ಭಾರತದ ಸಿಎಜಿ ಆಗಿ ಗಿರೀಶ್ ಚಂದ್ರ ಮುರ್ಮು ನೇಮಕಗೊಳಿಸಿ ಆದೇಶ
ಶ್ರೀನಗರ್, ಆಗಸ್ಟ್.06: ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಗಿರೀಶ್ ಚಂದ್ರ ಮುರ್ಮು ಅವರನ್ನು ಸಿಎಜಿ ಆಗಿ ನೇಮಕಗೊಳಿಸಿ ಕೇಂದ್ರ ಹಣಕಾಸು ಮತ್ತು ಆರ್ಥಿಕ ವ್ಯವಹಾರಗಳ ಸಚಿವಾಲಯವು ಆದೇಶ ಹೊರಡಿಸಿದೆ.
ನವದೆಹಲಿ ರಾಜಭವನದಲ್ಲಿ ಆಗಸ್ಟ್.08ರ ಶನಿವಾರ ಸಿಎಜಿ ಆಗಿ ಗಿರೀಶ್ ಚಂದ್ರ ಮುರ್ಮು ಅವರು ಪ್ರಮಾಣವಚನವನ್ನು ಸ್ವೀಕರಿಸಲಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆಯು ವರದಿ ಮಾಡಿದೆ. ಬುಧವಾರವಷ್ಟೇ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಗಿರೀಶ್ ಚಂದ್ರ ಮುರ್ಮು ರಾಜೀನಾಮೆ ಸಲ್ಲಿಸಿದ್ದರು. ಗುರುವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದರು.
ಮನೋಜ್ ಸಿನ್ಹಾ ಜಮ್ಮು ಕಾಶ್ಮೀರಕ್ಕೆ ನೂತನ ಲೆಫ್ಟಿನೆಂಟ್ ಗವರ್ನರ್
ಇದರ ಬೆನ್ನಲ್ಲೇ ಜಮ್ಮು ಕಾಶ್ಮೀರಕ್ಕೆ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ಮಾಜಿ ಕೇಂದ್ರ ಸಚಿವ ಮನೋಜ್ ಸಿನ್ಹಾ ಅವರನ್ನು ಆಯ್ಕೆ ಮಾಡಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗುರುವಾರ ಬೆಳಗ್ಗೆ ಆದೇಶ ಹೊರಡಿಸಿದ್ದರು.
ಸಿಎಜಿ ಹುದ್ದೆಯ ಬಗ್ಗೆ ಮೊದಲೇ ನಿರೀಕ್ಷೆ:
ಭಾರತದ ಕಂಟ್ರೋಲರ್ ಆಡಿಟರ್ ಜನರಲ್ (ಸಿಎಜಿ) ಹುದ್ದೆಗೆ ಗಿರೀಶ್ ಚಂದ್ರ ಮುರ್ಮು ಅವರ ಹೆಸರು ಮುಂಚೂಣಿಯಲ್ಲಿತ್ತು. 1985 ರ ಬ್ಯಾಚ್ ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ (ಐಎಎಸ್) ಗುಜರಾತ್ ಕೇಡರ್ ಅಧಿಕಾರಿಯಾಗಿದ್ದು, ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗಿರೀಶ್ ಚಂದ್ರ ಮುರ್ಮು ಅವರು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.
Girish Chandra Murmu appointed as the Comptroller & Auditor General of India (CAG): Ministry of Finance
— ANI (@ANI) August 6, 2020
He had stepped down as the Lieutenant Governor of J&K yesterday. pic.twitter.com/LAFgqcEKkb
ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ 2019 ರ ಅಡಿಯಲ್ಲಿ ಹಿಂದಿನ ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಅವರನ್ನು 2019 ರ ಅಕ್ಟೋಬರ್ 31 ರಂದು ಜಮ್ಮು ಮತ್ತು ಕಾಶ್ಮೀರದ ಮೊದಲ ಲೆಫ್ಟಿನೆಂಟ್-ಗವರ್ನರ್ ಆಗಿ ನೇಮಿಸಲಾಯಿತು.