'ಬ್ರಿಟಿಷರ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಲು ಸಾವರ್ಕರ್ಗೆ ಹೇಳಿದ್ದು ಗಾಂಧಿ' ಎಂದ ರಾಜನಾಥ್ ಸಿಂಗ್
ನವದೆಹಲಿ, ಅಕ್ಟೋಬರ್ 12: "ಹಿಂದುತ್ವದ ಐಕಾನ್ ಆದ ವೀರ ಸಾರ್ವಕರ್ ಅಂಡಮಾನ್ ಜೈಲಿನಲ್ಲಿ ಇದ್ದಾಗ ಬ್ರಿಟಿಷರಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವಂತೆ ಸಾವರ್ಕರ್ಗೆ ಹೇಳಿದ್ದು ಮಹಾತ್ಮ ಗಾಂಧಿಜಿ," ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೊಂಡಿದ್ದಾರೆ.
ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಸಾರ್ವಕರ್ ಕುರಿತಾದ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, "ಸಾವರ್ಕರ್ಗೆ ಬ್ರಿಟಿಷರ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಲು ಹೇಳಿದ್ದು ಗಾಂಧೀಜಿ. ಆದರೆ ಸ್ವಾತಂತ್ರ್ಯ ಹೋರಾಟಕ್ಕೆ ಸಾವರ್ಕರ್ ನೀಡಿದ ಕೊಡುಗೆಯನ್ನು ಕೆಲವು ಸಿದ್ಧಾಂತವನ್ನು ಅನುಸರಿಸುವವರು ನಿಂದಿಸಿದ್ದಾರೆ. ಅದನ್ನು ಇನ್ನು ಮುಂದೆ ಸಹಿಸಲಾಗದು," ಎಂದು ಕೂಡಾ ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಸಾವರ್ಕರ್ ಕುರಿತಾದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡಾ ಹಾಜರಿದ್ದರು. ಮೋಹನ್ ಭಾಗವತ್ ಮಾತನಾಡಿ, "ಸಾವರ್ಕರ್ ನೇರವಾಗಿ ಮಾತನಾಡುತ್ತಿದ್ದ ಕಾರಣದಿಮದಾಗಿ ಅವರನ್ನು ತಪ್ಪಾಗಿ ತಿಳಿಯಲಾಗಿದೆ. ಆದರೆ ಎಲ್ಲಾ ಭಾರತೀಯರು ಆ ಸಂದರ್ಭದಲ್ಲಿ ಸಾವರ್ಕರ್ನಂತೆ ಕಠಿಣವಾಗಿ, ನೇರವಾಗಿ ಮಾತನಾಡಿದ್ದರೆ ಈಗ ದೇಶವು ವಿಭಜನೆ ಆಗುತ್ತಿರಲಿಲ್ಲ," ಎಂದು ಅಭಿಪ್ರಾಯಿಸಿದ್ದಾರೆ.
ವೀರ ಸಾವರ್ಕರ್: ವಿಭಜನೆಯನ್ನು ತಡೆಯಬಹುದಾದ ವ್ಯಕ್ತಿ ಎಂಬ ಪುಸ್ತಕವನ್ನು ಉದಯ್ ಮಹೂರ್ಕರ್ ಮತ್ತು ಚಿರಾಯು ಪಂಡಿತ್ ಬರೆದಿದ್ದಾರೆ ಮತ್ತು ರೂಪಾ ಪ್ರಕಟಣೆಯು ಪುಸ್ತಕವನ್ನು ಪ್ರಕಟಿಸಿದೆ.
"ಸಾವರ್ಕರ್ ವಿರುದ್ಧವಾಗಿ ಹಲವಾರು ಸುಳ್ಳು ಸುದ್ದಿಗಳನ್ನು ಹರಡಲಾಗಿದೆ. ಬ್ರಿಟಿಷ್ ಸರ್ಕಾರದ ಮುಂದೆ ಸಾವರ್ಕರ್ ಎರಡು ಬಾರಿ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದರು ಎಂದು ಪದೇ ಪದೇ ಹೇಳಲಾಗುತ್ತದೆ. ಆದರೆ ನಿಜವಾಗಿ ಸಾವರ್ಕರ್ ತನ್ನ ಬಿಡುಗಡೆಗಾಗಿ ಈ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿಲ್ಲ. ಸಾಮಾನ್ಯವಾಗಿ ಜೈಲಿನಲ್ಲಿರುವ ಕೈದಿಗಳು ಕ್ಷಮಾದಾನ ಅರ್ಜಿಯನ್ನು ಸಲ್ಲಿಕೆ ಮಾಡಬಹುದು," ಎಂದು ರಕ್ಷಣಾ ಸಚಿವರು ಹೇಳಿದರು.
"ಮಹಾತ್ಮ ಗಾಂಧಿಜಿ ಅವರು ಸಾವರ್ಕರ್ ಬಳಿ ಕ್ಷಮಾದಾನ ಅರ್ಜಿ ಸಲ್ಲಿಸಲು ಹೇಳಿದರು. ಸಾವರ್ಕರ್ ಜೀ ಅನ್ನು ಬಂಧನದಿಂದ ಮುಕ್ತಗೊಳಿಸಬೇಕು ಎಂದು ಮಹಾತ್ಮ ಗಾಂಧಿ ಮನವಿ ಮಾಡಿದ್ದರು," ಎಂದಿದ್ದಾರೆ.
"ಗುಲಾಮಗಿರಿಯ ಸಂಕೋಲೆಯನ್ನು ಮುರಿಯಲು ಜನರಿಗೆ ಸಾವರ್ಕರ್ ಪ್ರೇರಣೆ ನೀಡಿದರು. ಸಾವರ್ಕರ್ ಮಹಿಳಾ ಹಕ್ಕುಗಳು ಸೇರಿದಂತೆ ಇತರ ಸಾಮಾಜಿಕ ಸಮಸ್ಯೆಗಳ ನಡುವೆ ಅಸ್ಪೃಶ್ಯತೆಯ ವಿರುದ್ಧ ಆಂದೋಲನ ಮಾಡಿದರು. ಆದರೆ ಸಾವರ್ಕರ್ ಅವರು ದೇಶದ ಸಾಂಸ್ಕೃತಿಕ ಏಕತೆಗಾಗಿ ನೀಡಿದ ಕೊಡುಗೆಯನ್ನು ಕಡೆಗಣಿಸಲಾಗುತ್ತಿದೆ," ಎಂದು ರಕ್ಷಣಾ ಸಚಿವರು ಉಲ್ಲೇಖ ಮಾಡಿದ್ದಾರೆ. 2003 ರಲ್ಲಿ ಸಾವರ್ಕರ್ ಅವರ ಚಿತ್ರವನ್ನು ಸಂಸತ್ತಿನಲ್ಲಿ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ಹೆಚ್ಚಿನ ರಾಜಕೀಯ ಪಕ್ಷಗಳು ಇದನ್ನು ವಿರೋಧ ಮಾಡಿದ್ದವು ಎಂದು ಕೂಡಾ ಹೇಳಿದರು.
ಇನ್ನು ಸಾವರ್ಕರ್ ಅವರನ್ನು ನಾಝಿ ಅಥವಾ ಫಾಸಿಸ್ಟ್ ಎಂದು ಟೀಕೆ ಮಾಡುವುದು ಕೂಡಾ ಸರಿಯಲ್ಲ ಎಂದು ರಕ್ಷಣಾ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. "ನಿಜ ಸಂಗತಿ ಎಂದರೆ ಸಾವರ್ಕರ್ ಹಿಂದುತ್ವದ ಮೇಲೆ ನಂಬಿಕೆ ಇದ್ದವರು. ಆದರೆ ನಿಜವಾಗಿ ಸಾವರ್ಕರ್ ವಾಸ್ತವವಾದಿ. ಜನರಲ್ಲಿ ಏಕತೆ ಇರಬೇಕಾದರೆ ಸಂಸ್ಕೃತಿಯಲ್ಲಿಯೂ ಏಕತೆ ಇರಬೇಕು, ಒಂದೇ ರೀತಿಯ ಸಂಸ್ಕೃತಿ ಇರಬೇಕು ಎಂದು ಸಾವರ್ಕರ್ ನಂಬಿದ್ದರು," ಎಂದು ಕೂಡಾ ತಿಳಿಸಿದರು.
(ಒನ್ಇಂಡಿಯಾ ಸುದ್ದಿ)