Video: ದೆಹಲಿ ಆಸ್ಪತ್ರೆ ಬಳಿ ಕಾರಿನ ಒಳಗೆ ರೋಗಿ, ಕಾರಿನ ಹೊರಗೆ ಆಕ್ಸಿಜನ್!
ನವದೆಹಲಿ, ಏಪ್ರಿಲ್ 27: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ರಾಷ್ಟ್ರ ರಾಜಧಾನಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಕೊವಿಡ್-19 ಆಸ್ಪತ್ರೆಗಳಲ್ಲಿ ಹಾಸಿಗೆ ಇಲ್ಲ, ಜೀವ ರಕ್ಷಣ ವೈದ್ಯಕೀಯ ಆಮ್ಲಜನಕ ಕೊರತೆ ನೀಗಿಸಲು ಸಾಧ್ಯವಾಗುತ್ತಿಲ್ಲ.
ನವದೆಹಲಿಯಲ್ಲಿ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಕೊವಿಡ್-19 ಸೋಂಕಿತರಿಗೆ ಅಗತ್ಯವಿರುವ ಆಕ್ಸಿಜನ್ ವ್ಯವಸ್ಥೆಯಿಲ್ಲ. ವೈದ್ಯಕೀಯ ಕೇಂದ್ರ, ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಗುತ್ತಿಲ್ಲ. ಈ ಹಿನ್ನೆಲೆ ಗುರುದ್ವಾರದ ಇಂದಿರಾಪುರದಲ್ಲಿ ಇರುವ ಆಕ್ಸಿಜನ್ ಉತ್ಪಾದನೆ ಕೇಂದ್ರದ ಎದುರು ಸೃಷ್ಟಿಯಾದ ದೃಶ್ಯ ಎಂಥವರ ಮನ ಕಲಕುವಂತಿತ್ತು.
ಕೋವಿಡ್ 19: ಕರ್ನಾಟಕ ಸೇರಿ 10 ರಾಜ್ಯಗಳಿಂದ ಶೇ.69.1ರಷ್ಟು ಹೊಸ ಪ್ರಕರಣ
ಕೊರೊನಾವೈರಸ್ ಸೋಂಕಿನಿಂದ ತೀವ್ರ ಉಸಿರಾಟ ತೊಂದರೆ ಎದುರಿಸುತ್ತಿರುವ ರೋಗಿಗಳಿಗೆ ಆಟೋರಿಕ್ಷಾ, ಕಾರಿನಲ್ಲೇ ಕೂರಿಸಿ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾರಿನ ಒಳಗೆ ಸೋಂಕಿತನು ಮಲಗಿದ್ದರೆ, ಅದೇ ಕಾರಿನ ಪಕ್ಕದಲ್ಲಿ ಆಕ್ಸಿಜನ್ ಸಿಲಿಂಡರ್ ಇರಿಸಿದ ದೃಶ್ಯಗಳು ವಾಸ್ತವ ಸ್ಥಿತಿಗೆ ಹಿಡಿದ ಕೈಗನ್ನಡಿ ಎನ್ನುವಂತಿತ್ತು.
|
ದೆಹಲಿಯಲ್ಲಿ ರೋಗಿಗಳಿಗೆ ಬೆಡ್, ಆಕ್ಸಿಜನ್ ಅಲಭ್ಯ
"ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ ನಮ್ಮ ತಂದೆಯ ದೇಹದಲ್ಲಿ ಆಮ್ಲಜನಕ ಪ್ರಮಾಣ ಶೇ.68ರಷ್ಟಿತ್ತು. ತೀವ್ರ ಉಸಿರಾಟ ಸಮಸ್ಯೆ ಎದುರಿಸುತ್ತಿದ್ದ ಅವರ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಗಲಿಲ್ಲ. ಐದಾರು ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಕೂಡಾ ಇರಲಿಲ್ಲ. ನಂತರ ಗುರುದ್ವಾರದಲ್ಲಿ ವೈದ್ಯಕೀಯ ಆಮ್ಲಜನಕ ಸಿಗುತ್ತದೆ ಎಂಬ ಬಗ್ಗೆ ತಿಳಿಯಿತು. ಗುರುದ್ವಾರದಲ್ಲಿ ಆಕ್ಸಿಜನ್ ಅಳವಡಿಸಿದ ಬಳಿಕ ಅವರ ಆರೋಗ್ಯದಲ್ಲಿ ಸ್ಥಿರತೆ ಕಂಡು ಬಂದಿದೆ" ಎಂದು ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಕೊರೊನಾವೈರಸ್ ಸೋಂಕಿತರಿಗೆ ಆಕ್ಸಿಜನ್ ಕೊರತೆ
"ನೀವು ನೋಡುತ್ತಿದ್ದೀರಾ ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯಲ್ಲಿ ರೋಗಿಗಳು ಹೆಚ್ಚು ಹೆಚ್ಚು ಉಸಿರಾಟ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ವೈದ್ಯಕೀಯ ಆಮ್ಲಜನಕ ಕೊರತೆಯಿಂದ ನೂರಾರು ಮಂದಿ ಪ್ರಾಣ ಬಿಟ್ಟಿದ್ದಾರೆ. ನವದೆಹಲಿಯ ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ಆಕ್ಸಿಜನ್ ಅಭಾವ ಹೆಚ್ಚಾಗಿದೆ. ಆಕ್ಸಿಜನ್ ಇಲ್ಲದೇ ಹಿರಿಯರು ಮತ್ತು ಕಿರಿಯ ವಯಸ್ಸಿನವರು ಕೂಡಾ ಬಲಿಯಾಗುತ್ತಿದ್ದಾರೆ. ಈ ಹಿನ್ನೆಲೆ ನಾವು ಈ ಕಾರ್ಯವನ್ನು ಮಾಡುತ್ತಿದ್ದೇವೆ. ಕಳೆದ ಮೂರು ದಿನಗಳಲ್ಲಿ ಸಾವಿನ ದವಡೆಯಲ್ಲಿದ್ದ 1200-1300 ಜನರನ್ನು ರಕ್ಷಿಸಿದ್ದೇವೆ" ಎಂದು ಗುರುದ್ವಾರದ ಅಧ್ಯಕ್ಷ ಗುರ್ ಪ್ರೀತ್ ಸಿಂಗ್ ಹೇಳಿದ್ದಾರೆ.
ಆಮ್ಲಜನಕ ಆಮದು ಮಾಡಿಕೊಳ್ಳುವ ಬಗ್ಗೆ ಸ್ಪಷ್ಟನೆ
ದೆಹಲಿಯಲ್ಲಿ ವೈದ್ಯಕೀಯ ಆಮ್ಲಜನಕ ಕೊರತೆ ನೀಗಿಸುವುದಕ್ಕಾಗಿ 18 ಆಮ್ಲಜನಕ ಟ್ಯಾಂಕರ್ ಮತ್ತು ಆಮ್ಲಜನಕ ಘಟಕಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬ್ಯಾಂಕಾಕ್್ನಿಂದ 18 ಆಮ್ಲಜನಕ ಮತ್ತು ಫ್ರಾನ್ಸ್್ನಿಂದ 21 ಆಮ್ಲಜನಕ ಘಟಕಗಳನ್ನು ತರಿಸಿಕೊಳ್ಳಲಾಗುತ್ತಿದೆ. ಬುಧವಾರ ಈ ಆಮ್ಲಜನಕ ಟ್ಯಾಂಕರ್ ಮತ್ತು ಘಟಕಗಳು ದೆಹಲಿಗೆ ಬಂದು ಸೇರಲಿವೆ ಎಂದು ಹೇಳಿದರು.
ದೆಹಲಿಯಲ್ಲಿ 44 ಆಮ್ಲಜನಕ ಘಟಕ ಸ್ಥಾಪನೆ
ಮೇ ತಿಂಗಳ ಹೊತ್ತಿದೆ ದೆಹಲಿಯಲ್ಲಿ 44 ಹೊಸ ಆಮ್ಲಜನಕ ಘಟಕ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರವು 8 ಆಕ್ಸಿಜನ್ ಘಟಕ ಸ್ಥಾಪಿಸಿದ್ದು, 36 ಘಟಕಗಳನ್ನು ರಾಜ್ಯ ಸರ್ಕಾರದ ವತಿಯಿಂದ ಆರಂಭಿಸಲಾಗುತ್ತದೆ. ದೆಹಲಿಯಲ್ಲಿ ಆಮ್ಲಜನಕ ಕೊರತೆ ನಿಭಾಯಿಸುವ ನಿಟ್ಟಿನಲ್ಲಿ ನೆರವು ನೀಡಿರುವ ಕಾರ್ಖಾನೆಗಳು ಮತ್ತು ಬೇರೆ ರಾಜ್ಯ ಸರ್ಕಾರಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಕೊವಿಡ್-19 ಪ್ರಕರಣಗಳ ಸಂಖ್ಯೆ
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ20,201 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದೇ ದಿನ 380 ಮಂದಿ ಪ್ರಾಣ ಬಿಟ್ಟಿದ್ದು, 22,055 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 10,47,916 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಈವರೆಗೂ 14,628 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಉಳಿದಂತೆ 92,358 ಕೊವಿಡ್-19 ಸಕ್ರಿಯ ಪ್ರಕರಣಗಳ ದಾಖಲಾಗಿವೆ.