ಮಹತ್ವದ ಸಭೆಗೆ ಚಕ್ಕರ್, ಜಿಲೇಬಿ ತಿನ್ನಲು ಹಾಜರ್: ಸಂಸದ ಗಂಭೀರ್ ವಿರುದ್ಧ ಆಕ್ರೋಶ
ನವದೆಹಲಿ, ನವೆಂಬರ್ 16: ರಾಜಧಾನಿ ದೆಹಲಿಯಲ್ಲಿ ವಿಪರೀತ ವಾಯುಮಾಲಿನ್ಯದಿಂದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಾಳಿಯಲ್ಲಿನ ವಿಷಕಾರಿ ಕಣಗಳ ಪ್ರಮಾಣ ಅಪಾಯದ ಮಟ್ಟಕ್ಕೆ ತಲುಪಿದೆ. ಇದನ್ನು ನಿಯಂತ್ರಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಜನ ಜೀವನ ಆತಂಕಕ್ಕೆ ಒಳಗಾಗಿರುವ ಸಂದರ್ಭದಲ್ಲಿ ಜನಪ್ರತಿನಿಧಿಗಳು ಅದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಎದುರಾಗಿದೆ.
ಚಿಂತಾಜನಕ ಸ್ಥಿತಿಗೆ ತಲುಪಿರುವ ವಾಯುಮಾಲಿನ್ಯದ ಸಮಸ್ಯೆ ಕುರಿತು ಚರ್ಚಿಸಲು ಶುಕ್ರವಾರ ಉನ್ನತ ಮಟ್ಟದ ಸಭೆಯನ್ನು ಆಯೋಜಿಸಲಾಗಿತ್ತು. ಆದರೆ ಅದಕ್ಕೆ ಅನೇಕ ಸಂಸದರು ಮತ್ತು ಉನ್ನತ ಅಧಿಕಾರಿಗಳು ಗೈರು ಹಾಜರಾಗಿದ್ದಾರೆ. ಸಭೆಯಲ್ಲಿ ಹಾಜರಾಗಬೇಕಿದ್ದ 29 ಸಂಸದರ ಪೈಕಿ ಕೇವಲ ನಾಲ್ವರು ಸಂಸದರು ಹಾಗೂ ಕೆಲವೇ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಗೆ ಒಳಗಾಗಿದೆ.
ಹೊಸ ಮಾದರಿಯ ಬಾರ್: ಇಲ್ಲಿ ಉಸಿರಾಡಿ ಖುಷಿಯಲ್ಲಿ ತೇಲಾಡಿ!
ಪರಿಸರ ಸಚಿವಾಲಯದ ಅನೇಕ ಅಧಿಕಾರಿಗಳು, ಡಿಡಿಎ ಮತ್ತು ಪಾಲಿಕೆ ಆಯುಕ್ತರುಗಳು ಕೂಡ ಸಭೆಯಿಂದ ದೂರ ಉಳಿದಿದ್ದರು. ಈ ಕುರಿತು ಸೂಕ್ತ ತನಿಖೆ ನಡೆಸಿ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಪರಿಸರ ಸಚಿವ ಪ್ರಕಾಶ ಜಾವಡೇಕರ್ ತಿಳಿಸಿದ್ದಾರೆ.
ನಾಲ್ವರು ಮಾತ್ರ ಹಾಜರಿ
ಈ ಕುರಿತು ಸಭೆ ನಡೆಸಿದ ಸಂಸದೀಯ ಸಮಿತಿಯು ಸಂಸದರು ಹಾಗೂ ಅಧಿಕಾರಿಗಳ ಗೈರುಹಾಜರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಈ ವಿಷಯವನ್ನು ಲೋಕಸಭೆ ಸ್ಪೀಕರ್ ಮುಂದೆ ಕೊಂಡೊಯ್ಯುವುದಾಗಿ ಸಮಿತಿಯ ಕೆಲವು ಸದಸ್ಯರು ತಿಳಿಸಿದ್ದಾರೆ. ಸಮಿತಿಯ ಅಧ್ಯಕ್ಷರಾದ ಬಿಜೆಪಿ ಸಂಸದೆ ಜಗದಾಂಬಿಕಾ ಪಾಲ್, ಬಿಜೆಪಿಯ ಸಿಆರ್ ಪಾಟೀಲ್, ನ್ಯಾಷನಲ್ ಕಾನ್ಫರೆನ್ಸ್ ಸಂಸದ ಹಸ್ನೈನ್ ಮಸೂದಿ ಮತ್ತು ಎಎಪಿಯ ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್ ಸಭೆಗೆ ಹಾಜರಾಗಿದ್ದ ಸಂಸದರು.
ಲಕ್ಷ್ಮಣ್ ಜತೆ ಜಿಲೇಬಿ, ಪೋಹ
ಮುಖ್ಯವಾಗಿ ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಸಭೆಗೆ ಗೈರಾಗಿದ್ದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಮಧ್ಯಪ್ರದೇಶ ಇಂದೋರ್ನಲ್ಲಿ ನಡೆಯುತ್ತಿರುವ ಭಾರತ-ಬಾಂಗ್ಲಾದೇಶ ಕ್ರಿಕೆಟ್ ಟೆಸ್ಟ್ನಲ್ಲಿ ವೀಕ್ಷಕ ವಿವರಣೆಗೆ ತೆರಳಿರುವ ಗೌತಮ್ ಗಂಭೀರ್ ಅವರೊಂದಿಗಿನ ಫೋಟೊವನ್ನು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಲಕ್ಷ್ಮಣ್ ಅವರೊಂದಿಗೆ ನಗುತ್ತಾ ಜಿಲೇಬಿ, ಪೋಹ ತಿನ್ನುವ ಗಂಭೀರ್ ಅವರ ಚಿತ್ರಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಊಟಕ್ಕಾಗಿ ವಿಷಾನಿಲ: ದಿನಾಚರಣೆ ಕಥೆಯಲ್ಲಿ ಮಕ್ಕಳ ವ್ಯಥೆ!
ಹೇಮಾ ಮಾಲಿನಿ ಕೂಡ ಗೈರು
ನಗರಾಭಿವೃದ್ಧಿ ಸಂಸದೀಯ ಸ್ಥಾಯಿ ಸಮಿತಿ ಸಭೆಯ ಪಟ್ಟಿಯಲ್ಲಿ ದೆಹಲಿಯ ಸಂಸದರ ಪೈಕಿ ಗೌತಮ್ ಗಂಭೀರ್ ಅವರ ಹೆಸರು ಮಾತ್ರವಿತ್ತು. ಮಥುರಾದ ಸಂಸದ, ನಟಿ ಹೇಮಾ ಮಾಲಿನಿ ಕೂಡ ಸಭೆಗೆ ಗೈರಾಗಿದ್ದರು. ಗಂಭೀರ ಸಮಸ್ಯೆ ಎದುರಾಗಿರುವಾಗ ಸಭೆಯಲ್ಲಿ ಪಾಲ್ಗೊಳ್ಳದೆ ಕ್ರಿಕೆಟ್ ಕಾಮೆಂಟರಿ ಮಾಡಲು ಹೋಗಿದ್ದ ಗಂಭೀರ್ ಅವರ ವಿರುದ್ಧ ಆಮ್ ಆದ್ಮಿ ಪಕ್ಷ ವಾಗ್ದಾಳಿ ನಡೆಸಿದೆ.
ಸಮಯ ಸಿಗದಿರುವುದು ದುರದೃಷ್ಟಕರ
ರಾಜಕೀಯದಲ್ಲಿ ವಾರ ಎನ್ನುವುದು ಸುದೀರ್ಘ ಸಮಯ. ಆದರೆ ಅದು ಗೌತಮ್ ಗಂಭೀರ್ ಅವರಿಗಲ್ಲ. ಅವರು ತಮ್ಮ ಪ್ರಾಥಮಿಕ ಆಯ್ಕೆಯಾದ ಕ್ರಿಕೆಟ್ನಿಂದ ಹೊರಬರಲು ಇನ್ನಷ್ಟು ಸಮಯ ಬೇಕು. ವಾಯು ಮಾಲಿನ್ಯ ಕುರಿತಾಗಿ ನಗರಾಭಿವೃದ್ಧಿ ಸಮಿತಿ ಸಭೆಯ ಸಭೆ ಬಗ್ಗೆ ಒಂದು ವಾರದ ಹಿಂದೆಯೇ ಅವರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಗೌರವಾನ್ವಿತ ಸಂಸದರಿಗೆ ಅದಕ್ಕಾಗಿ ಸಮಯ ಹೊಂದಿಸಿಕೊಳ್ಳಲು ಸಾಧ್ಯವಾಗದೆ ಇರುವುದು ದುರದೃಷ್ಟಕರ.
ಜನರು ಮುಖ ಮುಚ್ಚಿಕೊಳ್ಳದೇ ವಿಧಿಯಿಲ್ಲ: ಯಾರಿಗೆ ಹೇಳೋಣಾ ಇವರ ಪ್ರಾಬ್ಲಮ್?
ಗಂಭೀರ್ಗೆ ಎಎಪಿ ಸವಾಲು
ಕಾಮೆಂಟರಿ ಬಾಕ್ಸ್ನಲ್ಲಿ ಕುಳಿತು ಮಜಾ ಮಾಡುವ ಬದಲು, ಮಾಲಿನ್ಯದ ಕುರಿತು ಆರೋಪ ಮಾಡುವ ಆಟವನ್ನು ನಿಲ್ಲಿಸಿ ಅವರು ಗೈರಾಗಿದ್ದ ವಾಯು ಮಾಲಿನ್ಯದ ಸಭೆಗಳಿಗೆ ಹಾಜರಾಗುವಂತೆ ಗೌತಮ್ ಗಂಭೀರ್ ಅವರಿಗೆ ನಾವು ಸವಾಲು ಹಾಕುತ್ತೇವೆ. ಇದು ನ್ಯಾಯಾಂಗ ನಿಂದನೆ. ಎಲ್ಲ ಗೈರುಹಾಜರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಎಎಪಿ, 'ಶೇಮ್ ಆನ್ ಗೌತಮ್ ಗಂಭೀರ್' ಎಂದು ಟೀಕಿಸಿದೆ.
ಆರೋಪ ಮಾಡೋದಾದರೆ ಮಾಡಿ
ತಮ್ಮ ವಿರುದ್ಧ ಆಕ್ರೋಶ ವ್ಯಕ್ತವಾದ ಬಳಿಕ ಗೌತಮ್ ಗಂಭೀರ್ ಶುಕ್ರವಾರ ಸಂಜೆ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ ನೀಡಿದ್ದು, ನನ್ನ ಕೆಲಸವೇ ಮಾತನಾಡುತ್ತದೆ. ನನ್ನನ್ನು ಟೀಕಿಸುವುದರಿಂದ ದೆಹಲಿ ಮಾಲಿನ್ಯ ಮಟ್ಟ ಕಡಿಮೆಯಾಗುತ್ತದೆ ಎಂದರೆ ಎಎಪಿ ಅದನ್ನು ಮುಂದುವರಿಸಲು ಮುಕ್ತವಾಗಿದೆ ಎಂದು ಸುದೀರ್ಘ ಹೇಳಿಕೆ ನೀಡಿದ್ದಾರೆ.
ಎಎಪಿ ಸರ್ಕಾರದ ವಿರುದ್ಧ ಆರೋಪ
ಇದಕ್ಕೂ ಮುನ್ನ ನ.1ರಂದು ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ದೆಹಲಿ ಸಂಕಷ್ಟದಲ್ಲಿದೆ ಆದರೆ ಅರವಿಂದ್ ಕೇಜ್ರಿವಾಲ್ ಸುದ್ದಿಗೋಷ್ಠಿಗಳಲ್ಲಿ ಬಿಜಿಯಾಗಿದ್ದಾರೆ. ಇಡಿಎಂಸಿ ಮಾಲಿನ್ಯ ಹತ್ತಿಕ್ಕಲು 70 ಕೋಟಿಗೆ 52 ಸೂಪರ್ ಮೆಷಿನ್ಗಳನ್ನು ಖರೀದಿಸಿದೆ. ಡಿಡಿಎ ಬೃಹತ್ ವನಮಹೋತ್ಸವ ನಡೆಸುತ್ತಿದಿದೆ ಎಂದಿದ್ದ ಗಂಭೀರ್, ವಾಯುಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಏನನ್ನೂ ಮಾಡುತ್ತಿಲ್ಲ ಎಂದು ಆರೋಪಿಸಿದ್ದರು.