ಚಾಕು ತೋರಿಸಿ ಬಕ್ರೀದ್ ಮೇಕೆಗಳ ದರೋಡೆ!
ನವದೆಹಲಿ, ಅ. 16 : ಹೆಂಡತಿ ಮಕ್ಕಳನ್ನು ಊರಿಗೆ ಕರೆದುಕೊಂಡು ಹೋಗುವಾಗ ಬಸ್ಸು, ರೈಲು ನಿಲ್ದಾಣದಲ್ಲಿ ನಿಮ್ಮ ಸಾಮಾನುಗಳ ಬಗ್ಗೆ, ಪರ್ಸಿನ ಬಗ್ಗೆ, ಒಡವೆಗಳ ಬಗ್ಗೆ ಎಚ್ಚರಿಕೆಯಿಂದಿರಿ, ಕಳ್ಳರಿದ್ದಾರೆ ಎಚ್ಚರಿಗೆ ಎಂಬ ಬೋರ್ಡ್ ತಗುಲಿ ಹಾಕಿರುತ್ತಾರೆ. ಹಾಗೆಯೆ, ಬಕ್ರೀದ್ ಬಂದಾಗ ನಿಮ್ಮ ಮೇಕೆಗಳ ಬಗ್ಗೆ ಎಚ್ಚರಿಕೆಯಿಂದಿರಿ ಎಂಬ ಸಂದೇಶ ನೀಡುವ ಪ್ರಮೇಯ ಬಂದಿದೆ.
ಏಕೆಂದರೆ, ದುಬಾರಿ ಬೆಲೆ ತೆತ್ತು ಮಾರುಕಟ್ಟೆಯಲ್ಲಿ ಕೊಂಡಿದ್ದ ಮೇಕೆಗಳನ್ನೇ ಕಳ್ಳರು ದೋಚಿ ಪರಾರಿಯಾದರೆ ಏನು ಮಾಡಬೇಕು ಹೇಳಿ? ಬಕ್ರೀದ್ ಸಂದರ್ಭದಲ್ಲಿಯೇ ಬಕ್ರಿಗಳನ್ನು ದರೋಡೆ ಮಾಡಿದರೆ ಹಬ್ಬದ ಸಂದರ್ಭದಲ್ಲಿ ಹೊಟ್ಟೆಗೆ ಏನು ತಿನ್ನುವುದು ಹೇಳಿ? ಇಂಥ ಅನೇಕ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಿವೆ.
ಬಕ್ರೀದ್ ಹಬ್ಬದ ದಿನ ಮಟನ್ ಮಾರಾಟ ಮಾಡಲೆಂದು ಕಸಾಯಿಯೊಬ್ಬ 30 ಸಾವಿರ ರು. ದುಬಾರಿ ಬೆಲೆ ತೆತ್ತು ಕೊಂಡು ತಂದಿದ್ದ ಮೂರು ಪೊಗದಸ್ತಾದ ಮೇಕೆಗಳನ್ನು ಕಳ್ಳರಿ ಚೂರಿ ತೋರಿಸಿ ಕಿತ್ತುಕೊಂಡು ಹೋದ ಘಟನೆ ನವದೆಹಲಿಯ ಪೂರ್ವ ಭಾಗದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಈ ವಿಷಯವನ್ನು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಘಾಜಿಪುರದ ಬಳಿ ಮೇಕೆಗಳನ್ನು ನೂರ್ ಉದ್ದಿನ್ ಎಂಬುವವರು ಮಂಗಳವಾರ ರಾತ್ರಿ ಎಳೆದುಕೊಂಡು ಹೋಗುತ್ತಿದ್ದಾಗ, ಕಾರಿನಲ್ಲಿ ಬಂದ ಪುಂಡರು ಚಾಕು ತೋರಿಸಿ ಮೇಕೆಗಳನ್ನು ತಮ್ಮ ಕಾರಿನಲ್ಲಿ ಎಳೆದುಕೊಂಡು ಪರಾರಿಯಾಗಿದ್ದಾರೆ. ಹೆಚ್ಚು ಲಾಭ ಗಳಿಸೋಣವೆಂದು ನೂರ್ ದುಬಾರಿ ಬೆಲೆ ತೆತ್ತು ತಂದಿದ್ದ ಮೇಕೆಗಳು ಕಳ್ಳರ ಪಾಲಾಗಿವೆ.
ಮೇಕೆ ಕೊಳ್ಳುವವರು ಹೆಚ್ಚಿನ ಎಚ್ಚರಿಕೆಯಿಂದಿರಬೇಕು. ಏಕೆಂದರೆ, ಮೇಕೆಗಳು ಕೇಳರಿಯದ ಬೆಲೆಗೆ ಮಾರಾಟವಾಗುತ್ತಿವೆ. 'ಕ್ಯಾ ಕರೇ' ಅಂತ ಹಲುಬುತ್ತ ಕೇಳಿದ್ದಷ್ಟು ಹಣ ಕೊಟ್ಟು ಮೇಕೆಗಳನ್ನು ಕೊಳ್ಳುತ್ತಿದ್ದಾರೆ. ಪಾಕಿಸ್ತಾನದಲ್ಲಂತೂ ಕೆಲ ಮೇಕೆಗಳ ಬೆಲೆ ಹತ್ತು ಹದಿನೈದು ಲಕ್ಷ ರು. ದಾಟಿದೆ ಎಂದರೆ ಅವುಗಳಿಗಿರುವ ಬೇಡಿಕೆ ಎಂಥದೆಂದು ಊಹಿಸಿ.
ಆದ್ರೆ ಪಾಪ ಈ ಮೇಕೆಗಳ ನಸೀಬು ನೋಡಿ. ಕೊಂಡವರ ಬಳಿ ಹೋದರೂ ಅಷ್ಟೇ, ಕಿತ್ತುಕೊಂಡು ಪರಾರಿಯಾದವರ ಬಳಿ ಹೋದರೂ ಅಷ್ಟೇ!