'ನ್ಯಾ ಕರ್ಣನ್ ಮಾನಸಿಕ ಆರೋಗ್ಯ ಪರೀಕ್ಷಿಸಿ, ಮೇ 8ರೊಳಗೆ ವರದಿ ಕೊಡಿ'
ನ್ಯಾ.ಕರ್ಣನ್ ಅವರ ಮಾನಸಿಕ ಆರೋಗ್ಯ ಪರೀಕ್ಷೆ ಮಾಡಿಸಿ, ಮೇ ಎಂಟರೊಳಗೆ ವರದಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೋರ್ಟ್ ಏಕೆ ಹೀಗೆ ಹೇಳಿತು ಎಂದು ತಿಳಿಯಲು ಈ ವರದಿ ಓದಿ
ನವದೆಹಲಿ, ಮೇ 1: ನ್ಯಾಯಮೂರ್ತಿ ಕರ್ಣನ್ ಮಾನಸಿಕ ಆರೋಗ್ಯದ ಪರೀಕ್ಷೆಗೆ ಸುಪ್ರೀಕೋರ್ಟ್ ಅದೇಶ ನೀಡಿದೆ. ಮೇ 8ರೊಳಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ. ಇದರ ಜತೆಗೆ ನ್ಯಾಯಾಂಗ ನಿಂದನೆ ಬಗ್ಗೆ ಪ್ರತಿಕ್ರಿಯೆ ನೀಡಬೇಕು ಎಂದು ಕೂಡ ಹೇಳಿದೆ. ಒಂದು ವೇಳೆ ಕರ್ಣನ್ ಪ್ರತಿಕ್ರಿಯೆ ನೀಡಲಿಲ್ಲ ಅಂದರೆ ಪೀಠವು ನ್ಯಾಯಾಂಗ ನಿಂದನೆಯಾಗಿ ಪರಿಗಣಿಸುತ್ತದೆ.
ಇದರ ಜತೆಗೆ ನ್ಯಾ.ಕರ್ಣನ್ ನೀಡಿದ ಅದೇಶಗಳೆಲ್ಲವನ್ನೂ ಅಮಾನ್ಯ ಮಾಡುತ್ತದೆ ಎಂದು ತಿಳಿಸಿದೆ. ಕಳೆದ ಬಾರಿ ವಿಚಾರಣೆ ನಡೆದ ವೇಳೆ, ಈ ಪ್ರಕರಣದ ಪ್ರಾಮುಖ್ಯ ಅರಿಯುವಷ್ಟು ಕರ್ಣನ್ ಮಾನಸಿಕವಾಗಿ ಆರೋಗ್ಯವಾಗಿದ್ದಾರಾ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೇಹರ್ ಪ್ರಶ್ನಿಸಿದ್ದರು.[ಸುಪ್ರೀಂ ಕೋರ್ಟ್ ಜಡ್ಜ್ ಗೇ 14 ಕೋಟಿ ರು. ಪರಿಹಾರ ಕೇಳಿದ ನ್ಯಾ. ಕರ್ಣನ್]
ಹಾಗಿದ್ದರೆ ಮಾನಸಿಕ ಆರೋಗ್ಯದ ಪ್ರಮಾಣ ಪತ್ರ ಸಲ್ಲಿಸಿ ಎಂದಿದ್ದರು. ಕೆಲಸಕ್ಕೆ ಸಂಬಂಧಿಸಿದ ಅನಿಶ್ಚಿತತೆ ಇದೆಯಾ ಎಂದು ಕೂಡ ಅವರು ಪ್ರಶ್ನಿಸಿದ್ದರು. ನನ್ನ ಕೆಲಸ ಮತ್ತೆ ಆರಂಭಿಸುವುದಕ್ಕೆ ಅವಕಾಶ ನೀಡುವವರೆಗೆ ಕೋರ್ಟ್ ಮುಂದೆ ಹಾಜರಾಗಲ್ಲ. ನಾನು ಜೈಲಿಗೆ ಹೋಗಲಿಕ್ಕೂ ಸಿದ್ಧ ಎಂದು ಕರ್ಣನ್ ಹೇಳಿದ್ದರು.
ಮೌಖಿಕ ಅಥವಾ ಲಿಖಿತ ರೂಪದಲ್ಲಿ ಅರ್ಜಿ ನೀಡುತ್ತೀರಾ ಎಂದು ಪ್ರಶ್ನಿಸಿದಾಗ, ನನ್ನ ಹೋರಾಟ ಮದ್ರಾಸ್ ಹೈ ಕೋರ್ಟ್ ನ ಭ್ರಷ್ಟಾಚಾರದ ವಿರುದ್ಧ, ವೈಯಕ್ತಿಕವಾದದ್ದಲ್ಲ ಎಂದಿದ್ದರು ಕರ್ಣನ್. ಕಲ್ಕತ್ತಾ ಹೈಕೋರ್ಟ್ ನ ಎಲ್ಲ ನ್ಯಾಯಾಂಗ ಕೆಲಸಗಳಿಂದ ದೂರ ಉಳಿಯುವಂತೆ ಅವರಿಗೆ ಸೂಚಿಸಲಾಗಿತ್ತು.[ಹೈಕೋರ್ಟ್ ಜಡ್ಜ್ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ]
ನಾನು ನ್ಯಾಯಾಂಗ ನಿಂದನೆ ಮಾಡಿಲ್ಲ ಮತ್ತು ಯಾವುದೇ ತಪ್ಪು ಮಾಡಿಲ್ಲ. ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ದೂರು ದಾಖಲಿಸುವ ಮುನ್ನ ನನಗೆ ಯಾವುದೇ ನೋಟಿಸ್ ನೀಡಿಲ್ಲ. ನನ್ನ ಕೆಲಸ ವಾಪಸ್ ಕೊಡಿ, ನಾನು ಸಾರ್ವಜನಿಕರಿಗೆ ಉತ್ತರಿಸಬೇಕಷ್ಟೇ ಎಮ್ದು ನ್ಯಾ.ಕರ್ಣನ್ ಹೇಳಿದ್ದರು.