ದೆಹಲಿ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಉಚಿತ ಆಹಾರ, ಔಷಧಿ ವಿತರಣೆ
ನವದೆಹಲಿ, ಫೆಬ್ರವರಿ.28: ಸಿಎಎ ಪರ ಮತ್ತು ವಿರೋಧಿ ಹೋರಾಟದಿಂದ ಹೊತ್ತಿ ಉರಿದ ರಾಷ್ಟ್ರ ರಾಜಧಾನಿಯಲ್ಲಿ ಪರಿಸ್ಥಿತಿ ಇದೀಗ ಹತೋಟಿಗೆ ಬಂದಿದೆ. ಮನೆ, ಅಂಗಡಿ ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿ ಇರುವ ಜನರಿಗೆ ದೆಹಲಿಯ ಸಿಖ್ ಗುರುದ್ವಾರ ಪ್ರಬಂಧಕ ಕಮಿಟಿ ನೆರವು ನೀಡುತ್ತಿದೆ.
ನವದೆಹಲಿಯ ಈಶಾನ್ಯ ಜಿಲ್ಲೆಯ ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ನಲುಗಿರುವ ಜನರಿಗೆ ಅಗತ್ಯವಿರುವ ಆಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಪೂರೈಸಲಾಗುತ್ತಿದೆ. ಎಲ್ಲ ಅಪನಂಬಿಕೆ ಮತ್ತು ಆತಂಕವನ್ನು ತೊರೆದು ಜನರು ಹೊರ ಬಂದಿದ್ದಾರೆ.
ದೆಹಲಿ ಹಿಂಸಾಚಾರಿಗಳಿಗೆ ಪಿಸ್ತೂಲ್ ಸಿಕ್ಕಿದ್ದು ಹೇಗೆ? ಸ್ಫೋಟಕ ಮಾಹಿತಿ
ಸಿಖ್ ಗುರುದ್ವಾರ ಪ್ರಬಂಧಕ ಕಮಿಟಿ ಸ್ವಯಂಪ್ರೇರಿತವಾಗಿ ಹಿಂಸಾಚಾರ ಪೀಡಿತರ ಸಹಾಯಕ್ಕೆ ಮುಂದಾಗಿದ್ದಾರೆ. ಕಮಿಟಿ ಕಾರ್ಯಕರ್ತರು ನೀಡುತ್ತಿರುವ ಸಹಕಾರಕ್ಕೆ ನೊಂದ ಜನರು ಮನಸಾರೆ ಹರಸಿ ಹಾರೈಸುವ ಜೊತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿಖ್ ಬಾಂಧವರಿಗೆ ಧನ್ಯವಾದ ಅರ್ಪಿಸಿದ ಮಹಿಳೆ
ಕಳೆದ ಒಂದು ವಾರದಲ್ಲಿ ಇದೇ ಮೊದಲ ಬಾರಿಗೆ ನಮ್ಮ ಏರಿಯಾದ ರಸ್ತೆಗಳಲ್ಲು ನಮಗೆ ನೆರವು ನೀಡುತ್ತಿರುವ ಜನರನ್ನು ಕಂಡು ಸಂತೋಷವಾಗುತ್ತಿದೆ ಎಂದು ಯಾಸ್ಮೀನ್ ಆಸಿಫ್ ಎಂಬ ಮಹಿಳೆ ಸಂತಸ ವ್ಯಕ್ತಪಡಿಸಿದರು. ಕಳೆದ ಮೂರು ದಿನಗಳ ಹಿಂದೆ ಏರಿಯಾದಲ್ಲಿ ಬೆಂಕಿಯ ಕಾರ್ಮೋಡ ಆವರಿಸಿದ್ದು, ಕೆಮ್ಮು ತಾಳಲಾರದೇ ನಿತ್ಯ ನರಳುತ್ತಿದ್ದರೂ ಔಷಧಿಗಳನ್ನು ತಂದು ಕೊಡುವವರು ಇರಲಿಲ್ಲ. ನಮ್ಮ ಏರಿಯಾದಲ್ಲಿ ಇರುವ ಎಲ್ಲ ಔಷಧಿ ಅಂಗಡಿಗಳು ಬಂದ್ ಆಗಿದ್ದವು. ಇಂದು ನಮ್ಮ ಸಿಖ್ ಸಹೋದರ ಸಹೋದರಿಯರ ನೀಡಿದ ನೆರವಿಗೆ ಸರಿಸಾಟಿಯಿಲ್ಲ. ಇದೇ ರೀತಿ ಉಳಿದ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿಯೂ ಸಂತ್ರಸ್ತರಿಗೆ ನೆರವು ಸಿಗಬೇಕಿದೆ ಎಂದು ಯಾಸ್ಮೀನ್ ಮನವಿ ಮಾಡಿಕೊಂಡರು.
ಕಾಲು ನೋವಿಗೆ ಮೂರು ದಿನಗಳಿಂದ ಚಿಕಿತ್ಸೆ ಇರಲಿಲ್ಲ
29 ವರ್ಷದ ಗಜೀಂದರ್ ಎಂಬುವವರು ಕೂಡಾ ಸಿಖ್ ಬಾಂಧವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ಕಳೆದ ಮೂರು ದಿನಗಳಿಂದ ಕಾಲು ನೋವಿನಿಂದ ಬಳಲುತ್ತಿದ್ದ ನನಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮನೆಯಿಂದ ಹೊರ ಹೋಗಲಾಗದೇ ನರಕಯಾತನೆ ಅನುಭವಿಸುತ್ತಿದ್ದೆನು. ಇಂಥ ಸಂದರ್ಭದಲ್ಲಿ ಸಿಖ್ ಸಹೋದರರು ನೀಡಿದ ಔಷಧಿ ನನಗೆ ನೆರವಾಯಿತು ಎಂದಿದ್ದಾರೆ. ಇನ್ನು, ದಿನಗೂಲಿ ನೌಕರಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಅದೆಷ್ಟೋ ಜನರಿಗೆ ಹಿಂಸಾಚಾರದಿಂದಾಗಿ ಕಳೆದ ನಾಲ್ಕು ದಿನಗಳಿಂದ ಯಾವುದೇ ಕೆಲಸ ಸಿಕ್ಕಿಲ್ಲ. ಇಂಥ ಅಸಹಾಯಕ ಸ್ಥಿತಿಯಲ್ಲಿದ್ದ ಜನರಿಗೆ ಒಂದು ಹೊತ್ತಿನ ಊಟವನ್ನು ನೀಡುತ್ತಿರುವುದು ಪ್ರಶಂಸನೀಯ ಎಂದು ಗಜೀಂದರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಮನೆ ಮನೆಗೆ ಊಟ ವಿತರಣೆ
ದೆಹಲಿಯ ಈಶಾನ್ಯ ಭಾಗದ ಘೋಂದಾ, ಅಂಬೇಡ್ಕರ್ ಬಸ್ತಿ, ಬ್ರಹ್ಮಪುರಿ ಮತ್ತು ಶ್ರೀರಾಮ್ ಕಾಲೋನಿಯಲ್ಲಿ ಈಗಾಗಲೇ ನೂರಾರು ಟ್ರಂಕ್ ಗಳಲ್ಲಿ ಊಟವನ್ನು ತೆಗೆದುಕೊಂಡು ಹೋಗಿ ವಿತರಣೆ ಮಾಡಲಾಗುತ್ತಿದೆ. ಆಂಬುಲೆನ್ಸ್ ಗಳಲ್ಲಿ ಔಷಧಿಗಳನ್ನು ಜನರಿಗೆ ನೀಡಲಾಗುತ್ತಿದೆ. ಇದರ ನಡುವೆ ಸಿಖ್ ಗುರುದ್ವಾರ ಪ್ರಬಂಧಕ ಕಮಿಟಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಆಹಾರದ ಬಾಕ್ಸ್ ಗಳನ್ನು ವಿತರಿಸುತ್ತಿದ್ದಾರೆ.
700ಕ್ಕೂ ಅಧಿಕ ಮಂದಿಗೆ ಆಹಾರ ಮತ್ತು ಔಷಧಿ ಪೂರೈಕೆ
ಸಿಖ್ ಗುರುದ್ವಾರ ಪ್ರಬಂಧಕ ಕಮಿಟಿ ಸದಸ್ಯ ರಾಜ್ ಬಿಂದರ್ ಸಿಂಗ್ ಮಾತನಾಡಿದ್ದು, ನಾಲ್ಕು ಟ್ರಕ್ ಗಳಲ್ಲಿ 700ಕ್ಕೂ ಅಧಿಕ ಮಂದಿಗೆ ಆಹಾರ ಮತ್ತು ಔಷಧಿಗಳನ್ನು ವಿತರಣೆ ಮಾಡಲಾಗಿದೆ ಎಂದರು. ಗುರುದ್ವಾರ ಬಂಗಲಾ ಸಾಹೇಬ್ ಬೆಳಗ್ಗೆ 6 ಗಂಟೆಗೆ ಟ್ರಕ್ ಗಳಲ್ಲಿ ಆಹಾರ ಮತ್ತು ಔಷಧಿಯನ್ನು ತೆಗೆದುಕೊಂಡು ಬಂದು ವಿತರಣೆ ಮಾಡಿದ್ದೇವೆ ಎಂದು ಹೇಳಿದರು.