ದೆಹಲಿ ಪೊಲೀಸರ ಎನ್ಕೌಂಟರ್ಗೆ ನಾಲ್ಕು ಅಪರಾಧಿಗಳು ಬಲಿ
ನವ ದೆಹಲಿ, ಜೂನ್ 09: ರಾಷ್ಟ್ರ ರಾಜಧಾನಿಯಲ್ಲಿ ಇಂದು ಪೊಲೀಸರು ಮಾಡಿರುವ ಎನ್ಕೌಂಟರ್ನಲ್ಲಿ ನಾಲ್ಕು ಮಂದಿ ಅಪರಾಧಿಗಳು ಸತ್ತಿದ್ದಾರೆ. ಗುಂಡಿನ ಚಕಮಕಿಯಲ್ಲಿ ಪೊಲೀಸರಿಗೂ ಗಾಯಗಳಾಗಿವೆ.
ದೆಹಲಿ ದಕ್ಷಿಣ ಭಾಗದ ಫತೇಹ್ಪುರ್ ಬೆರಿಯ ಗ್ರಾಮವೊಂದರ ಸಮೀಪ ಕಾರಿನಲ್ಲಿ ತೆರಳುತ್ತಿದ್ದ ರಾಜೇಶ್ ಭಾರ್ತಿ ಹಾಗೂ ಆತನ ಸಹಚರರ ಮೇಲೆ ದೆಹಲಿ ಪೊಲೀಸ್ ವಿಶೇಷ ಘಟಕವು ಎನ್ಕೌಂಟರ್ ಮಾಡಿದ್ದಾರೆ. ಘಟನೆಯಲ್ಲಿ ರಾಜೇಶ್ ಭಾರ್ತಿ ಸಾವನ್ನಪ್ಪಿದ್ದಾನೆ.
ತೀವ್ರವಾಗಿ ಗಾಯಗೊಂಡಿರುವ ಒಬ್ಬ ಆರೋಪಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಎನ್ಕೌಂಟರ್ ಸಮಯ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮೊದಲಿಗೆ ಕಾರನ್ನು ಸುತ್ತುವರಿದ ಪೊಲೀಸರು ಶರಣಾಗುವಂತೆ ಹೇಳಿದರು ಆದರೆ ರಾಜೇಶ್ ಭಾರ್ತಿ ಗ್ಯಾಂಗ್ನಿಂದ ದಾಳಿ ಪ್ರಾರಂಭವಾದ ನಂತರ ಪೊಲೀಸರು ಮರು ದಾಳಿ ನಡೆಸಿದ್ದಾರೆ. 35ಕ್ಕೂ ಹೆಚ್ಚು ಸುತ್ತುಗಳ ಗುಂಡಿನ ದಾಳಿ ನಡೆಸಲಾಗಿದೆ.
ಹಲವು ಪ್ರಕರಣಗಳಲ್ಲಿ ಹರಿಯಾಣ ಪೊಲೀಸರಿಗೆ ಬೇಕಾಗಿದ್ದ ರಾಜೇಶ್ ಭಾರ್ತಿ ಪೊಲೀಸ್ ವಶದಿಂದ ತಪ್ಪಿಸಿಕೊಂಡಿದ್ದ. ಆತನನ್ನು ಹುಡುಕಿಕೊಟ್ಟವರಿಗೆ 1 ಲಕ್ಷ ಬಹುಮಾನ ಕೂಡ ಘೋಷಿಸಲಾಗಿತ್ತು.
ಮೃತ ರಾಜೇಶ್ ಭಾರ್ತಿ ಸಂಚಿರಿಸುತ್ತಿದ್ದ ಫೋರ್ಡ್ ಎಂಡೊವೆರಾ ಕಾರಿನಲ್ಲಿ ಪರವಾನಗಿ ಇರದ ಆಟೋಮ್ಯಾಟಿಕ್ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ.