ಗಾಂಧಿ ಕುಟುಂಬಕ್ಕೆ ಏಕಿಲ್ಲ SPG ಸೌಲಭ್ಯ: ರಾಜ್ಯಸಭೆಯಲ್ಲೂ ಇದೇ ಚರ್ಚೆ
ನವದೆಹಲಿ, ನವೆಂಬರ್.20: ಕಾಂಗ್ರೆಸ್ ವಿರುದ್ಧ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರಿಗೆ ನೀಡಿದ್ದ ವಿಶೇಷ ಭದ್ರತಾ ಸೌಲಭ್ಯ ವಾಪಸ್ ಪಡೆದಿದ್ದಕ್ಕೆ ಕಾಂಗ್ರೆಸ್ ಕೆರಳಿದೆ. ಚಿಂತಕರ ಚಾವಡಿ ಎನಿಸಿರುವ ಸಂಸತ್ ಮೇಲ್ಮನೆಯಲ್ಲೂ ಇದೇ ವಿಚಾರ ಪ್ರಸ್ತಾಪವಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ನವೆಂಬರ್.8ರಂದು ಗಾಂಧಿ ಕುಟುಂಬದ ಮೂವರಿಗೆ ನೀಡಿದ್ದ ವಿಶೇಷ ಭದ್ರತಾ ಸೌಲಭ್ಯವನ್ನು ವಾಪಸ್ ಪಡೆಯುವುದಾಗಿ ತಿಳಿಸಿತ್ತು. ಇದೇ ವೇಳೆ ಎಸ್ ಪಿಜಿ ಸೌಲಭ್ಯದ ಬದಲು ಝೆಡ್ ಪ್ಲಸ್ ಭದ್ರತೆ ನೀಡುವುದಾಗಿ ತಿಳಿಸಿತ್ತು.
ಗಾಂಧಿ ಕುಟುಂಬ ಇಷ್ಟೊಂದು ಬಾರಿ ಎಸ್ಪಿಜಿ ನಿಯಮ ಉಲ್ಲಂಘಿಸಿತ್ತಾ!
ಇಂದು ರಾಜ್ಯಸಭೆಯಲ್ಲಿ ನಡಾವಳಿ ಸೂಚನಾ ಪತ್ರದ ಮೇಲಿನ ಚರ್ಚೆಗೆ ಕಾಂಗ್ರೆಸ್ ಮುಂದೂಡಿದೆ. ಅದರ ಬದಲಿಗೆ ರಾಜ್ಯಸಭಾ 267ನೇ ನಿಯಮದಡಿ ಗಾಂಧಿ ಕುಟುಂಬದ ಮೂವರಿಗೆ ನೀಡಿದ್ದ ಎಸ್ ಪಿಜಿ ಸೌಲಭ್ಯ ವಾಪಸ್ ಪಡೆದಿದ್ದರ ಬಗ್ಗೆ ಚರ್ಚಿಸಲು ಅನುಮತಿ ಕೋರಲಾಯಿತು.
ಯುಪಿಎ ಸರ್ಕಾರದ ಅವಧಿಯಲ್ಲಿ ಹೀಗೆ ಆಗಿರಲಿಲ್ಲ
ರಾಜ್ಯಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಆನಂದ್ ಶರ್ಮ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಅವರಿಗೆ ನೀಡಿದ ವಿಶೇಷ ಭದ್ರತೆ ಸೌಲಭ್ಯ ವಾಪಸ್ ಪಡೆಯಲಾಗಿದೆ. ಈ ಹಿಂದಿನ ಯುಪಿಎ ಸರ್ಕಾರ, ಗಣ್ಯ ವ್ಯಕ್ತಿಗಳ ಭದ್ರತೆಗೆ ಹೆಚ್ಚಿನ ಒತ್ತು ನೀಡುತ್ತಿತ್ತು. ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಯಾವುದೇ ನಾಯಕರಿಗೆ ನೀಡಿದ್ದ ಭದ್ರತೆ ವಾಪಸ್ ತೆಗೆದುಕೊಂಡಿರಲಿಲ್ಲ ಎಂದರು.
ರಾಜಕಾರಣವೇ ಬೇರೆ, ಭದ್ರತೆ ವಿಚಾರವೇ ಬೇರೆ!
ಕೇಂದ್ರ ಸರ್ಕಾರ ರಾಜಕಾರಣಕ್ಕಾಗಿ ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್ ಪಿಜಿ ಸೌಲಭ್ಯವನ್ನು ವಾಪಸ್ ಪಡೆದುಕೊಂಡಿದೆ ಎಂದು ಆನಂದ್ ಶರ್ಮಾ ಆರೋಪಿಸಿದ್ದಾರೆ. ದೇಶದ ಹಿರಿಯ ನಾಯಕರ ಭದ್ರತೆ ವಿಚಾರ ರಾಜಕಾರಣವನ್ನು ಮೀರಿದ್ದಾಗಿದೆ. ಆದರೆ, ಎನ್ ಡಿಎ ಸರ್ಕಾರ ಭದ್ರತೆ ವಿಚಾರದಲ್ಲೂ ರಾಜಕಾರಣ ಮಾಡುತ್ತಿದೆ. ಹೀಗಾಗಿ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಅವರ ಪತ್ನಿ ಆಗಿರುವ ಸೋನಿಯಾ ಗಾಂಧಿ ಹಾಗೂ ಅವರ ಮಕ್ಕಳಿಗೆ ನೀಡಿದ ಭದ್ರತೆಯನ್ನು ವಾಪಸ್ ಪಡೆದಿದೆ ಎಂದು ಆನಂದ್ ಶರ್ಮಾ ದೂರಿದ್ದಾರೆ.
ಪ್ರಧಾನಮಂತ್ರಿ ಮೋದಿ ರಕ್ಷಣಾ ಕೋಟೆ ಎಸ್ ಪಿಜಿ ಬಗ್ಗೆ ನಿಮಗೆಷ್ಟು ಗೊತ್ತು?
ಎಸ್ ಪಿಜಿ ವಿಚಾರದಲ್ಲಿ ರಾಜಕಾರಣ ನಡೆದಿಲ್ಲ
ಎಸ್ ಪಿಜಿ ಭದ್ರತೆ ವಿಚಾರದಲ್ಲಿ ಯಾವುದೇ ರಾಜಕಾರಣ ನಡೆದಿಲ್ಲ ಎಂದು ಬಿಜೆಪಿ ಮುಖಂಡರಾದ ಸುಬ್ರಮಣ್ಯಸ್ವಾಮಿ, ಜೆ.ಪಿ.ನಡ್ಡಾ ಹೇಳಿದ್ದರು. ಅಸಲಿಗೆ ಎಸ್ ಪಿಜಿ ಭದ್ರತೆ ನೀಡುವ ಮೊದಲು ಆ ವ್ಯಕ್ತಿಗೆ ಪ್ರಾಣ ಬೆದರಿಕೆ ಇದೆಯೋ ಇಲ್ಲವೋ ಎಂಬುದನ್ನು ಪ್ರತಿವರ್ಷ ಪರಿಶೀಲಿಸಲಾಗುತ್ತದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪತ್ನಿ ಸೋನಿಯಾ ಗಾಂಧಿ ಹಾಗೂ ಅವರ ಇಬ್ಬರು ಮಕ್ಕಳಿಗೆ ನೀಡಿದ್ದ ಎಸ್ ಪಿಜಿ ಭದ್ರತೆಯ ಬಗ್ಗೆಯೂ ಪದ್ಧತಿಯಂತೆ ಪರಾಮರ್ಶೆ ಮಾಡಲಾಯಿತು. ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ಹಾಗೂ ವಿವಿಧ ಸಂಸ್ಥೆಗಳಿಂದ ಈ ವ್ಯಕ್ತಿಗಳಿಗೆ ಪ್ರಾಣ ಬೆದರಿಕೆ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಯಿತು. ಈ ವೇಳೆ ಗಾಂಧಿ ಕುಟುಂಬದವರಿಗೆ ಯಾವುದೇ ರೀತಿ ನೇರ ಬೆದರಿಕೆ ಇಲ್ಲ ಎಂಬ ಮಾಹಿತಿ ಸಿಕ್ಕಿದೆ. ಹೀಗಾಗಿ ಈ ಮೊದಲು ನೀಡಿದ್ದ ವಿಶೇಷ ಭದ್ರತಾ ಸೌಲಭ್ಯವನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದೆ ಎಂದಿದ್ದರು.
ಎಸ್ ಪಿಜಿ ಸೆಕ್ಯೂರಿಟಿ ಅಂದರೆ ಹೇಗಿರುತ್ತೆ ಗೊತ್ತಾ?
ವಿಶೇಷ ಭದ್ರತಾ ಸೌಲಭ್ಯ ಅಂದರೆ ಅದು ಸಾಮಾನ್ಯವಲ್ಲ. ಸದ್ಯ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹೊರತಾಗಿ ಯಾವೊಬ್ಬ ನಾಯಕರಿಗೂ ಈ ಎಸ್ ಪಿಜಿ ಸೆಕ್ಯೂರಿಟಿ ನೀಡಿಲ್ಲ. ಎಸ್ ಪಿಜಿ ಸೌಲಭ್ಯ ಎಂದರೆ ಇದು 3 ಸಾವಿರ ಭದ್ರತಾ ಸಿಬ್ಬಂದಿಯುಳ್ಳ ಒಂದು ತಂಡ. ಅತ್ಯುನ್ನತ ತರಬೇತಿ ಪಡೆದ ಸಿಬ್ಬಂದಿ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಉಪಕರಣ ಹಾಗೂ ವಾಹನಗಳು ಇರುತ್ತವೆ. ಈ ತಂಡ ಪ್ರಧಾನಮಂತ್ರಿ ತೆರಳುವ ಪ್ರದೇಶಕ್ಕೆ ಮೊದಲು ಭೇಟಿ ನೀಡಿ ಅಲ್ಲಿನ ಭದ್ರತಾ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸುತ್ತವೆ. ನಂತರವಷ್ಟೇ ಅಲ್ಲಿಗೆ ಪ್ರಧಾನಮಂತ್ರಿ ತೆರಳುತ್ತಾರೆ. ಕಳೆದ 1984ರಲ್ಲಿ ಇಂದಿರಾ ಗಾಂಧಿ ಹತ್ಯೆ ಬಳಿಕ ದೇಶದಲ್ಲಿ ಈ ವಿಶೇಷ ಭದ್ರತಾ ಸೌಲಭ್ಯವನ್ನು ಜಾರಿಗೊಳಿಸಲಾಯಿತು.