15 ಹಿರಿಯ ಅಧಿಕಾರಿಗಳ ಕಡ್ಡಾಯ ನಿವೃತ್ತಿಗೆ ಕೇಂದ್ರ ಸರ್ಕಾರ ಆದೇಶ
ನವದೆಹಲಿ, ಜೂನ್ 18: ಇತ್ತೀಚೆಗಷ್ಟೆ 12 ಸರ್ಕಾರಿ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೆ 15 ಹಿರಿಯ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿಯ ಆದೇಶ ನೀಡಿದೆ.
ಈ ಹದಿನೈದು ಜನರಲ್ಲಿ ಪರೋಕ್ಷ ಮತ್ತು ಕಸ್ಟಮ್ಸ್ ತೆರಿಗೆ ಕೇಂದ್ರ ಮಂಡಳಿ(CBIC)ಯ ಮುಖ್ಯ ಆಯುಕ್ತ, ಆಯುಕ್ತ, ಹೆಚ್ಚುವರಿ ಆಯುಕ್ತ ಮತ್ತು ಉಪ ಆಯುಕ್ತರು ಸೇರಿದ್ದಾರೆ ಎನ್ನಲಾಗಿದೆ.
ಭ್ರಷ್ಟಾಚಾರ ಆರೋಪ: 12 ಐಟಿ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಿದ ಕೇಂದ್ರ
ಅಪರಾಧ ಪಿತೂರಿ ಮತ್ತು ಭ್ರಷ್ಟಾಚಾರ ಆರೋಪದ ಮೇಲೆ ಇವರಿಗೆ ಕಡ್ಡಾಯ ನಿವೃತ್ತಿ ಘೋಷಿಸಲಾಗಿದ್ದು, ಇದು ಕಳೆದ ಒಂದು ವಾರದಲ್ಲಿ ನಡೆದ ಎರಡನೇ ಮಹತ್ವದ ಘಟನೆ ಎನ್ನಿಸಿದೆ.
ಜೂನ್ 10 ರಂದು ಭ್ರಷ್ಟಚಾರ ಮತ್ತು ಲೈಂಗಿಕ ಕಿರುಕುಳದ ಆರೋಪ ಹೊತ್ತಿದ್ದ ಹನ್ನೆರಡು ಮಂದಿ ಹಿರಿಯ ಐಟಿ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಈ ಎಲ್ಲ ಅಧಿಕಾರಿಗಳೂ ಹಣಕಾಸು ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳಾಗಿದ್ದರು. ಹನ್ನೆರಡರಲ್ಲಿ ಎಂಟು ಜನರನ್ನು ಈಗಾಗಲೇ ಸಿಬಿಐ ತನಿಖೆಗೊಳಡಿಸಿದ್ದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಕಡ್ಡಾಯ ನಿವೃತ್ತಿ ತೆಗೆದುಕೊಳ್ಳಲು ಸೂಚನೆ ನೀಡಲಾಗಿತ್ತು. ಸರ್ಕಾರ ಮೊದಲ ಬಾರಿಗೆ ಉನ್ನತಾಧಿಕಾರಿಗಳ ವಿರುದ್ಧ ಇಂಥ ಕ್ರಮ ಕೈಗೊಂಡಿದೆ ಎನ್ನಲಾಗಿತ್ತು.
ಭ್ರಷ್ಟಾಚಾರ ಸಹಿಸೋಲ್ಲ! ಖಡಕ್ ಸಂದೇಶ ನೀಡಿದ ನಿರ್ಮಲಾ ಸೀತಾರಾಮ್
CBIC ಮುಖ್ಯ ಆಯುಕ್ತ ಅನುಪ್ ಶ್ರೀವಾಸ್ತವ್, ಆಯುಕ್ತರಾದ ಅತುಲ್ ದಿಕ್ಷಿತ್, ಸಂಸಾರ್ ಚಂದ್, ಜಿ ಶ್ರೀ ಹರ್ಷ, ವಿಜಯ್ ಬ್ರಿಜ್, ಹೆಚ್ಚುವರಿ ಆಯುಕ್ತರಾದ ಅಶೋಕ್ ಕೆ ಮಹಿಂದಾ, ವೀರೇಂದ್ರ ಕುಮಾರ್ ಅಗರ್ವಾಲ್, ಉಪ ಆಯುಕ್ತರಾದ ಅಮರೇಶ್ ಜೈನ್, ಜಂಟಿ ಆಯುಕ್ತರಾದ ನಳಿನ್ ಕುಮಾರ್, ಸಹಾಯಕ ಆಯುಕ್ತ ಎಸ್ ಎಸ್ ಪಬನಾ, ಎಸ್ ಎಸ್ ಬಿಶ್ತ್ ಮತ್ತು ವಿನೋದ್ ಕುಮಾರ್ ಸಂಗಾ ಅವರಿಗೆ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತೆ ಆದೇಶಿಸಲಾಗಿದೆ.
ಮುಖ್ಯ ಆಯುಕ್ತ ಅನುಪ್ ಶ್ರೀವಾತ್ಸವ್ ವಿರುದ್ಧ ಅವರ ವಿರುದ್ಧ ಗೃಹ ನಿರ್ಮಾಣ ಸೊಸೈಟಿಯಲ್ಲಿ ಅವ್ಯವಹಾರ ನಡೆಸಿ ಮತ್ತು ಅಪರಾಧ ಪಿತೂರಿ ಮತ್ತು ಭ್ರಷ್ಟಾಚಾರ ಪ್ರಕರಣವಿದ್ದರೆ, ಜಂಟಿ ಆಯುಕ್ತ ನಳಿನ್ ಕುಮಾರ್ ವಿರುದ್ಧ ಅಕ್ರಮ ಆಸ್ತಿ ಹೊಂದಿರು ಪ್ರಕರಣ ದಾಖಲಾಗಿತ್ತು. ಈ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ಕಡ್ಡಾಯ ನಿವೃತ್ತಿ ನೀಡಲಾಗಿದೆ.
ಜೊತೆಗೆ ಹೆಚ್ಚುವರಿ ಆಯುಕ್ತ ರಾಜು ಸೇಕರ್, ಉಪ ಆಯುಕ್ತ ಅಶೋಕ್ ಕುಮಾರ್ ಅಸ್ವಾಲ್, ಸಹಾಯಕ ಆಯುಕ್ತ ಮೊಹಮ್ಮದ್ ಅಲ್ತಾಫ್ ಅವರಿಗೂ ಕಡ್ಡಾಯ ನಿವೃತ್ತಿಗೆ ಸೂಚಿಸಲಾಗಿದೆ.
ಕೇಂದ್ರ ನಾಗರಿಕಾ ಸೇವಾ(ಪಿಂಚಣಿ) ನಿಯಮ ರೂಲ್ 56(j) ಅನ್ವಯ ಈ ಆದೇಶ ಹೊರಡಿಸಲಾಗಿದೆ.