"ಕೃಷಿ ವಲಯದ ವಿರುದ್ಧ ಹೋಗುವ ಪ್ರಶ್ನೆಯೇ ಇಲ್ಲ"
ನವದೆಹಲಿ, ಡಿಸೆಂಬರ್ 15: ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, "ಕೃಷಿ ದೇಶದ ಮುಖ್ಯ ವಲಯ. ಇದರ ವಿರುದ್ಧವಾಗಿ ಕ್ರಮಗಳನ್ನು ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ" ಎಂದಿದ್ದಾರೆ.
ಎಫ್ ಐಸಿಸಿಐನ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, "ಈಚೆಗೆ ಜಾರಿಯಾಗಿರುವ ಕೃಷಿ ಕಾಯ್ದೆಗಳು ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತಂದಿರುವ ಕಾಯ್ದೆಗಳು. ಈ ಕುರಿತು ಸರ್ಕಾರ ಯಾವುದೇ ಮಾತುಕತೆ, ಚರ್ಚೆಗೂ ಸಿದ್ಧ" ಎಂದು ಹೇಳಿದ್ದಾರೆ.
ಲಡಾಖ್ ಅಪ್ರಚೋದಿತ ದಾಳಿ, ಜಗತ್ತಿನ ಬದಲಾವಣೆ ತೋರಿಸುತ್ತದೆ: ರಾಜನಾಥ್ ಸಿಂಗ್
"ಕೃಷಿ ವಲಯದ ವಿರುದ್ಧವಾಗಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ನಾವು ಯಾವಾಗಲೂ ನಮ್ಮ ರೈತ ಸಹೋದರರ ಸಮಸ್ಯೆಗಳನ್ನು ಆಲಿಸಲು ಸಿದ್ಧವಾಗಿದ್ದೇವೆ. ಅವರ ಅನುಮಾನಗಳನ್ನು ಬಗೆಹರಿಸುತ್ತೇವೆ. ನಮ್ಮಿಂದ ಏನು ಸಾಧ್ಯವೋ ಆ ಸವಲತ್ತುಗಳನ್ನು ಒದಗಿಸುವ ಭರವಸೆ ನೀಡುತ್ತೇವೆ. ನಮ್ಮ ಸರ್ಕಾರ ಈ ಕುರಿತು ಮಾತುಕತೆಗೆ ಸದಾ ಸಿದ್ಧವಿದೆ" ಎಂದು ಹೇಳಿದ್ದಾರೆ. ಕೊರೊನಾ ವೈರಸ್ ನ ಅಡ್ಡ ಪರಿಣಾಮವನ್ನೂ ಕೃಷಿ ವಲಯ ಮೆಟ್ಟಿ ನಿಂತಿದೆ. ನಮ್ಮ ಉತ್ಪಾದನೆ ಹಾಗೂ ಸಂಗ್ರಹಣಾ ಮಟ್ಟ ಅತ್ಯುನ್ನತವಾಗಿದೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭ ಕೊರೊನಾ ವೈರಸ್ ಸೋಂಕಿನ ಪರಿಣಾಮ ಹಾಗೂ ದೇಶದ ಆರ್ಥಿಕತೆಯ ಶಕ್ತಿಯ ಕುರಿತೂ ಮಾತನಾಡಿದ ಅವರು, ಈ ಬಾರಿಯ ಹಣಕಾಸು ವರ್ಷದ ಮೊದಲ ಐದು ತಿಂಗಳಿನಲ್ಲಿ ಭಾರತ ಅತಿ ಹೆಚ್ಚಿನ ವಿದೇಶಿ ನೇರ ಹೂಡಿಕೆಯನ್ನು ಪಡೆದುಕೊಂಡಿದೆ. ಕಳೆದ ಹಣಕಾಸು ವರ್ಷಕ್ಕಿಂತ 13% ಹೆಚ್ಚಿನ ಹೂಡಿಕೆಯನ್ನು ಪಡದುಕೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.