ದೆಹಲಿ ಫಲಿತಾಂಶ: ಖಾಲಿ ಕೈಯಲ್ಲಿ ಬಂದು, ಖಾಲಿ ಕೈಯಲ್ಲೇ ವಾಪಸ್ ಹೋದ ಕಾಂಗ್ರೆಸ್
ಬಹುಷಃ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿಯ ಅದ್ದೂರಿ ಪ್ರಚಾರ ನಡುವೆ, ದೆಹಲಿಯ ಮತದಾರರೂ ಕಾಂಗ್ರೆಸ್ ಬೋರ್ಡಿಗೆ ಇಲ್ಲ ಎನ್ನುವ ಮನಸ್ಥಿತಿಯಲ್ಲಿ ಇದ್ದರೋ ಏನು. ಅದಕ್ಕೇ ಇರಬಹುದು, ಈ ಎರಡು ಪಕ್ಷಗಳ ನಡುವಿನ ಪ್ರಚಾರದ ಮಧ್ಯೆ ಕಾಂಗ್ರೆಸ್ ಮಂಕಾಗಿ ಕಾಣಿಸುತ್ತಿತ್ತು.
ರಾಹುಲ್ ಗಾಂಧಿ ಪ್ರಚಾರಕ್ಕೆ ಬಂದರೆ, ಅದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ ಎನ್ನುವ ವಿರೋಧಿಗಳ ಕುಹುಕ ಹೌದು ಎನ್ನುವುದಕ್ಕೆ, ಸೂಕ್ತ ಉದಾಹರಣೆಗಳು ಸಾಕಷ್ಟಿರುವ ಈ ಹೊತ್ತಿನಲ್ಲಿ, ಕಾಂಗ್ರೆಸ್ ಪಕ್ಷಕ್ಕೆ ಸ್ಟಾರ್ ಪ್ರಚಾರಕರ ಕೊರತೆ ಎದ್ದು ಕಾಣುತ್ತಿದೆ. ಹಾಗಂತ, ಕಾಂಗ್ರೆಸ್ ನಲ್ಲಿ ನಾಯಕರ ಕೊರತೆ ಇದೆ ಎಂದೇನೂ ಅಲ್ಲ.
ದೆಹಲಿಯಲ್ಲಿ ಬಿಜೆಪಿ ಸೋಲ್ತಾ ಇದೆ, ಹಾಗಾಗಿ ಇವಿಎಂ (ವೋಟಿಂಗ್ ಮೆಷಿನ್) ಸರಿಯಿರುತ್ತೆ ಬಿಡಿ
ಆದರೆ, ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಮಯದಿಂದ ಇಲ್ಲಿವರೆಗೆ, ಮೊದಲನೇ ಮತ್ತು ಎರಡನೇ ಪಂಕ್ತಿಯ ನಾಯಕರು ಉತ್ಸುಕತೆ ತೋರುತ್ತಿಲ್ಲ ಎನ್ನುವುದಕ್ಕೆ ಕಾಂಗ್ರೆಸ್ಸಿನ ದೆಹಲಿ ಪ್ರಚಾರ ಸಾಗಿದ ರೀತಿ ಉದಾಹರಣೆಯಾಗಬಲ್ಲದು. ರಾಷ್ಟ್ರ ರಾಜಧಾನಿಯಲ್ಲಿ ಹಿಡಿತ ಸಾಧಿಸಬೇಕು ಎನ್ನುವ ಹಠ, ಛಲ, ರಾಷ್ಟ್ರೀಯ ಪಕ್ಷವಾದ ಬಿಜೆಪಿಯಲ್ಲಿ ಕಾಣಿಸುತ್ತಿತ್ತೇ ಹೊರತು, ಕಾಂಗ್ರೆಸ್ ನಲ್ಲಿರಲಿಲ್ಲ. ಅದರ ಫಲಿತಾಂಶವೇ ದೆಹಲಿ ಚುನಾವಣಾ ರಿಸಲ್ಟ್.
ದೆಹಲಿ ಚುನಾವಣೆ; ಎಎಪಿಗೆ ಶಕ್ತಿ ತಂದ 'TINA' ಪ್ರಚಾರ ತಂತ್ರ!
ದೆಹಲಿಯ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಪ್ರಾಬಲ್ಯ ಮುಂದುವರಿಯುತ್ತಿರುವ ಈ ಸಮಯದಲ್ಲಿ, ಅಸೆಂಬ್ಲಿ ಚುನಾವಣೆಯ ವಿಚಾರಕ್ಕೆ ಬಂದಾಗ, ಆಮ್ ಆದ್ಮಿ ಪಕ್ಷ ಮತ್ತೆ ಗೆಲುವಿನ ನಗೆಬೀರಿದೆ. ಬಿಜೆಪಿ ಕಳೆದ ಅಸೆಂಬ್ಲಿ ಚುನಾವಣೆಗೆ ಹೋಲಿಸಿದರೆ, ಉತ್ತಮ ಸಾಧನೆಯನ್ನು ಮಾಡಿದೆ. ಇಲ್ಲಿ, ತೀವ್ರ ಮುಖಭಂಗವಾಗಿರುವುದು ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ಸಿಗೆ.
ಮಧ್ಯಪ್ರದೇಶದ ಸಿಎಂ ಕಮಲ್ ನಾಥ್ ಹೇಳಿಕೆ
ದೆಹಲಿ ಚುನಾವಣೆಯ ಸೋಲಿನ ಬಗ್ಗೆ ಕಾಂಗ್ರೆಸ್ಸಿನ ಹಿರಿಯ ಮುಖಂಡರು ನೀಡುತ್ತಿರುವ ಹೇಳಿಕೆ ಅತ್ಯಂತ ಹಾಸ್ಯಾಸ್ಪದ. "ನಾವು ಸೋಲುತ್ತೇವೆ ಎನ್ನುವುದು ನಮಗೆ ಮೊದಲೇ ಗೊತ್ತಿತ್ತು. ಅದು ಬಿಡಿ, ಬಿಜೆಪಿಯವರ ಬಗ್ಗೆ ಮಾತನಾಡಿ. ಗೆಲ್ಲುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದವರು ಈಗ ಎಲ್ಲಿಗೆ ಹೋಗಿದ್ದಾರೆ" ಇದು ಮಧ್ಯಪ್ರದೇಶದ ಸಿಎಂ ಕಮಲ್ ನಾಥ್ ನೀಡುತ್ತಿರುವ ಹೇಳಿಕೆ. ತಾವು ನೆಲಕಚ್ಚಿದ್ದಕ್ಕಿಂತ ಜಾಸ್ತಿ, ಅವರಿಗೆ ಬಿಜೆಪಿ ಸೋತಿರುವುದೇ ಖುಷಿಯಾದಂತಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದ್ದವು
2008ರಿಂದ ಇದುವರೆಗೆ ನಡೆದ ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ದಿನದಿಂದ ದಿನಕ್ಕೆ ಅಧಃಪತನದತ್ತ ಸಾಗುತ್ತಿದೆ. 2008ರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದ್ದವು. ಆ ವೇಳೆ ಕಾಂಗ್ರೆಸ್ಸಿಗೆ 43, ಬಿಜೆಪಿಗೆ 23 ಸೀಟು ದಕ್ಕಿದ್ದವು. ಕಾಂಗ್ರೆಸ್ಸಿಗೆ ಅಂದಿನ ಚುನಾವಣೆಯಲ್ಲಿ ಬಿದ್ದಿದ್ದ ಮತಗಳು ಶೇ. 60.3, ಬಿಜೆಪಿಗೆ ಶೇ. 36.3.
ಬಿಜೆಪಿ ಗೆದ್ದದ್ದು 31 ಸೀಟುಗಳಾದರೂ, ಬಹುಮತದ ಕೊರತೆ
ಇದಾದ ನಂತರ 2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಎಂಟು ಸ್ಥಾನವನ್ನು ಗೆಲ್ಲಲ್ಲಷ್ಟೇ ಶಕ್ತವಾಯಿತು. ಐದು ವರ್ಷದಲ್ಲಿ ಅದರ ಮತಗಳ ಪ್ರಮಾಣ ಶೇ. 24.6ಕ್ಕೆ ಇಳಿಯಿತು. ಬಿಜೆಪಿಯ ಮತಗಳು ಶೇ. 33ಕ್ಕೆ ಇಳಿದರೆ, ಆಮ್ ಆದ್ಮಿ ಪಕ್ಷ ತನ್ನ ಮತಬ್ಯಾಂಕ್ ಅನ್ನು ಶೇ. 29.5 ಬಲಪಡಿಸಿಕೊಂಡು, 28ಸ್ಥಾನವನ್ನು ಗೆಲ್ಲುವ ಮೂಲಕ, ಉತ್ತಮ ಆರಂಭವನ್ನು ಪಡೆದುಕೊಂಡಿತು. ಆ ಚುನಾವಣೆಯಲ್ಲಿ ಬಿಜೆಪಿ ಗೆದ್ದದ್ದು 31 ಸೀಟುಗಳಾದರೂ, ಬಹುಮತದ ಕೊರತೆಯಿಂದಾಗಿ, ಸರಕಾರ ರಚಿಸಿರಲಿಲ್ಲ.
ಸಿಎಂ ಅಭ್ಯರ್ಥಿ ಕಿರಣ್ ಬೇಡಿ ಕೂಡಾ ಸೋಲುಂಡಿದ್ದರು
ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಆಮ್ ಆದ್ಮಿ ಪಕ್ಷ ಧೂಳೀಪಟ ಮಾಡಿದ್ದು ಕಳೆದ ಅಂದರೆ 2015ರ ಚುನಾವಣೆಯಲ್ಲಿ. ಆಮ್ ಆದ್ಮಿ ಪಕ್ಷದ ಅಬ್ಬರ ಎಷ್ಟಿತ್ತೆಂದರೆ, ಬಿಜೆಪಿಯ ಸಿಎಂ ಅಭ್ಯರ್ಥಿ ಕಿರಣ್ ಬೇಡಿ ಕೂಡಾ ಸೋಲುಂಡಿದ್ದರು. ಅಂದಿನ ಚುನಾವಣೆಯಲಲಿ ಆಪ್ 67 ಸ್ಥಾನ ಗೆದ್ದರೆ, ಬಿಜೆಪಿ ಮೂರು ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಕಾಂಗ್ರೆಸ್ ಅಕೌಂಟ್ ಓಪನ್ ಮಾಡಲಾಗದೇ ಮುಖಭಂಗ ಅನುಭವಿಸಿತು. ಆಪ್ ಗೆ ಶೇ. 54,3, ಬಿಜೆಪಿಗೆ ಶೇ. 32.3, ಕಾಂಗ್ರೆಸ್ಸಿಗೆ ಶೇ.9.7 ಮತಗಳು ಬಿದ್ದಿದ್ದವು.
ರಾಜಧಾನಿಯಲ್ಲಿ 'ಶತಮಾನಗಳ ಇತಿಹಾಸದ' ಕಾಂಗ್ರೆಸ್ ಧೂಳೀಪಟ
ಈಗ 2020ರ ಅಸೆಂಬ್ಲಿ ಚುನಾವಣೆಯ ಮತಎಣಿಕೆ ಸದ್ಯ ಪ್ರಗತಿಯಲ್ಲಿದೆ. ಸದ್ಯದ ಟ್ರೆಂಡಿಂಗ್ ಪ್ರಕಾರ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಬಿಜೆಪಿ, ಕಳೆದ ಚುನಾವಣೆಗಿಂತ ತನ್ನ ಸಾಧನೆಯನ್ನು ವೃದ್ದಿಸಿಕೊಂಡಿದೆ. ಆದರೆ, ಕಾಂಗ್ರೆಸ್ ? ಆಮ್ ಆದ್ಮಿ ಪಕ್ಷದ ಸಾಧನೆಯಿಂದಲೇ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಯಾರು ಗೆದ್ದರೇನಂತೆ, ಬಿಜೆಪಿ ಗೆದ್ದಿಲ್ಲವಲ್ಲ ಎನ್ನುವುದು ಕಾಂಗ್ರೆಸ್ಸಿನ ಮನಃಸ್ಥಿತಿ ಇದ್ದಿರಬಹುದು. ಕಳೆದ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿ ಖಾಲಿ ಕೈಯಲ್ಲಿ 2020ರ ಚುನಾವಣೆಗೆ ಆಗಮಿಸಿದ್ದ ಕಾಂಗ್ರೆಸ್, ಖಾಲಿ ಕೈಯಲ್ಲೇ ವಾಪಸ್ ಆಗಿರುವುದು, ಶತಮಾನಗಳ ಇತಿಹಾಸದ ಪಕ್ಷಕ್ಕಾದ ಅವಮಾನವಲ್ಲದೇ ಇನ್ನೇನು? (ಚಿತ್ರ: ಪಿಟಿಐ)