ಬಿಜೆಪಿ ಸೇರ್ಪಡೆಯಾದ ಒಡಿಶಾ ಮಾಜಿ ಐಎಎಸ್ ಅಧಿಕಾರಿಣಿ
ನವದೆಹಲಿ, ನವೆಂಬರ್ 27: ಒಡಿಶಾ ಕೇಡರ್ನ ಮಾಜಿ ಐಎಎಸ್ ಅಧಿಕಾರಿ ಅಪರಾಜಿತಾ ಸಾರಂಗಿ ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.
ತಮ್ಮ ನಿವಾಸದಲ್ಲಿ ಹೂಗುಚ್ಛ ನೀಡುವ ಮೂಲಕ ಅಪರಾಜಿತಾ ಅವರನ್ನು ಅಮಿತ್ ಶಾ ಪಕ್ಷಕ್ಕೆ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಒಡಿಶಾ ಘಟಕದ ಅಧ್ಯಕ್ಷ ಬಸಂತ್ ಪಾಂಡಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತು ಅನೇಕ ಹಿರಿಯ ನಾಯಕರು ಉಪಸ್ಥಿತರಿದ್ದರು.
ನಾನು ವ್ಯಾಪಕವಾಗಿ ಜನರಿಗಾಗಿ ಕೆಲಸ ಮಾಡಲು ಬಯಸಿದ್ದೇನೆ. ನನಗೆ ಈ ರೀತಿಯ ಅವಕಾಶವನ್ನು ಒದಗಿಸಲು ಇರುವ ವೇದಿಕೆಯೆಂದರೆ ರಾಜಕೀಯ ಮಾತ್ರ. ಪಕ್ಷದ ತತ್ವಗಳು ಮತ್ತು ನಾಯಕತ್ವ ಬಿಜೆಪಿಯನ್ನು ಆಯ್ದುಕೊಳ್ಳುವಂತೆ ನನಗೆ ಪ್ರೇರೇಪಿಸಿತು. ಇದು ಅಭಿವೃದ್ಧಿಯ ಭರವಸೆಯ ಜತೆಗೆ ಅಭಿವೃದ್ಧಿಯಲ್ಲಿ ವೇಗವನ್ನೂ ಖಾತರಿಪಡಿಸಿದೆ ಎಂದು ಅಪರಾಜಿತಾ ತಿಳಿಸಿದರು.
ಅಪರಾಜಿತಾ ಸಾರಂಗಿ ಅವರು ಐಎಎಸ್ ಅಧಿಕಾರಿಯಾಗಿ ಆಡಳಿತದಲ್ಲಿ ಪಡೆದುಕೊಂಡಿರುವ ಅನುಭವವು ಪಕ್ಷವನ್ನು ಬಲಪಡಿಸಲು ನೆರವಾಗಲಿದೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.
ಬಿಜೆಪಿ ಕುಟುಂಬಕ್ಕೆ ಅವರನ್ನು ಸ್ವಾಗತಿಸುತ್ತೇನೆ. ಅವರ ಆಡಳಿತಾನುಭವ, ಮುಖ್ಯವಾಗಿ ಒಡಿಶಾದಲ್ಲಿ ಶಾಲೆಗಳು ಹಾಗೂ ಸಮೂಹ ಶಿಕ್ಷಣದ ಸುಧಾರಣೆಗೆ ಅವರು ಮಾಡಿದ ಕೆಲಸವು ರಾಜ್ಯದಲ್ಲಿ ಪಕ್ಷವನ್ನು ದೊಡ್ಡಮಟ್ಟದಲ್ಲಿ ಬಲಪಡಿಸಲು ಸಹಾಯ ಮಾಡಲಿದೆ.
1994ನೇ ಬ್ಯಾಚ್ನ ಅಧಿಕಾರಿಣಿಯಾದ ಅಪರಾಜಿತಾ, ಗ್ರಾಮೀಣಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ನಎಂನರೇಗಾ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಸೆಪ್ಟೆಂಬರ್ 15ರಂದು ಸೇವೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು.