ಮಾಜಿ ಸಿಜೆಐ ಗೊಗೋಯಿ ವಿರುದ್ಧ ಆರೋಪಿಸಿದ್ದ ಮಹಿಳೆಗೆ ಕೊನೆಗೂ ನ್ಯಾಯ
ನವದೆಹಲಿ, ಜನವರಿ 22: ಸುಪ್ರೀಂಕೋರ್ಟ್ನ ಮಾಜಿ ಉದ್ಯೋಗಿಯೊಬ್ಬರು ಅಂದಿನ ಮುಖ್ಯ ನ್ಯಾಯಮೂರ್ತಿ ವಿರುದ್ಧವೇ ಲೈಂಗಿಕ ಕಿರುಕುಳದ ಆರೋಪ ಹೊರೆಸಿದ್ದು ನೆನಪಿರಬಹುದು. ಲೈಂಗಿಕ ಕಿರುಕುಳದ ವಿರುದ್ಧ #ಮೀಟೂ ಹೆಸರಿನಲ್ಲಿ ಬಹುದೊಡ್ಡ ಅಭಿಯಾನ ನಡೆದಿತ್ತು. ಇದೀಗ ಅದೇ ಸರಣಿಯಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ (ಸಿಜೆಐ)ಗಳ ವಿರುದ್ಧವೇ ಮೀಟೂ - ಅಥವಾ ಅದಕ್ಕಿಂತ ಹೆಚ್ಚಿನ - ಆರೋಪ ಕೇಳಿ ಬಂದಿತ್ತು.
ಈಗ ಸುಪ್ರೀಂಕೋರ್ಟಿನಿಂದ ಆ ಮಹಿಳೆಗೆ ನ್ಯಾಯ ದೊರಕಿದ್ದು, ಮತ್ತೊಮ್ಮೆ ಉದ್ಯೋಗಕ್ಕೆ ಸೇರಬಹುದಾಗಿದೆ. ಇಂಡಿಯನ್ ಎಕ್ಸ್ ಪ್ರೆಸ್ ವರದಿಯಂತೆ ಮಹಿಳೆ ಮತ್ತೊಮ್ಮೆ ಸುಪ್ರೀಂಕೋರ್ಟ್ ಕಚೇರಿಗೆ ಹಾಜರಾಗಿದ್ದು, ಕೆಲಸ ವಹಿಸಿಕೊಂಡಿದ್ದಾರೆ ನಂತರ ರಜೆ ಮೇಲೆ ತೆರಳಿದ್ದಾರೆ. ಅವರಿಗೆ ಸಿಗಬೇಕಿರುವ ಬಾಕಿ ಮೊತ್ತ ಎಲ್ಲವನ್ನು ಕ್ಲಿಯರ್ ಮಾಡಲಾಗಿದೆ.
ಗೊಗೋಯಿಗೆ ಕಪ್ಪು ಚುಕ್ಕೆಯಾಗಿ ಉಳಿದ ಲೈಂಗಿಕ ಕಿರುಕುಳ ಕೇಸ್
ಮೇ 2014ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆ 2018ರ ಅಕ್ಟೋಬರ್ ನಲ್ಲಿ ಅಂದಿನ ಸಿಜೆಐ ಗೊಗಾಯ್ ಅವರ ವಿರುದ್ಧ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ, ಅನಗತ್ಯವಾಗಿ ಬೇರೆ ಇಲಾಖೆಗೆ ವರ್ಗ ಮಾಡಿದ ಆರೋಪ ಮಾಡಿದ್ದರು.
ಲೈಂಗಿಕ ಕಿರುಕುಳ ಸಂತ್ರಸ್ತೆ ನೀಡಿದ್ದ ದೂರು
ಮುಖ್ಯ ನ್ಯಾಯಮೂರ್ತಿಗಳ ಲೈಂಗಿಕ ಬೇಡಿಕೆಯನ್ನು ನಿರಾಕರಿಸಿದ್ದಕ್ಕಾಗಿ ಕೆಲಸ ಕಳೆದುಕೊಳ್ಳುವುದು, ಬಂಧನ, ಪೊಲೀಸರಿಂದ ಹಿಂಸೆಯಂಥ ನಿರಂತರ ಕಿರುಕುಳದ ಘಟನೆಗಳನ್ನು ನನ್ನ ಕುಟುಂಬ ಅನುಭವಿಸಬೇಕಾಯಿತು ಎಂಬುದಾಗಿ ಆಕೆ ದೂರಿದ್ದಾರೆ. "ಸಿಜೆಐ ತಮ್ಮ ಸ್ಥಾನವನ್ನು, ಕಚೇರಿ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಮತ್ತು ಪೋಲಿಸರ ಮೇಲೆ ಪ್ರಭಾವ ಬೀರಿದ್ದಾರೆ ಎಂದು ನಾನು ಹೇಳುತ್ತೇನೆ," ಎನ್ನುವ ಆಕೆ ತಮ್ಮ ಅಫಿಡವಿಟ್ ಜತೆಗೆ ಕೆಲವು ಘಟನೆಗಳ ವಿಡಿಯೋ ಸಾಕ್ಷ್ಯಗಳನ್ನೂ ಒದಗಿಸಿದ್ದರು.
ಈ ಕುರಿತಂತೆ ಜಸ್ಟೀಸ್ ಎಸ್ಎ ಬೊಬ್ಡೆ(ಇಂದಿನ ಸಿಜೆಐ), ಜಸ್ಟೀಸ್ ಇಂದು ಮಲ್ಹೋತ್ರಾ, ಇಂದಿರಾ ಬ್ಯಾನರ್ಜಿ ಅವರಿದ್ದ ಆಂತರಿಕ ಸಮಿತಿ ತನಿಖೆ ಕೈಗೊಂಡು ಗೊಗಾಯ್ ಗೆ ಕ್ಲೀನ್ ಚಿಟ್ ನೀಡಿತ್ತು.
ಸಂತ್ರಸ್ತೆಯ ಪತಿ ಹಾಗೂ ಸಂಬಂಧಿಕರ ಬಗ್ಗೆ ದೂರುಗಳು ಕೇಳಿ ಬಂದು ಉದ್ಯೋಗವನ್ನು ಕಳೆದುಕೊಂಡಿದ್ದರು. ದೆಹಲಿ ಪೊಲೀಸರು ಇತ್ತೀಚೆಗೆ ಕ್ಲೀನ್ ಚಿಟ್ ವರದಿ ನೀಡಿದ ಬಳಿಕ ಇಬ್ಬರಿಗೂ ಹಳೆ ಉದ್ಯೋಗ ಮರಳಿ ಸಿಕ್ಕಿದೆ.
ವಿಡಿಯೋ ಸಾಕ್ಷ್ಯ ಕೂಡಾ ನೀಡಲಾಗಿತ್ತು
ಒಂದು ವಿಡಿಯೋದಲ್ಲಿ ದೆಹಲಿ ಪೊಲೀಸರು ಆಕೆಯನ್ನು ಇದೇ ಜನವರಿಯಲ್ಲಿ ಗೊಗೋಯಿ ನಿವಾಸಕ್ಕೆ ಕರೆದುಕೊಂಡ ಹೋದ ದೃಶ್ಯಗಳಿವೆ. ಈ ಸಂದರ್ಭದಲ್ಲಿ ಗೊಗೋಯಿ ಪತ್ನಿಯಲ್ಲಿ ಕ್ಷಮೆ ಕೇಳುವಂತೆ ಮಹಿಳಾ ಉದ್ಯೋಗಿಗೆ ಸೂಚಿಸಲಾಗಿತ್ತು. ಇನ್ನೊಂದು ವಿಡಿಯೋದ ಪ್ರಕಾರ ಈ ಬೆಳವಣಿಗೆಯನ್ನು 2019ರ ಜನವರಿ 11ರಂದೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ದೆಹಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಗಮನಕ್ಕೆ ತರಲಾಗಿತ್ತು ಎಂದು ತಿಳಿದು ಬರುತ್ತದೆ. ತಾವು ಮುಖ್ಯ ನ್ಯಾಯಮೂರ್ತಿ ಹುದ್ದೆಗೇರುವ ಮೊದಲು ಸಿಜೆಐ ರಂಜನ್ ಗೊಗೋಯಿ ಸುಪ್ರೀಂ ಕೋರ್ಟ್ ಮಾಜಿ ಉದ್ಯೋಗಿಯ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಬಗ್ಗೆ ವಿಶೇಷ ಆಸಕ್ತಿ ತಾಳಿದ್ದರು. ತೀಸ್ ಜನವರಿ ಮಾರ್ಗ್ನಲ್ಲಿದ್ದ ಗೃಹ ಕಚೇರಿಗೆ ಆಕೆಯನ್ನು ತಾವೇ ವರ್ಗ ಮಾಡಿಸಿಕೊಂಡಿದ್ದರು. ಅಲ್ಲಿ ಆಕೆಗೆ ತೀರಾ ಸಮೀಪದಲ್ಲಿ ಕುಳಿತು ಕೆಲಸ ಮಾಡುವಂತೆ ಹೇಳಲಾಗಿತ್ತು. ಎರಡು ಬೇರೆ ಬೇರೆ ಸಂದರ್ಭಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳು ಆಕೆಯ ವಿರೋಧದ ನಡುವೆಯೂ ಆಕೆಯನ್ನು ಸ್ಪರ್ಶಿಸಿದ್ದರು.
ಆಕೆ ಪತಿ, ಪತಿಯ ಸಹೋದರನಿಗೂ ಕಿರುಕುಳ
ಕೊನೆಗೆ 2018ರ ಡಿಸೆಂಬರ್ 21ರಂದು ಆಕೆಯನ್ನು ಸುಪ್ರೀಂ ಕೋರ್ಟ್ನಿಂದ ವಜಾ ಮಾಡಲಾಯಿತು. ಆಕೆಯ ಜತೆಗೆ ದೆಹಲಿ ಪೊಲೀಸ್ ಇಲಾಖೆಯಲ್ಲಿ ಪತಿ ಹಾಗೂ ಪತಿಯ ಸಹೋದರರನ್ನೂ ಕೆಲಸದಿಂದ ತೆಗೆದು ಹಾಕಲಾಯಿತು.
ಹರ್ಯಾಣ ಝಜ್ಜಾರ್ ನಿವಾಸಿ ನವೀನ್ ಕುಮಾರ್ ಎಂಬಾತ ದೆಹಲಿಯ ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಇದೇ ಮಹಿಳೆ ಮೇಲೆ ವಂಚನೆಯ ದೂರು ನೀಡಿದ್ದರು. ಅದರಲ್ಲವರು ಸುಪ್ರೀಂ ಕೋರ್ಟ್ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಆಕೆ ನನ್ನ ಬಳಿಯಲ್ಲಿ 50,000 ರೂಪಾಯಿ ಲಂಚ ಪಡೆದಿದ್ದಾರೆ ಎಂದು ದೂರಿದ್ದರು. ಈ ಎಫ್ಐಆರ್ ದಾಖಲಾದ ಐದು ದಿನಗಳ ನಂತರ ಮಾರ್ಚ್ 8ರಂದು ತಿಲಕ್ ಮಾರ್ಗ್ ಪೊಲೀಸ್ ಠಾಣೆಯಿಂದ ಪೊಲೀಸರು ಆಕೆ ಉಳಿದುಕೊಂಡಿದ್ದ ರಾಜಸ್ಥಾನದಲ್ಲಿರುವ ಪತಿಯ ಪೂರ್ವಜರ ಮನೆಗೆ ಬಂದಿದ್ದರು. ಮರು ದಿನ ತನ್ನ ಕುಟುಂಬಸ್ಥರ ಜತೆ ಪೊಲೀಸ್ ಠಾಣೆಗೆ ಹೋದರೆ ಆಕೆಯನ್ನು ಕ್ರೂರವಾಗಿ ನಡೆಸಿಕೊಳ್ಳಲಾಯಿತು. ಠಾಣೆ ಮುಖ್ಯಸ್ಥರು ಒಂದು ಪೂರ ರಾತ್ರಿ ಆಕೆಯನ್ನು ಕೈಕಾಲು ಸಮೇತ ಬೆಂಚೊಂದಕ್ಕೆ ಕಟ್ಟಿ ಹಾಕಿದ್ದರು. ಜತೆಗೆ ತುಳಿದು, ಕೀಳ ಪದಗಳಿಂದ ನಿಂದಿಸಲಾಯಿತು. ಅಲ್ಲಿಂದ ನ್ಯಾಯಾಲಯಕ್ಕೆ ಹಾಜರುಪಡಿಸಿ ಒಂದು ದಿನದ ಮಟ್ಟಿಗೆ ತಿಹಾರ್ ಜೈಲಿಗೆ ಅಟ್ಟಲಾಯಿತು. ಕೊನೆಗೆ ಮಾರ್ಚ್ 12ರಂದು ಜಾಮೀನು ಪಡೆದು ಆಕೆ ಜೈಲಿನಿಂದ ಹೊರ ಬಂದರು. ಆ ಪ್ರಕರಣದ ವಿಚಾರಣೆ ಪಟಿಯಾಲ ಕೋರ್ಟ್ನಲ್ಲಿ ನಡೆಯಿತು. ನಂತರ ಸೆಪ್ಟೆಂಬರ್ ತಿಂಗಳಿನಲ್ಲಿ ದೆಹಲಿ ನ್ಯಾಯಾಲಯವು ನಂತರ ಕೇಸ್ ಕ್ಲೋಸ್ ಮಾಡಿದೆ.
ಗೋಗೋಯಿ ನಿಮ್ಮ ಬಗ್ಗೆ ವಿಚಾರಿಸಿದ್ದಾರೆ
ಈಕೆ 2014ರ ಮೇನಲ್ಲಿ ಸುಪ್ರೀಂ ಕೋರ್ಟ್ಗೆ ಉದ್ಯೋಗಕ್ಕೆ ಸೇರಿಕೊಂಡಿದ್ದರು. ಗ್ರಂಥಾಲಯದಲ್ಲಿ ಟೈಪಿಂಗ್ ಮಾಡುವುದು ಮತ್ತು ಡಾಕ್ಯುಮೆಂಟೇಷನ್ ಕೆಲಸವನ್ನು ಆಕೆಗೆ ನೀಡಲಾಗಿತ್ತು. ಇದರ ಜತೆಗೆ ಬೇರೆ ಬೇರೆ ಕೋರ್ಟ್ ರೂಂಗಳಿಗೆ ಬೇಕಾದ ಪುಸ್ತಕ ಮತ್ತು ಆದೇಶಗಳನ್ನು ಲೈಬ್ರರಿಯಿಂದ ನೀಡುವ ಕೆಲಸವೂ ಆಕೆಯದಾಗಿತ್ತು. ಉಳಿದವರಿಗಿಂತ ಆಕೆ ಸ್ವಲ್ಪ ವೇಗ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದರು. ಹೀಗಾಗಿ ಬಲು ಬೇಗ ನ್ಯಾಯಮೂರ್ತಿಗಳ ಕೋರ್ಟ್ನಲ್ಲಿ ಆಕೆಗೆ ಹುದ್ದೆಯೊಂದನ್ನು ನೀಡಲಾಯಿತು. ಇಲ್ಲಿ ಆಕೆ 2015ನೇ ವರ್ಷದಲ್ಲಿ 8 ರಿಂದ 10 ತಿಂಗಳು ಕೆಲಸ ಮಾಡಿದರು. ಸರ್ವೋಚ್ಛ ನ್ಯಾಯಾಲಯದ ವಾರ್ಷಿಕ ಗೌಪ್ಯ ವರದಿಗಳ ಪ್ರಕಾರ 2014-15 ಮತ್ತು 2015-16ರ ಆಕೆಯ ಕೆಲಸ ಉತ್ತಮ ಮತ್ತು ಅತ್ಯುತ್ತಮವಾಗಿದೆ ಎಂದು ಷರಾ ಬರೆಯಲಾಗಿದೆ. ಮುಂದೆ 2016ರ ಅಕ್ಟೋಬರ್ನಲ್ಲಿ ಆಕೆಯನ್ನು ರಂಜನ್ ಗೊಗೋಯಿ ಕೋರ್ಟ್ಗೆ ವರ್ಗ ಮಾಡಲಾಯಿತು. ಇದೇ ಅವಧಿಯಲ್ಲಿ ಆಕೆ ಕಾನೂನು ಪದವಿಯನ್ನು ಓದುತ್ತಿದ್ದರು. 2018ರ ಆರಂಭದಲ್ಲಿ ಆಕೆ ಎಲ್ಎಲ್ಬಿ ಪರೀಕ್ಷೆಗೆಂದು ರಜೆ ಹಾಕಿದ್ದರು. ಆಕೆ ಮರಳಿ ಬಂದಾಗ ‘ಗೋಗೋಯಿ ನಿಮ್ಮ ಬಗ್ಗೆ ವಿಚಾರಿಸಿದ್ದಾರೆ,' ಎಂಬುದಾಗಿ ಕೋರ್ಟ್ ಮಾಸ್ಟರ್ ಆಕೆಗೆ ಬಂದು ತಿಳಿಸಿದ್ದರು. ಅಲ್ಲಿಂದ ನ್ಯಾಯಮೂರ್ತಿಗಳ ಜತೆಗಿನ ಆಕೆಯ ಸಂಪರ್ಕ ಆರಂಭವಾಯಿತು.
ನಾನು ಗೊಗೋಯಿ ಕಾಲಿಗೆ ಬಿದ್ದೆ ಆದರೆ, ನ್ಯಾಯ ಸಿಗಲಿಲ್ಲ
ಜನವರಿ 10ರಂದು ತಿಲಕ್ ಮಾರ್ಕ್ ಪೊಲೀಸ್ ಠಾಣಾಧಿಕಾರಿ ನರೇಶ್ ಸೋಲಂಕಿ ಗಂಡನನ್ನು ಕರೆಸಿಕೊಂಡು ಗೋಗೋಯಿ ಬಳಿ ಕರೆದುಕೊಂಡು ಹೋಗಿ ಹೆಂಡತಿಯಿಂದ ಕ್ಷಮೆ ಕೇಳಿಸುವಂತೆ ಸೂಚಿಸಿದರು. ಮಿ. ಗೊಗೋಯಿ ನನಗೆ 'ನಿನ್ನ ಮೂಗನ್ನು ನೆಲಕ್ಕೆ ಉಜ್ಜಿ ಇಲ್ಲಿಂದ ಜಾಗ ಖಾಲಿ ಮಾಡು' ಎಂದರು. ಆ ಸಮಯದಲ್ಲಿ ನನಗೆ ಬೇಕಾಗಿದ್ದ ಒಂದೇ ವಿಷಯವೆಂದರೆ ನನ್ನನ್ನು ಮತ್ತು ನನ್ನ ಕುಟುಂಬವನ್ನು ಉಳಿಸಿಕೊಳ್ಳಬೇಕಾಗಿತ್ತು. ನಾನು ಗೊಗೋಯಿ ಕಾಲಿಗೆ ಬಿದ್ದೆ ಮತ್ತು ಅವರ ಪಾದಕ್ಕೆ ಮೂಗನ್ನು ಉಜ್ಜಿದೆ. ಮತ್ತು ತಪ್ಪಾಯ್ತು ಎಂದು ಹೇಳಿ ಅಲ್ಲಿಂದ ಬಂದೆ." ಜತೆಗೆ ಯಾರಿಗೂ ಈ ಬಗ್ಗೆ ಹೇಳಬಾರದು ಎಂದ ಸೋಲಂಕಿ, "ನೀವು ಹೇಳಿದರೂ ಯಾರೂ ಕೇಳುವುದಿಲ್ಲ. ಇಲ್ಲಿ (ಪ್ರಕರಣದಲ್ಲಿ)ರುವುದು ಮುಖ್ಯ ನ್ಯಾಯಮೂರ್ತಿಗಳು," ಎಂದಿದ್ದಾರೆ. ಇದೆಲ್ಲಾ ನಡೆದ ಬಳಿಕ ಎರಡು ತಿಂಗಳು ಕಳೆಯಿತು. "ಈ ಅವಧಿಯಲ್ಲಿ ನಾನು ತೀವ್ರ ಖಿನ್ನತೆಯಲ್ಲಿದ್ದೆ. ಈ ಸಂದರ್ಭದಲ್ಲಿ ನನ್ನ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಗಾಸಿಪ್ಗಳು ಹರಿದಾಡುತ್ತಿದ್ದವು. ಸಿಜೆಐ ನಿರ್ದೇಶನದಂತೆ ನಾನು ಮೌನವಾಗಿದ್ದರೂ ನನಗೆ ಯಾಕೆ ಹೀಗೆ ತೊಂದರೆ ಕೊಡಲಾಯಿತು ಎಂದು ಆಕೆ ಅಸಹಾಯಕರಾಗಿ ಪ್ರಶ್ನಿಸಿದ್ದರು.