ವಿರೋಧಿಗಳನ್ನು ದೂರುವ ಚಾಳಿ ಸರ್ಕಾರಕ್ಕೆ ಅಂಟಿದೆ: ಸಿಂಗ್
ನವದೆಹಲಿ, ಅಕ್ಟೋಬರ್ 17: 'ಎಲ್ಲದಕ್ಕೂ ವಿರೋಧಿಗಳನ್ನು ದೂರುವ ಚಾಳಿ ಸರ್ಕಾರಕ್ಕೆ ಅಂಟಿದೆ' ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಹೇಳಿದರು.
ಇಂದು ಸುದ್ದಿಗೋಷ್ಠಿ ನಡೆಸಿದ ಮನಮೋಹನ್ ಸಿಂಗ್, ಮಹಾರಾಷ್ಟ್ರದ ಪಿಎಂಸಿ ಬ್ಯಾಂಕ್ 16 ಲಕ್ಷ ಹೂಡಿಕೆದಾರರಿಗೆ ಸಮಸ್ಯೆ ಉಂಟುಮಾಡಿರುವ ಉದಾಹರಣೆ ಕೊಟ್ಟು, 'ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರಗಳು ಜನಪರವಾದ ಕ್ರಮಗಳನ್ನು ಕೈಗೊಳ್ಳದೇ ಇರುವುದು ಸಮಸ್ಯೆಯನ್ನು ಹೆಚ್ಚಿಸುತ್ತಿದೆ' ಎಂದರು.
'ಮ.ಮೋ.ಸಿಂಗ್- ರಘುರಾಮ್ ರಾಜನ್ ಕಾಲದಲ್ಲಿ ಬ್ಯಾಂಕ್ ಗಳ ಸ್ಥಿತಿ ಕೆಟ್ಟದಾಗಿತ್ತು'
ಮನಮೋಹನ್ ಸಿಂಗ್ ಹಾಗೂ ರಘುರಾಮ್ ರಾಜನ್ ಕಾಲದಲ್ಲಿ ಬ್ಯಾಂಕ್ ಸ್ಥಿತಿ ಹದಗೆಟ್ಟಿತ್ತು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಕ್ಕೆ ಘನತೆಯಿಂದ ಪ್ರತಿಕ್ರಿಯಿಸಿದ ಮನಮೋಹನ್ ಸಿಂಗ್, 'ನಾನು ಈಗಷ್ಟೆ ಅವರ (ನಿರ್ಮಲಾ ಸೀತಾರಾಮನ್) ಹೇಳಿಕೆ ಗಮನಿಸಿದೆ ಅದರ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ, ಆದರೆ ಕುಸಿಯುತ್ತಿರುವ ಆರ್ಥಿಕತೆಯನ್ನು ಸರಿ ಮಾಡಲು ಸಮಸ್ಯೆಯ ಮೂಲ ಪತ್ತೆಹಚ್ಚುವುದು ಮತ್ತು ಸಮಸ್ಯೆಯ ಮೂಲ ಪತ್ತೆ ಹಚ್ಚುವುದು ಅವಶ್ಯಕ ಎಂದರು.
ಸರ್ಕಾರವು ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ವಿಫಲವಾಗಲು ಸೋತಿದೆ ಹಾಗಾಗಿಯೇ ವಿರೋಧಿಗಳನ್ನು ಸಮಸ್ಯೆಗೆ ಕಾರಣವೆಂದು ದೂಷಿಸಲು ಪ್ರಯತ್ನ ಪಡುತ್ತಿವೆ ಎಂದು ಮನಮೋಹನ್ ಸಿಂಗ್ ಹೇಳಿದರು.
ನಾನು ಅಧಿಕಾರದಲ್ಲಿದ್ದಾಗ ಏನು ನಡೆಯಿತೋ ಅದು ನಡೆಯಿತು, ಆಗಲೂ ಕೆಲವು ಸಮಸ್ಯೆಗಳಿದ್ದವು ಆದರೆ ಎಲ್ಲದಕ್ಕೂ ಯುಪಿಎ ಅನ್ನು ಹೊಣೆ ಮಾಡುವುದು ಸೂಕ್ತವಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೌಮ್ಯವಾಗಿಯೇ ನಿರ್ಮಲಾ ಸೀತಾರಾಮನ್ ಅವರಿಗೆ ಪ್ರತಿಕ್ರಿಯಿಸಿದರು.