ಗೋವಾ ರಾಜ್ಯಪಾಲರಾದ ಮೃದುಲಾ ಸಿನ್ಹಾ ಇನ್ನು ನೆನಪು ಮಾತ್ರ
ನವದೆಹಲಿ, ನವೆಂಬರ್.18: ಬಿಜೆಪಿ ಹಿರಿಯ ರಾಜಕಾರಣಿ ಹಾಗೂ ಗೋವಾದ ಮಾಜಿ ರಾಜ್ಯಪಾಲರಾದ ಮೃದುಲಾ ಸಿನ್ಹಾರವರು ಬುಧವಾರ ವಿಧಿವಶರಾಗಿದ್ದಾರೆ. 77 ವರ್ಷದ ಮೃದುಲಾ ಸಿನ್ಹಾ ಅವರು ತಮ್ಮ ಅಮೋಘ ಬರವಣಿಗೆಗಳಿಂದ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.
ಬಿಹಾರದ ಮುಜಾಫರ್ ಪುರ್ ಜಿಲ್ಲೆಯ ಛಪ್ರಾ ಧರಮ್ ಪುರ್ ಗ್ರಾಮದಲ್ಲಿ 1942ರ ನವೆಂಬರ್.27ರಂದು ಮೃದುಲಾ ಸಿನ್ಹಾ ಅವರು ಜನಿಸಿದ್ದರು. ಕಲೆ, ಸಾಹಿತ್ಯ, ರಾಜಕೀಯ ವಲಯಗಳಿಗೆ ಮೃದುಲಾ ಸಿನ್ಹಾ ನೀಡಿರುವ ಕೊಡುಗೆ ಅಪಾರವಾಗಿದೆ. ಬಿಹಾರ ಮೂಲದ ಮೃದುಲಾ ಸಿನ್ಹಾರವರು ಜನಸಂಘ ಕಾಲದಿಂದಲೂ ಭಾರತೀಯ ಜನತಾ ಪಕ್ಷದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಿಜೆಪಿ ಮಹಿಳಾ ಘಟಕದ ಮುಖ್ಯಸ್ಥರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.
ಮಧ್ಯರಾತ್ರಿ ಪ್ರಮಾಣ ವಚನ ಸ್ವೀಕರಿಸಿದ ಗೋವಾ ಸಿಎಂ ಪ್ರಮೋದ್ ಸಾವಂತ್
2014ರ ಆಗಸ್ಟ್.25ರಂದು ಗೋವಾ ರಾಜ್ಯಪಾಲರಾಗಿ ಮೃದುಲಾ ಸಿನ್ಹಾ ನೇಮಕಗೊಂಡರು. ತದನಂತರ ಗೋವಾದ ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಮತ್ತು ಮಾಜಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಹಾಗೂ ಗೋವಾದ ಹಾಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಪ್ರಮಾಣವಚನ ಬೋಧಿಸಿದ್ದರು. ಸರಳ, ಸಜ್ಜನಿಕೆ ಮತ್ತು ಸೌಮ್ಯ ಸ್ವಭಾವದ ಧೀಮಂತ ರಾಜಕಾರಣಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆದಿಯಾಗಿ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ.
|
ಮೃದುಲಾ ಸಿನ್ಹಾ ಸಾವಿಗೆ ಪ್ರಧಾನಿ ಸಂತಾಪ
"ಶ್ರೀಮತಿ ಮೃದುಲಾ ಸಿನ್ಹಾ ಜಿ ಅವರು ಸಾರ್ವಜನಿಕ ವಲಯದಲ್ಲಿ ಸಲ್ಲಿಸಿದ ಸೇವೆಗಳನ್ನು ಮತ್ತು ಅವರ ಪ್ರಯತ್ನಗಳನ್ನು ಸದಾ ಸ್ಮರಿಸಲಾಗುತ್ತದೆ. ಉತ್ತಮ ಬರಹಗಾರರು ಆಗಿದ್ದ ಅವರು, ಸಾಹಿತ್ಯ ಮತ್ತು ಸಂಸ್ಕೃತಿಯ ಜಗತ್ತಿಗೆ ವ್ಯಾಪಕ ಕೊಡುಗೆಗಳನ್ನು ನೀಡಿದ್ದರು. ಅವರ ನಿಧನದಿಂದ ಶೋಕದಲ್ಲಿ ಮುಳುಗಿದ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪ. ಓಂ ಶಾಂತಿ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
|
ಮೃದಲಾ ಸಿನ್ಹಾ ಸಾವಿನ ಬಗ್ಗೆ ಅಮಿತ್ ಶಾ ಸಂತಾಪ
ಗೋವಾ ಮಾಜಿ ಗವರ್ನರ್ ಮತ್ತು ಬಿಜೆಪಿಯ ಹಿರಿಯ ಮುಖಂಡ ಮೃದೂಲಾ ಸಿನ್ಹಾ ಜೀ ಅವರ ಸಾವು ತುಂಬಾ ದುಃಖಕರವಾಗಿದೆ. ಅವರು ತಮ್ಮ ಜೀವನದುದ್ದಕ್ಕೂ ರಾಷ್ಟ್ರ, ಸಮಾಜ ಮತ್ತು ಸಂಘಟನೆಗಾಗಿ ಕೆಲಸ ಮಾಡಿದ್ದರು. ಅವರೊಳಗೆ ಒಬ್ಬ ನುರಿತ ಬರಹಗಾರರಿದ್ದರು. ಅವರು ತಮ್ಮ ಬರಹಗಳನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ. ಅವರ ಕುಟುಂಬಕ್ಕೆ ನನ್ನ ಸಂತಾಪ "ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
|
ಟ್ವಿಟರ್ ನಲ್ಲಿ ಜೆ.ಪಿ. ನಡ್ಡಾ ಸಂತಾಪ
"ಗೋವಾದ ಮಾಜಿ ರಾಜ್ಯಪಾಲರು, ಖ್ಯಾತ ಬರಹಗಾರ ಮತ್ತು ಬಿಜೆಪಿಯ ಹಿರಿಯ ಮುಖಂಡ ಮೃದುಲಾ ಸಿನ್ಹಾ ಜಿ ಅವರ ನಿಧನವು ದುಃಖಕರವಾಗಿದೆ. ಅವರ ಸಾವಿನಿಂದ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಟ್ವೀಟ್ ಮಾಡಿದ್ದಾರೆ.
|
"ಮೃದುಲಾ ಸಾವಿನ ಬಗ್ಗೆ ಗೋವಾ ಸಿಎಂ ಟ್ವೀಟ್"
ಶ್ರೀಮತಿ ಮೃದುಲಾ ಸಿನ್ಹಾ ಅವರ ಸಾವಿನ ಸಾವಿನ ವಿಚಾರ ನಿಜಕ್ಕೂ ಆಘಾತಕಾರಿಯಾಗಿದೆ. ಗೋವಾದ ಮಾಜಿ ರಾಜ್ಯಪಾಲರಾಗಿದ್ದ ಅವರು, ತಳಮಟ್ಟದಿಂದ ಮೇಲೆ ಬಂದವರು. ಕಲೆ ಮತ್ತು ಸಾಹಿತ್ಯದ ಬಗ್ಗೆ ಅಪಾರವಾದ ಆಸಕ್ತಿ ಮತ್ತು ಉತ್ಸಾಹವನ್ನು ಹೊಂದಿದ್ದರು. ವೈಯಕ್ತಿಕವಾಗಿ ನನಗೆ ಅವರು ಯಾವಗಲೂ ತಾಯಿ ಸ್ವರೂಪದಂತೆ ಕಾಣುತ್ತಿದ್ದರು. ಅವರ ಸಾವಿನಿಂದ ಇಡೀ ದೇಶಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಟ್ವಿಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ.