ನವದೆಹಲಿಯಲ್ಲಿ ಎಲ್ಲ ಪ್ರಜೆಗಳಿಗೆ ಕೊರೊನಾ ಲಸಿಕೆ ಉಚಿತ: ಕೇಜ್ರಿವಾಲ್
ನವದೆಹಲಿ, ಜನವರಿ.13: ಕೊರೊನಾವೈರಸ್ ಸೋಂಕಿನಿಂದ ಮುಕ್ತವಾಗಲು ರಾಜ್ಯದ ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆಯನ್ನು ನೀಡುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಕೊವಿಡ್-19 ವಾರಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮಹಾಮಾರಿಯಿಂದ ಪ್ರಾಣ ಬಿಟ್ಟ ವೈದ್ಯ ಹಿತೇಶ್ ಗುಪ್ತಾ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮೃತ ಹಿತೇಶ್ ಗುಪ್ತಾ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿದ ಸಿಎಂ, ಕುಟುಂಬ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ತಿಳಿಸಿದ್ದಾರೆ.
ದೂರದ ಪುಣೆಯಿಂದ ನಿಮ್ಮೂರಿನ ಆರೋಗ್ಯ ಕೇಂದ್ರಕ್ಕೆ ಲಸಿಕೆ ತಲುಪಿದ್ದು ಹೇಗೆ?
ಕೇಂದ್ರ ಸರ್ಕಾರವು ಒಂದು ವೇಳೆ ನವದೆಹಲಿಯ ಎಲ್ಲ ಪ್ರಜೆಗಳಿಗೆ ಲಸಿಕೆ ನೀಡುವುದಕ್ಕೆ ನಿರಾಕರಿಸಿದರೆ ಯಾರೊಬ್ಬರೂ ಆತಂಕಪಡಬೇಕಿಲ್ಲ. ಕೊರೊನಾವೈರಸ್ ಲಸಿಕೆ ವಿತರಣೆ ವಿಚಾರದಲ್ಲಿ ಪ್ರಜೆಗಳು ಯಾವುದೇ ರೀತಿ ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ರಾಜ್ಯ ಸರ್ಕಾರವು ತನ್ನ ಪ್ರಜೆಗಳಿಗೆ ಉಚಿತವಾಗಿ ಲಸಿಕೆಯನ್ನು ನೀಡುವ ಹೊಣೆ ಹೊತ್ತುಕೊಳ್ಳಲಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ದೆಹಲಿಯ 89 ಕಡೆಗಳಲ್ಲಿ ಲಸಿಕೆ ವಿತರಣೆ ವ್ಯವಸ್ಥೆ:
ದೇಶಾದ್ಯಂತ ಜನವರಿ.16ರಿಂದ ವಿವಿಧ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರವು ಅನುಮೋದನೆ ನೀಡಿರುವ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ನೀಡಲು 89 ಕಡೆಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. 36 ಸರ್ಕಾರಿ ಆಸ್ಪತ್ರೆಗಳು ಮತ್ತು 53 ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ವಿತರಣೆ ಮಾಡಲಾಗುವುದು ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ತಿಳಿಸಿದ್ದಾರೆ.
हमारे डॉक्टर्स अपनी जान की परवाह किए बिना कोरोना के मुश्किल वक्त में मरीज़ों का इलाज कर रहे हैं। ऐसे ही हमारे वॉरिअर डॉ. हितेश गुप्ता जी का हाल ही में कोरोना संक्रमण से निधन हो गया था।
— Arvind Kejriwal (@ArvindKejriwal) January 13, 2021
आज उनके परिवार से मिलकर ₹1 करोड़ की सहायता राशि दी। भविष्य में भी परिवार का ख़्याल रखेंगे। pic.twitter.com/xoSEBFc4lV
ಸರ್ಕಾರಿ ಆಸ್ಪತ್ರೆಗಳ ಪಟ್ಟಿಯಲ್ಲಿ ಏಮ್ಸ್, ಸಫ್ದರ್ ಜಂಗ್, ಲೋಕ್ ನಾಯಕ್, ಜಿಟಿಬಿ, ಕಸ್ತೂರ್ ಬಾ ಮತ್ತು ಹಿಂದೂ ರಾವ್ ಆಸ್ಪತ್ರೆಗಳಿವೆ. ಇನ್ನು, ಖಾಸಗಿ ಆಸ್ಪತ್ರೆಗಳ ಪೈಕಿ ಮ್ಯಾಕ್ಸ್, ಫೋರ್ಟಿಸ್, ಅಪೋಲೋ, ಬಿಎಲ್ ಕಪೂರ್ ಮತ್ತು ಗಂಗಾರಾಮ್ ಆಸ್ಪತ್ರೆಗಳಲ್ಲಿ ಕೊವಿಡ್-19 ಲಸಿಕೆ ನೀಡುವುದಕ್ಕೆ ಅನುಮತಿ ನೀಡಲಾಗಿದೆ.