ಸಿಖ್ ಹತ್ಯಾಕಾಂಡ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾತು
ನವದೆಹಲಿ, ಡಿಸೆಂಬರ್ 05: ಸಿಖ್ ಹತ್ಯಾಕಾಂಡದ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾತನಾಡಿದ್ದಾರೆ. ತಮ್ಮ ಮೌನಕ್ಕೆ ಹೆಸರುವಾಸಿಯಾಗಿರುವ ಮನಮೋಹನ್ ಸಿಂಗ್, ಸಿಖ್ ಮಾರಣಹೋಮದಂತಹಾ ಐತಿಹಾಸಿಕ ಕರಾಳ ಘಟನೆ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯ ಭಾರಿ ಮಹತ್ವ ಪಡೆದುಕೊಂಡಿದೆ.
ನಿನ್ನೆ ಮಾಜಿ ಪ್ರಧಾನಿ ಐ.ಕೆ.ಗುಜ್ರಾಲ್ ಅವರ 100 ನೇ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮನಮೋಹನ್ ಸಿಂಗ್, 'ಐ.ಕೆ.ಗುಜರಾಲ್ ನೀಡಿದ್ದ ಸಲಹೆಯನ್ನು ಒಪ್ಪಿದ್ದರೆ ಸಿಖ್ ಮಾರಣಹೋಮವನ್ನು ತಡೆಯಬಹುದಾಗಿತ್ತು' ಎಂದು ಹೇಳಿದ್ದಾರೆ.
1984ರ ಸಿಖ್ ದಂಗೆ:ಕಾಂಗ್ರೆಸ್ಸಿನ ಸಜ್ಜನ್ ಕುಮಾರ್ ಗೆ ಜೀವಾವಧಿ ಶಿಕ್ಷೆ
ಮಾರಣಹೋಮ ಆರಂಭವಾದ ಕೂಡಲೇ ಐ.ಕೆ.ಗುಜ್ರಾಲ್ ಅವರು ಆಗಿನ ಗೃಹ ಸಚಿವ ಪಿ.ವಿ.ನರಸಿಂಹರಾವ್ ಅವರಿಗೆ ಸೇನೆಯನ್ನು ಕೂಡಲೇ ಕರೆಸಿಕೊಳ್ಳುವಂತೆ ಸಲಹೆ ನೀಡಿದ್ದರು. ಆದರೆ ಸಲಹೆಯನ್ನು ನರಸಿಂಹರಾವ್ ಸ್ವೀಕರಿಸಿರಲಿಲ್ಲ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.
1984 ರಲ್ಲಿ ನಡೆದ ಸಿಖ್ ನರಮೇಧದಲ್ಲಿ ಮೂರು ಸಾವಿರಕ್ಕಿಂತಲೂ ಹೆಚ್ಚಿಗೆ ಸಿಖ್ಖರನ್ನು ಹತ್ಯೆ ಮಾಡಲಾಗಿತ್ತು. ಇಂದಿರಾ ಗಾಂಧಿ ಹತ್ಯೆಗೆ ಪ್ರತಿಕಾರವಾಗಿ ಈ ಹತ್ಯೆಗಳು ನಡೆದವು.
1984ರ ಸಿಖ್ ಹತ್ಯಾಕಾಂಡ : ರಾಜೀವ್ ಗಾಂಧಿ ನಿಜಕ್ಕೂ ಆದೇಶ ನೀಡಿದ್ರಾ?
ಮುಂದುವರೆದು ಮಾತನಾಡಿದ ಮನಮೋಹನ್ ಸಿಂಗ್ ಅವರು, ಐಕೆ.ಗುಜ್ರಾಲ್ ಅವರೊಂದಿಗೆ ತಮ್ಮ ಸ್ನೇಹ, ಸಂಬಂಧದ ಬಗ್ಗೆ ನೆನಪುಗಳನ್ನು ಹಂಚಿಕೊಂಡರು.
ಕಡುಬಿನ ರುಚಿ ತಿಂದಾಗಲೇ ಗೊತ್ತಾಗೋದು: ಮೋದಿಗೆ ಮನಮೋಹನ್ ಸಿಂಗ್ ಟಾಂಗ್
ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸಹ ಮಾತನಾಡಿ, ಐ.ಕೆ.ಗುಜ್ರಾಲ್ ಅವರ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದು ಅಂದಿನ ಕಾಂಗ್ರೆಸ್ ಮುಖಂಡರು ತಪ್ಪು ಮಾಡಿದರು. ಹಾಗೆ ಮಾಡದೇ ಇದ್ದಿದ್ದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಇನ್ನಷ್ಟು ತಡವಾಗಬಹುದಿತ್ತು ಎಂದು ವಿಶ್ಲೇಷಿಸಿದರು.
'ಗುಜರಾಲ್ ಅವರ ಸಲಹೆಯನ್ನು ನರಸಿಂಹರಾವ್ ಅವರು ಸ್ವೀಕರಿಸಿ ಸ್ಪಂದಿಸಿದ್ದಿದ್ದರೆ ಹತ್ಯಾಕಾಂಡವನ್ನು ತಡೆಯಬಹುದಾಗಿತ್ತು' ಎಂದು ಮನಮೋಹನ್ ಸಿಂಗ್ ಹೇಳಿದರು.