ಉತ್ತರ ಭಾರತದಲ್ಲಿ ಭಾರೀ ಶೀತ ಗಾಳಿ ಮುನ್ಸೂಚನೆ
ನವದೆಹಲಿ, ಡಿಸೆಂಬರ್ 26: ಉತ್ತರ ಭಾರತದ ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಭಾರೀ ಮಳೆಯಾಗುವ, ಹಾಗೆಯೇ ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿ ಶೀತಗಾಳಿ ಹೆಚ್ಚಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಡಿ.29ರವರೆಗೂ ವಾಯವ್ಯ/ಈಶಾನ್ಯ ಭಾಗಗಳಲ್ಲಿನ ಗಾಳಿಯ ಮಟ್ಟವು ಹೆಚ್ಚಿದ್ದು, ಶೀತಗಾಳಿ ಆವರಿಸುವುದಾಗಿ ಎಚ್ಚರಿಕೆ ನೀಡಿದೆ. ಈ ಡಿಸೆಂಬರ್ ಕೊನೆಯವರೆಗೂ ಕೆಲವು ರಾಜ್ಯಗಳನ್ನು ಶೀತ ಗಾಳಿ ಆವರಿಸಲಿದೆ. ಇದರ ಪರಿಣಾಮದಿಂದ ಪಶ್ಚಿಮ ಹಾಗೂ ಮಧ್ಯ ಭಾರತದಲ್ಲಿಯೂ ಶೀತಗಾಳಿ ಬೀಸಲಿದೆ ಎಂದು ಸೂಚನೆ ನೀಡಿದೆ. ಜಮ್ಮು ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಲಿಸ್ತಾನ ಹಾಗೂ ಮುಜಾಫರ್ ಬಾದ್ ನಲ್ಲಿ ಅತಿಯಾದ ಮಳೆ ಸಂಭವಿಸುವುದಾಗಿ ತಿಳಿಸಿದೆ.
ರಾಜ್ಯದ ಉತ್ತರ ಒಳನಾಡಿಗೆ ಮಳೆಯ ಮುನ್ಸೂಚನೆ ಕೊಟ್ಟ ಹವಾಮಾನ ಇಲಾಖೆ
ಪಂಜಾಬ್, ಹರಿಯಾಣದಲ್ಲಿ ಡಿ.27 ಹಾಗೂ 28ರಂದು ಗುಡುಗು ಸಹಿತ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ. ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ರಾಜಸ್ಥಾನ, ಪೂರ್ವ ಉತ್ತರ ಪ್ರದೇಶದಲ್ಲಿ ಶೀತ ಗಾಳಿ ಆವರಿಸಲಿದೆ. ಈ ರಾಜ್ಯಗಳಲ್ಲಿ ಬೆಳಗ್ಗಿನ ಸಮಯದಲ್ಲಿ ದಟ್ಟ ಮಂಜು ಮುಸುಕಿದ ವಾತಾವರಣ ಇರಲಿದೆ ಎಂದು ತಿಳಿಸಿದೆ. ಜಮ್ಮು ಕಾಶ್ಮೀರದಲ್ಲಿ ಹಿಮಪಾತದ ಮುನ್ಸೂಚನೆ ಇರುವುದಾಗಿ ತಿಳಿಸಿದೆ.