ವಾಕ್ ಸ್ವಾತಂತ್ರ್ಯ, ಬೆದರಿಕೆ ಪದಗಳ ಬಗ್ಗೆ ಪ್ರಧಾನಿ ತಿರುಗೇಟು
ನವದೆಹಲಿ, ಫೆಬ್ರವರಿ.08: ರಾಜ್ಯಸಭೆಯಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ಬೆದರಿಕೆ ಬಗ್ಗೆ ಮಾತನಾಡಿದ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖಂಡ ದೆರೆಕ್ ಓಬ್ರಿಯನ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತಿನಲ್ಲೇ ತಿರುಗೇಟು ಕೊಟ್ಟರು.
ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲೆ ಪ್ರಧಾನಿ ನರೇಂದ್ರ ಮೋದಿ ವಂದನಾ ಭಾಷಣ ಮಾಡಿದ ವೇಳೆ ಟಿಎಂಸಿ ಸಂಸದ ಓಬ್ರಿಯನ್ ಅವರ ಭಾಷಣದ ಬಗ್ಗೆ ಉಲ್ಲೇಖಿಸಿದರು. ದೆರೆಕ್ ಓಬ್ರಿಯನ್ ಅವರು ವಾಕ್ ಸ್ವಾತಂತ್ರ್ಯ ಮತ್ತು ಬೆದರಿಕೆ ಎಂಬ ಪದಗಳನ್ನು ಬಳಸಿದ್ದನ್ನು ಕೇಳಿ ತುಂಬಾ ಸಂತಸವಾಯಿತು. ಆದರೆ, ಅವರು ಮಾತನಾಡಿದ್ದು, ಪಶ್ಚಿಮ ಬಂಗಾಳದ ಬಗ್ಗೆಯೋ ಅಥವಾ ದೇಶದ ಬಗ್ಗೆಯೋ ಎಂದು ನಾನೇ ಆಶ್ಚರ್ಯಚಕಿತನಾದೆ.
ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ: ಪ್ರಮುಖ ಅಂಶಗಳು
ಸಂಸದ ದೆರೆಕ್ ಓಬ್ರಿಯನ್ ಅವರು ದಿನದ 24 ಗಂಟೆಗಳ ಕಾಲವೂ ಅಂಥದ್ದೇ ಸಮಸ್ಯೆಗಳನ್ನು ಪಶ್ಚಿಮ ಬಂಗಾಳದಲ್ಲಿ ನೋಡಿರುತ್ತಾರೆ. ಹಾಗಾಗಿ ರಾಜ್ಯಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ್ದಾರೆ ಎಂದು ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ. ಆದರೆ ಪ್ರಧಾನಿ ಭಾಷಣ ಆರಂಭಿಸುವುದಕ್ಕೂ ಮೊದಲೇ ಟಿಎಂಸಿ ಸಂಸದ ದೆರೆಕ್ ಓಬ್ರಿಯನ್ ರಾಜ್ಯಸಭೆಯಿಂದ ಹೊರ ನಡೆದಿದ್ದರು.
ದೆಹಲಿ ರೈತರ ಹೋರಾಟದ ಬಗ್ಗೆ ಓಬ್ರಿಯನ್ ಉಲ್ಲೇಖ:
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಉಲ್ಲೇಖಿಸಿದ ಟಿಎಂಸಿ ಸಂಸದ ದೆರೆಕ್ ಓಬ್ರಿಯನ್ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿದ್ದು, ಬೆದರಿಕೆಯೊಡ್ಡಲಾಗುತ್ತಿದೆ ಎಂದ ಬಗ್ಗೆ ಆರೋಪಿಸಿದ್ದರು. ಟಿಎಂಸಿ ಸಂಸದರ ಮಾತಿಗೆ ತಿರುಗೇಟು ನೀಡಿರುವ ಪ್ರಧಾನಿ ಮೋದಿ, ಓಬ್ರಿಯನ್ ಅವರ ಮಾತು ಪಶ್ಚಿಮ ಬಂಗಾಳದಲ್ಲಿ ಜನರ ಪರಿಸ್ಥಿತಿಗೆ ಹೆಚ್ಚು ಹೋಲಿಕೆಯಾಗುತ್ತದೆ ಎಂದು ಹೇಳಿದ್ದಾರೆ.