ಬ್ರೇಕಿಂಗ್; ಮಾರ್ಚ್ 20ರಂದು ನಿರ್ಭಯ ಅತ್ಯಾಚಾರಿಗಳಿಗೆ ಗಲ್ಲು
ನವದೆಹಲಿ, ಮಾರ್ಚ್ 05 : ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಲು ಹೊಸ ಡೆತ್ ವಾರೆಂಟ್ ಜಾರಿಯಾಗಿದೆ. ಮೂರು ಬಾರಿ ಗಲ್ಲು ಶಿಕ್ಷೆಯನ್ನು ಮುಂದೂಡಲಾಗಿದ್ದು, ಎಲ್ಲಾ ಅಪರಾಧಿಗಳು ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ.
ಗುರುವಾರ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ನಿರ್ಭಯ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಲು ಹೊಸ ಡೆತ್ ವಾರೆಂಟ್ ಜಾರಿಗೊಳಿಸಿದೆ. ಮಾರ್ಚ್ 20ರಂದು ಬೆಳಗ್ಗೆ 5.30ಕ್ಕೆ ಗಲ್ಲು ಶಿಕ್ಷೆ ವಿಧಿಸಲು ಆದೇಶಿಸಲಾಗಿದೆ.
ನಿರ್ಭಯಾ ಪ್ರಕರಣ: ಪವನ್ ಗುಪ್ತಾ ಕ್ಷಮಾಧಾನ ಅರ್ಜಿ ವಜಾ
ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮುಕೇಶ್ ಕುಮಾರ್ ಸಿಂಗ್ (32), ಪವನ್ ಗುಪ್ತ (25), ವಿನಯ್ ಕುಮಾರ್ ಶರ್ಮಾ (26), ಅಕ್ಷಯ್ ಕುಮಾರ್ (31) ಅಪರಾಧಿಗಳು. ಎಲ್ಲರೂ ದೆಹಲಿಯ ತಿಹಾರ್ ಜೈಲಿನಲ್ಲಿದ್ದು, ಗಲ್ಲು ಶಿಕ್ಷೆಗೆ ತಯಾರಿ ನಡೆದಿದೆ.
ನಿರ್ಭಯಾ ಅತ್ಯಾಚಾರಿಗಳ ಗಲ್ಲು ಶಿಕ್ಷೆಯ ಹಾವು ಏಣಿ ಆಟ: ಮತ್ತೆ ತಡೆ
ಜನವರಿ 22, ಫೆಬ್ರವರಿ 1ರಂದು ಗಲ್ಲು ಶಿಕ್ಷೆ ಜಾರಿಗೊಳಿಸಲು ಡೆತ್ ವಾರೆಂಟ್ ಜಾರಿಗೊಳಿಸಲಾಗಿತ್ತು. ಆದರೆ, ಅಪರಾಧಿಗಳ ವಿವಿಧ ಅರ್ಜಿಗಳ ವಿಚಾರಣೆ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಕಾರಣ ಡೆತ್ ವಾರೆಂಟ್ಗೆ ತಡೆ ನೀಡಲಾಗಿತ್ತು.
ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ನಿರ್ಭಯಾ ಅಪರಾಧಿ
ಮಾರ್ಚ್ 3ರಂದು ಗಲ್ಲು ಶಿಕ್ಷೆ ಜಾರಿಗೆ 3ನೇ ಡೆತ್ ವಾರೆಂಟ್ ಜಾರಿಗೊಂಡಿತ್ತು. ಆದರೆ, ಅಪರಾಧಿಗಳ ಕ್ಷಮಾದಾನ ಅರ್ಜಿ ಬಾಕಿ ಇದಿದ್ದರಿಂದ ಪಟಿಯಾಲಾ ಹೌಸ್ ಕೋರ್ಟ್ ಡೆತ್ ವಾರೆಂಟ್ಗೆ ಮಾರ್ಚ್ 2ರ ಸಂಜೆ ತಡೆ ನೀಡಿತ್ತು.
ಎಲ್ಲರ ಕ್ಷಮಾದಾನ ಅರ್ಜಿ ವಜಾಗೊಂಡಿದೆ
ನಿರ್ಭಯ ಪ್ರಕರಣದ ಅಪರಾಧಿ ಪವನ್ ಗುಪ್ತ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ಬುಧವಾರ ತಿರಸ್ಕರಿಸಿದ್ದರು. ಈ ಮೂಲಕ ಮುಕೇಶ್ ಕುಮಾರ್ ಸಿಂಗ್ (32), ಪವನ್ ಗುಪ್ತ (25), ವಿನಯ್ ಕುಮಾರ್ ಶರ್ಮಾ (26), ಅಕ್ಷಯ್ ಕುಮಾರ್ (31) ಸಲ್ಲಿಸಿದ್ದ ಅರ್ಜಿಗಳು ವಜಾಗೊಂಡಿದ್ದು, ರಾಷ್ಟ್ರಪತಿಗಳ ಮುಂದೆ ಯಾವುದೇ ಅರ್ಜಿ ಇಲ್ಲ.
ವಕೀಲರ ಹೇಳಿಕೆ
ಪಟಿಯಾಲಾ ಹೌಸ್ ಕೋರ್ಟ್ನಲ್ಲಿ ಹಾಜರಿದ್ದ ಎಲ್ಲಾ ಅಪರಾಧಿಗಳ ಪರ ವಕೀಲರು ಹೊಸ ಡೆತ್ ವಾರೆಂಟ್ ಹೊರಡಿಸಲು ಯಾವುದೇ ಅಡ್ಡಿ ಇಲ್ಲ. ನಾಲ್ವರ ಪರವಾಗಿಯೂ ಯಾವುದೇ ಕಾನೂನು ಪ್ರಕ್ರಿಯೆಗಳು ಬಾಕಿ ಇಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ನಿರ್ಭಯ ತಾಯಿ ಸಂತಸ
ನಿರ್ಭಯ ತಾಯಿ ಆಶಾದೇವಿ ಹೊಸ ಡೆತ್ ವಾರೆಂಟ್ ಹೊಡಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. "ನ್ಯಾಯಾಲಯ ಈಗ ನೀಡಿರುವ ದಿನಾಂಕದಂತೆ ಗಲ್ಲು ಶಿಕ್ಷೆ ಜಾರಿಯಾಗಲಿದೆ ಎಂಬ ನಿರೀಕ್ಷೆ ಇದೆ. ಈ ಶಿಕ್ಷೆ ಒಂದು ಸಂದೇಶವಾಗಬೇಕು. ಮುಂದೆ ಇಂತಹ ಪ್ರಕರಣಗಳು ನಡೆಯಬಾರದು" ಎಂದು ಹೇಳಿದರು.
2012ರಲ್ಲಿ ನಡೆದ ಪ್ರಕರಣ
2012ರ ಡಿಸೆಂಬರ್ 16ರ ರಾತ್ರಿ ಚಲಿಸುವ ಬಸ್ನಲ್ಲಿ 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ನಿರ್ಭಯ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಡಿಸೆಂಬರ್ 29ರಂದು ಆಕೆ ಸಿಂಗಾಪುರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಈ ಪ್ರಕರಣದಲ್ಲಿ ಒಟ್ಟು 6 ಅಪರಾಧಿಗಳು. ಆದರೆ, ಬಾಲಾಪರಾಧಿ ಎಂಬ ಕಾರಣಕ್ಕೆ ಒಬ್ಬ ಬಿಡುಗಡೆಗೊಂಡಿದ್ದಾನೆ. ಮತ್ತೊಬ್ಬ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಉಳಿದ ನಾಲ್ವರಿಗೆ ಈಗ ಗಲ್ಲು ಶಿಕ್ಷೆ ಜಾರಿಯಾಗುತ್ತಿದೆ.