ಅಸ್ತಾನಾಗೂ ನನ್ನ ಮಗನಿಗೂ ಯಾವ ದೋಸ್ತಿ ಇಲ್ಲ ಎಂದ 'ರಾ' ಮಾಜಿ ಅಧಿಕಾರಿ
ನವದೆಹಲಿ, ಡಿಸೆಂಬರ್ 20: 'ರಾ' (ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್)ನ ಮಾಜಿ ಜಂಟಿ ಕಾರ್ಯದರ್ಶಿ ದಿನೇಶ್ವರ್ ಪ್ರಸಾದ್ ಅವರು ತಮ್ಮ ಮಗ ಮನೋಜ್ ಪ್ರಸಾದ್ ವಿರುದ್ಧ ಕೇಳಿಬರುತ್ತಿರುವ ಲಂಚ ಆರೋಪವನ್ನು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಥವಾ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಜತೆಗೆ ಯಾವುದೇ ನಂಟಿಲ್ಲ ಎಂದು ಕೂಡ ಹೇಳಿದ್ದಾರೆ.
ಮನೋಜ್ ಪ್ರಸಾದ್ ಸಿಬಿಐನಿಂದ ಅಕ್ಟೋಬರ್ ನಲ್ಲಿ ಬಂಧನವಾಗಿ, ಸದ್ಯಕ್ಕೆ ಜಾಮೀನಿನ ಮೇಲೆ ಇದ್ದಾರೆ. ಕೆಲವರು ತಮ್ಮ 'ಉದ್ದೇಶ ಈಡೇರಿಸಿಕೊಳ್ಳಲು' ತಮ್ಮ ಮಗನನ್ನು 'ಬಳಸಿಕೊಳ್ಳಲು' ಪ್ರಯತ್ನಿಸುತ್ತಿದ್ದಾರೆ ಮತ್ತು ಈ ಪ್ರಕರಣದಲ್ಲಿ ಸಿಬಿಐ ಇನ್ನಷ್ಟು ಆಳವಾದ ತನಿಖೆ ಮಾಡಬೇಕು ಎಂದು ದಿನೇಶ್ವರ್ ಹೇಳಿದ್ದಾರೆ.
ಸಿಬಿಐ ವಿವಾದ: ಇಷ್ಟು ದಿನ ಏನು ಮಾಡುತ್ತಿದ್ದಿರಿ? ಕೇಂದ್ರಕ್ಕೆ ಸುಪ್ರೀಂ ತರಾಟೆ
ಖಾಸಗಿ ವಾಹಿನಿಯೊಂದರ ಜತೆ ಸಂದರ್ಶನದಲ್ಲಿ ಮಾತನಾಡಿದ ದಿನೇಶ್ವರ್, ನಾನಾಗಲೀ ಅಥವಾ ನನ್ನ ಮಗ ಆಗಲೀ ದೋವಲ್ ಅಥವಾ ಅಸ್ತಾನಾರನ್ನು ಭೇಟಿ ಆಗಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ನನಗೆ ದೇವರ ಮೇಲೆ ನಂಬಿಕೆ ಇದೆ. ಈ ಪ್ರಕರಣದಲ್ಲಿ ನಮ್ಮದೇನೂ ತಪ್ಪಿಲ್ಲ ಎಂದು ಸಾಬೀತಾಗಲಿದೆ ಎಂಬ ವಿಶ್ವಾಸ ಕೂಡ ವ್ಯಕ್ತಪಡಿಸಿದ್ದಾರೆ.
ಸತೀಶ್ ಬಾಬು ದೂರಿನ ಮೇಲೆ ಎಫ್ ಐಆರ್
ಕಳೆದ ಅಕ್ಟೋಬರ್ ಹದಿನಾರರಂದು ಮನೋಜ್ ನನ್ನು ಬಂಧಿಸಲಾಗಿತ್ತು. ಹೈದರಾಬಾದ್ ಮೂಲದ ಉದ್ಯಮಿ ಸನಾ ಸತೀಶ್ ಬಾಬುರನ್ನು ಮಾಂಸ ವ್ಯಾಪಾರಿ ಮೊಯಿನ್ ಖುರೇಷಿ ವಿರುದ್ಧದ ಪ್ರಕರಣದಿಂದ ಬಚಾವ್ ಮಾಡಲು ಅಸ್ತಾನಾ ಅವರ ಮಧ್ಯವರ್ತಿಯಾಗಿ ಕೆಲಸ ಮಾಡಿದ ಆರೋಪ ಮನೋಜ್ ಮೇಲಿತ್ತು. ಸತೀಶ್ ಬಾಬು ನೀಡಿದ ದೂರಿನ ಮೇಲೆ ಎಫ್ ಐಆರ್ ದಾಖಲಿಸಿದ ಸಿಬಿಐ, ಮನೋಜ್ ನನ್ನು ಬಂಧಿಸಿತ್ತು. ಆದರೆ ಪಟಿಯಾಲ ಕೋರ್ಟ್ ಜಾಮೀನು ನೀಡಿದೆ.
ಅಸ್ತಾನಾ-ದೋವಲ್ ಯಾರನ್ನೂ ಭೇಟಿ ಮಾಡಿಲ್ಲ
"ಇಲ್ಲ, ಸಾಧ್ಯವೇ ಇಲ್ಲ. ತಾನು ಭೇಟಿಯಾದ ವ್ಯಕ್ತಿಗಳ ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಹಾಕುವುದು ಮನೋಜ್ ಗೆ ಬಹಳ ಇಷ್ಟ. ನೀವೇ ಅದನ್ನು ಪರಿಶೀಲಿಸಿ. ಆತ ಅಸ್ತಾನಾ ಅಥವಾ ದೋವಲ್ ಯಾರನ್ನೂ ಭೇಟಿ ಆಗಿಲ್ಲ" ಎಂದು ದಿನೇಶ್ವರ್ ಹೇಳಿದ್ದಾರೆ. ನೀವಾಗಲೀ ಅಥವಾ ನಿಮ್ಮ ಮಕ್ಕಳಾದ ಮನೋಜ್ ಅಥವಾ ಸೋಮೇಶ್ ದೋವಲ್ ರನ್ನು ಭೇಟಿಯಾಗಿದ್ದರಾ ಎಂಬ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ ದಿನೇಶ್ವರ್.
ನಾನೇ ಅವರನ್ನು ಭೇಟಿಯಾಗಲು ಆಗಿರಲಿಲ್ಲ
ದೋವಲ್ ಜತೆಗೆ ಮನೋಜ್ ಏನು ಮಾಡಬೇಕು. ಅದೂ ಅವನ ಜೀವನದಲ್ಲೇ ಭೇಟಿಯಾಗದ ವ್ಯಕ್ತಿ ಹತ್ತಿರ? 'ರಾ'ದಲ್ಲಿ ಕೆಲಸ ಮಾಡುವಾಗ ಕೂಡ ಅವರನ್ನು ನಾನು ಭೇಟಿಯಾಗಿಲ್ಲ. ಅವರು ಗುಪ್ತಚರ ದಳದಲ್ಲಿ ಬಿಡುವಿಲ್ಲದಂತೆ ಕೆಲಸ ಮಾಡುತ್ತಿದ್ದರು. ದುರಂತ ಏನೆಂದರೆ, ನನಗೇ ಅರ್ಥವಾಗದ ರೀತಿಯಲ್ಲಿ ಇವೆಲ್ಲವನ್ನೂ ಬಿಂಬಿಸಲಾಗಿದೆ ಎಂದಿದ್ದಾರೆ ದಿನೇಶ್ವರ್.
ಮನೋಜ್ ಮೇಲೆ ತಪ್ಪೊಪ್ಪಿಕೊಳ್ಳುವಂತೆ ಒತ್ತಡ
ಇಡೀ ಪ್ರಕರಣ ಅನುಮಾನಾಸ್ಪದವಾಗಿದೆ. ತಿರುಚಲಾಗಿದೆ. ಅಸ್ತಾನಾ ಪರಿಚಯವಿದೆ ಹಾಗೂ ಅವರ ಎಲ್ಲ ವ್ಯವಹಾರಗಳನ್ನು ನೀನೇ ಮಾಡಿದ್ದಾಗಿ ಒಪ್ಪಿಕೋ ಎಂದು ಮನೋಜ್ ಮೇಲೆ ಒತ್ತಡ ಹಾಕಿದ್ದಾರೆ ಎಂಬುದನ್ನು ನಮ್ಮ ವಕೀಲರಿಗೆ ಆತ ತಿಳಿಸಿದ್ದಾನೆ. ಸಿಬಿಐ ಹಾಗೂ ಸರಕಾರಿ ಸಂಸ್ಥೆಗಳಿಂದ ತನಿಖೆಯಾಗಿ ಇದರ ಹಿಂದಿರುವವರು ಯಾರು ಎಂಬುದು ಪತ್ತೆಯಾಗಲಿ ಎಂದಿದ್ದಾರೆ ದಿನೇಶ್ವರ್.