವಂತೆ ಮುಸ್ಲಿಂ ಮಹಿಳೆಯರ ಕಾಯ್ದೆಯಲ್ಲಿ ತಿದ್ದುಪಡಿ ತರಲು ನಿರ್ಧರಿಸಿತ್ತು. 2018 ರ ಡಿಸೆಂಬರ್ ನಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲೂ ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಆದರೆ ರಾಜ್ಯ ಸಭೆಯಲ್ಲಿ ಅದು ಮಂಡನೆಯಾಗಿರಲಿಲ್ಲ. ಆದ್ದರಿಂದ ಈ ಬಾರಿ ಹೊಸ ಮಸೂದೆಯನ್ನು ಪರಿಚಯಿಸಿ, ಮಂಡನೆ ಮಾಡಲಾಗಿದೆ.