ಗೋಧ್ರಾ ಗಲಭೆ: ಜಾಮೀನು ಸಿಕ್ಕರೂ 17 ಮಂದಿ ಗುಜರಾತ್ ಗೆ ಕಾಲಿಡುವಂತಿಲ್ಲ
ನವದೆಹಲಿ, ಜನವರಿ.28: ಗೋಧ್ರಾ ಗಲಭೆ ಪ್ರಕರಣದ 17 ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಸೂಚನೆ ನೀಡಿದೆ.
ಮಂಗಳವಾರ ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠವು ಮಹತ್ವದ ತೀರ್ಪನ್ನು ಹೊರಡಿಸಿದೆ. ನ್ಯಾ. ಎಸ್.ಎ.ಬೋಬ್ದೆ, ನೇತೃತ್ವದ ನ್ಯಾ. ಬಿ.ಆರ್.ಗವೈ, ನ್ಯಾ.ಸೂರ್ಯಕಾಂತ್ ಅವರಿದ್ದ ಪೀಠವು 17 ಅಪರಾಧಿಗಳಿಗೆ ಜಾಮೀನು ನೀಡಿದ್ದು, ಗುಜರಾತ್ ಗೆ ಕಾಲಿಡದಂತೆ ಖಡಕ್ ಎಚ್ಚರಿಕೆ ನೀಡಿದೆ.
ಗೋಧ್ರಾ ಹತ್ಯಾಕಾಂಡ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಸಮಿತಿ ಹೇಳಿದ್ದೇನು?
17 ಅಪರಾಧಿಗಳನ್ನು ಎರಡು ತಂಡಗಳಾಗಿ ವಿಂಗಡಿಸಿರುವ ಸುಪ್ರೀಂಕೋರ್ಟ್ ಒಂದೊಂದು ಗುಂಪಿಗೆ ಒಂದೊಂದು ಷರತ್ತು ವಿಧಿಸಲಾಗಿದೆ. ಒಂದು ಅಪರಾಧಿಗಳ ತಂಡಕ್ಕೆ ಇಂದೋರ್ ನಲ್ಲಿ ವಾಸಿಸಲು ಸೂಚನೆ ನೀಡಲಾಗಿದೆ. ಇನ್ನೊಂದು ಅಪರಾಧಿಗಳ ಗುಂಪು ಮಧ್ಯಪ್ರದೇಶದ ಜಬಲ್ ಪುರ್ ಗೆ ಸ್ಥಳಾಂತರಗೊಳ್ಳುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ತೊಡಗಲು ಸೂಚನೆ:
ಗೋಧ್ರಾ ಗಲಭೆ ಪ್ರಕರಣದ 17 ಅಪರಾಧಿಗಳಿಗೆ ಜಾಮೀನು ನೀಡಿರುವ ಸುಪ್ರೀಂಕೋರ್ಟ್, ಎಲ್ಲ ಅಪರಾಧಿಗಳು ಮಧ್ಯಪ್ರದೇಶದಲ್ಲಿ ವಾಸಿಸಬೇಕು. ಅಲ್ಲಿಯೇ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಕಟ್ಟಪ್ಪಣೆ ಹೊರಡಿಸಿದೆ.
2002ರಲ್ಲಿ ಸರ್ದಾರ್ ಪುರ್ ಗ್ರಾಮದಲ್ಲಿ 33 ಮುಸ್ಲಿಮರನ್ನು ಜೀವಂತವಾಗಿ ಸುಟ್ಟುಹಾಕಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಮಂದಿ ಅಪರಾಧಿಗಳಿಗೆ ಗುಜರಾತ್ ಹೈಕೋರ್ಟ್ ಜೀವಾವಧಿ ಶಿಕ್ಷೆಯನ್ನು ಘೋಷಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಇದೀಗ 17 ಅಪರಾಧಿಗಳಿಗೆ ಜೈಲಿನಿಂದ ಮುಕ್ತಿ ನೀಡಿದೆ.