ದೆಹಲಿಯಲ್ಲಿ ಅತಿಯಾದ ಶೀತಗಾಳಿ; ಮಳೆ ಎಚ್ಚರಿಕೆ ಕೊಟ್ಟ ಇಲಾಖೆ
ನವದೆಹಲಿ, ಜನವರಿ 01: ಉತ್ತರ ಪ್ರದೇಶ ಹಾಗೂ ರಾಜಸ್ಥಾನದ ಕೆಲವು ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಅತಿಯಾದ ಶೀತಗಾಳಿ ಆವರಿಸುವುದಾಗಿ ಶುಕ್ರವಾರ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದೆಹಲಿ, ಹರಿಯಾಣ, ಚಂಡೀಗಢದಲ್ಲಿ ಮುಂದಿನ 48ರಿಂದ 72 ಗಂಟೆಗಳಲ್ಲಿ ಮಳೆಯಾಗುವುದಾಗಿಯೂ ಎಚ್ಚರಿಕೆ ನೀಡಿದೆ. ಉತ್ತರ ಹಿಮಾಲಯ ಪ್ರದೇಶದಲ್ಲಿ ಪಶ್ಚಿಮ ಮಾರುತ ಬೀಸುವ ಸಾಧ್ಯತೆಯಿದ್ದು, ಬಂಗಾಳ ಕೊಲ್ಲಿಯಲ್ಲಿ ತಳಮಟ್ಟದಿಂದ ಗಾಳಿ ಬೀಸುತ್ತಿರುವುದಿಂದ ಮುಂದಿನ 48-72 ಗಂಟೆಗಳ ಅವಧಿಯಲ್ಲಿ ಮಳೆಯಾಗುವ ಸೂಚನೆಯನ್ನು ನೀಡಿದೆ. ಮುಂದೆ ಓದಿ...
ಕರ್ನಾಟಕ ಹವಾಮಾನ ವರದಿ, ಬಹುತೇಕ ಜಿಲ್ಲೆಗಳಲ್ಲಿ ಚಳಿ, ಒಣಹವೆ
ಉತ್ತರ ಭಾರತದ ಹಲವೆಡೆ ಮಳೆ
ಉತ್ತರ ಭಾರತದ ಜಮ್ಮು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ರಾಜಸ್ಥಾನ, ಪಶ್ಚಿಮ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದ ವಾಯವ್ಯ ಭಾಗದಲ್ಲಿ ಮಳೆಯಾಗುವುದಾಗಿ ಸೂಚನೆ ನೀಡಿದೆ.
ಜನವರಿ 3ರಿಂದ 5ರವರೆಗೂ ಮಳೆ
ಜನವರಿ 3ರಿಂದ 5ರವರೆಗೂ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದ್ದು, ಮುಂದಿನ ನಾಲ್ಕೈದು ದಿನಗಳಲ್ಲಿ ಮಧ್ಯ ಹಾಗೂ ಉತ್ತರ ಭಾರತದ ಬಹುಭಾಗದಲ್ಲಿ ಕನಿಷ್ಠ ತಾಪಮಾನವು 3-5 ಡಿಗ್ರಿ ಸೆಲ್ಸಿಯಸ್ ಆಗಲಿದೆ ಎಂದು ತಿಳಿಸಿದೆ.
ಪಂಜಾಬ್, ಹರಿಯಾಣದಲ್ಲಿ ಭಾರೀ ಶೀತ ಗಾಳಿ
ಮುಂದಿನ 24 ಗಂಟೆಗಳಲ್ಲಿ ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶಗಳಲ್ಲಿ ಶೀತ ಗಾಳಿ ಮುಂದುವರೆಯುವುದಾಗಿ ತಿಳಿದುಬಂದಿದೆ. ಈ ಪ್ರದೇಶದಲ್ಲಿ ಮಂಜಿನ ದಟ್ಟಣೆಯೂ ಆಗುವುದಾಗಿ ತಿಳಿಸಿದೆ. ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಝೋರಾಂ, ತ್ರಿಪುರಾದಲ್ಲಿ ಮುಂದಿನ 48 ಗಂಟೆಗಳ ಕಾಲ ದಟ್ಟ ಮಂಜು ಆವರಿಸಲಿದೆ.
ಹದಿನೈದು ವರ್ಷಗಳಲ್ಲೇ ಕಡಿಮೆ ತಾಪಮಾನ
ದೆಹಲಿಯಲ್ಲಿ ಶುಕ್ರವಾರ ತಾಪಮಾನ 1.1 ಡಿಗ್ರಿ ಸೆಲ್ಸಿಯಸ್ ಗೆ ಇಳಿದಿದ್ದು, ಹದಿನೈದು ವರ್ಷಗಳಲ್ಲೇ ಅತಿ ಕಡಿಮೆ ತಾಪಮಾನ ಇದಾಗಿದೆ. ಉತ್ತರ ಭಾರತದೊಂದಿಗೆ, ದಕ್ಷಿಣ ಭಾರತದ ತಮಿಳುನಾಡು ಹಾಗೂ ಪುದುಚೆರಿಯಲ್ಲಿಯೂ ಮಳೆಯಾಗುವುದಾಗಿ ತಿಳಿದುಬಂದಿದೆ.