ಕೇಂದ್ರ ಸರ್ಕಾರಕ್ಕೆ ಅತಿಯಾದ ಆತ್ಮವಿಶ್ವಾಸ; ರಾಹುಲ್ ಗಾಂಧಿ
ನವದೆಹಲಿ, ಫೆಬ್ರವರಿ 17: ದೇಶದಲ್ಲಿ ಕೊರೊನಾ ಸೋಂಕಿನ ವಿಷಯದಲ್ಲಿ ಕೇಂದ್ರ ಸರ್ಕಾರ ತೀವ್ರ ನಿರ್ಲಕ್ಷ್ಯತನ ಹಾಗೂ ಅತಿಯಾದ ಆತ್ಮವಿಶ್ವಾಸ ತೋರುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಮಂಗಳವಾರ ದೇಶದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಬ್ರೆಜಿಲಿಯನ್ ರೂಪಾಂತರ ಸೋಂಕಿನ ಪ್ರಕರಣಗಳು ಪತ್ತೆಯಾಗಿರುವ ಸುದ್ದಿ ವರದಿಯನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಅವರು, "ದೇಶದಲ್ಲಿ ಕೊರೊನಾ ಪ್ರಕರಣಗಳು ತಗ್ಗುತ್ತಿದ್ದರೂ ಕೊರೊನಾ ಸೋಂಕು ಇನ್ನೂ ಸಂಪೂರ್ಣವಾಗಿ ಹೋಗಿಲ್ಲ" ಎಂದು ಹೇಳಿದ್ದಾರೆ.
ಅಡುಗೆ ಇಂಧನ ಬೆಲೆ ಏರಿಕೆ: ಕೇಂದ್ರದಿಂದ ಜನ ಸಾಮಾನ್ಯರ ಲೂಟಿ ಎಂದ ರಾಹುಲ್
ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ತಗ್ಗುತ್ತಿದ್ದಂತೆ ಲಾಕ್ ಡೌನ್ ಸಮಯ ವಿಧಿಸಲಾಗಿದ್ದ ಕೆಲವು ನಿರ್ಬಂಧಗಳನ್ನು ಹಿಂತೆಗೆದುಕೊಳ್ಳಲಾಗಿದೆ. ಇದೀಗ ದಕ್ಷಿಣ ಆಫ್ರಿಕಾ ಹಾಗೂ ಬ್ರೆಜಿಲಿಯನ್ ರೂಪಾಂತರ ಸೋಂಕಿನ ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿರುವುದಾಗಿ ಸರ್ಕಾರ ಮಂಗಳವಾರ ತಿಳಿಸಿದೆ. ಐದು ಮಂದಿಯಲ್ಲಿ ಈ ರೂಪಾಂತರ ಸೋಂಕು ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಈ ಹೊಸ ರೂಪಾಂತರ ಸೋಂಕು ಮೂಲ ಸೋಂಕಿಗಿಂತ ಅಪಾಯಕಾರಿ ಹಾಗೂ ಅತಿ ವೇಗವಾಗಿ ಹರಡಬಲ್ಲದ್ದಾಗಿದೆ. ಇದಕ್ಕೆ ಪ್ರಸ್ತುತ ಅಭಿವೃದ್ಧಿಯಾಗಿರುವ ಲಸಿಕೆಗಳು ಹೆಚ್ಚು ಪರಿಣಾಮಕಾರಿಯಾಗಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಭಾರತದಲ್ಲಿ ಮಂಗಳವಾರ 11,610 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೂ ಒಟ್ಟು 1.09 ಕೋಟಿ ಮಂದಿ ಸೋಂಕಿಗೆ ಒಳಗಾಗಿದ್ದಾರೆ.