ಅಚ್ಚರಿ, ಆಕ್ಷೇಪಕ್ಕೆ ಕಾರಣವಾದ ಸುಪ್ರೀಂಕೋರ್ಟ್ ಕೊಲಿಜಿಯಂ ನಿರ್ಧಾರ
ನವದೆಹಲಿ, ಜನವರಿ 17: ಹಿರಿಯ ನ್ಯಾಯಮೂರ್ತಿಗಳಿದ್ದರೂ ಸುಪ್ರೀಂಕೋರ್ಟ್ಗೆ ಕಿರಿಯ ನ್ಯಾಯಾಧೀಶರನ್ನು ನೇಮಿಸಿದ ನಿರ್ಧಾರಕ್ಕೆ ಮಾಜಿ ಮುಖ್ಯ ನ್ಯಾಯಮೂರ್ತಿ ಆರ್ ಎಂ ಲೋಧಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕೊಲಿಜಿಯಂ ನಿರ್ಧಾರಕ್ಕೆ ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ, ದೆಹಲಿ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಕೈಲಾಶ್ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಪ್ರೀಂಕೋರ್ಟ್ ಕೊಲಿಜಿಯಂ ತೀರ್ಮಾನಕ್ಕೆ ಆಕ್ಷೇಪ; ಏನಿದು ಹೊಸ ವಿವಾದ?
ಕೊಲಿಜಿಯಂ ಯಾವಾಗಲೂ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕು. ಒಂದು ನಿರ್ಧಾರವನ್ನು ಏಕೆ ಬದಲಿಸಲಾಯಿತು ಎನ್ನುವುದು ಜನರಿಗೆ ತಿಳಿಯಬೇಕು. ಕೊಲಿಜಿಯಂ ಒಂದು ಸಂಸ್ಥೆಯಾಗಿ ಕೆಲಸ ಮಾಡುತ್ತದೆ. ಅದು ಸಾಂಸ್ಥಿಕ ವ್ಯವಸ್ಥೆ, ಅದು ಯಾರದ್ದೇ ವೈಯಕ್ತಿಕ ನಿರ್ಧಾರವಾಗಲಾರದು. ಒಬ್ಬ ಕಿರಿಯ ನ್ಯಾಯಾಧೀಶರನ್ನು ಸುಪ್ರೀಂಕೋರ್ಟ್ಗೆ ನೇಮಿಸಿರುವುದು ನನಗೆ ಅಚ್ಚರಿ ಮೂಡಿಸಿದೆ ಎಂದು ಲೋಧಾ ಹೇಳಿದ್ದಾರೆ.
ಸುಮಾರು 30 ಹಿರಿಯ ನ್ಯಾಯಾಧೀಶರನ್ನು ಕಡೆಗಣಿಸಿ ಬಡ್ತಿ ನೀಡಿರುವುದು ದೇಶದ ಉನ್ನತ ನ್ಯಾಯಾಲಯದ ವಿಶ್ವಾಸಾರ್ಹತೆಯನ್ನು ಹಾಳು ಮಾಡುವ ಐತಿಹಾಸಿಕ ಅಪರಾಧವಾಗಿದೆ ಎಂದು ನ್ಯಾಯಮೂರ್ತಿ ಗಂಭೀರ್ ಹೇಳಿದ್ದಾರೆ.
ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿತ್ತು. ಅದಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹಿ ಹಾಕಿದ್ದಾರೆ.
ಡಿಸೆಂಬರ್ನಲ್ಲಿ ಹಿರಿಯ ನ್ಯಾಯಮೂರ್ತಿಗಳಾದ ಪ್ರದೀಪ್ ನಂದ್ರಜೋಗ್ ಮತ್ತು ರಾಜೇಂದ್ರ ಮೆನನ್ ಅವರ ಹೆಸರನ್ನು ಪರಿಗಣಿಸಲಾಗಿತ್ತು.
ನ್ಯಾ. ಪ್ರದೀಪ್ ನಂದ್ರಜೋಗ್ ಅವರ ಹಿರಿತನ ಕಡೆಗಣಿಸಿ ಸಂಜೀವ್ ಖನ್ನಾ ಅವರನ್ನು ಶಿಫಾರಸು ಮಾಡಿರುವುದನ್ನು ವಿರೋಧಿಸಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್ಕೆ ಕೌಲ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ಪತ್ರ ಬರೆದಿದ್ದಾರೆ.
ಬಾರ್ ಕೌನ್ಸಿಲ್ ಆಫ ಇಂಡಿಯಾದ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಕೊಲಿಜಿಯಂ ನಿರ್ಧಾರವನ್ನು ಅನ್ಯಾಯ ಮತ್ತು ಅನುಚಿತ ಎಂದು ಕರೆದಿದ್ದಾರೆ.