ಕೇಂದ್ರದ ನೂತನ ಆರೋಗ್ಯ ಸಚಿವ ಮನ್ಸುಖ್ಗೆ ಚಿದಂಬರಂ ಸಲಹೆ
ನವದೆಹಲಿ, ಜುಲೈ 08:ಮೊದಲು ರಾಜ್ಯಗಳಿಗೆ ಲಸಿಕೆ ಪೂರೈಸುವ ಕೆಲಸವಾಗಬೇಕಿದೆ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಕೇಂದ್ರದ ನೂತನ ಆರೋಗ್ಯ ಸಚಿವ ಮನ್ಸುಖ್ಗೆ ಸಲಹೆ ನೀಡಿದ್ದಾರೆ.
ಹರ್ಷವರ್ಧನ್ ರಾಜಿನಾಮೆ ಬಳಿಕ ಕೇಂದ್ರ ಆರೋಗ್ಯ ಸಚಿವರಾಗಿ ಮನ್ಸುಖ್ ಮಾಂಡವಿಯಾ ಅಧಿಕಾರ ಸ್ವೀಕರಿಸಿದ್ದು, ಮೊದಲಿಗೆ ರಾಜ್ಯಗಳಿಗೆ ಲಸಿಕೆ ಪೂರೈಸುವತ್ತ ಮೊದಲು ಗಮನ ಹರಿಸಿ ಎಂದು ಕಾಂಗ್ರೆಸ್ ನಾಯಕ ಚಿದಂಬರಂ ಸಲಹೆ ನೀಡಿದ್ದಾರೆ.
ಭಾರತದ ನೂತನ ಆರೋಗ್ಯ ಸಚಿವರಾಗಿ ಮನ್ಸುಖ್ ಮಾಂಡವೀಯಾ
ಹೊಸ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರ ಮೊದಲ ಕಾರ್ಯವೆಂದರೆ ಎಲ್ಲಾ ರಾಜ್ಯಗಳಿಗೆ ಲಸಿಕೆಗಳನ್ನು ಸಮರ್ಪಕವಾಗಿ ಮತ್ತು ನಿರಂತರವಾಗಿ ಸರಬರಾಜು ಮಾಡುವುದನ್ನು ಖಚಿತಪಡಿಸುವುದು" ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಲಸಿಕೆಗಳು ಪೂರೈಕೆಯಾಗದ ಕಾರಣ ತಮಿಳುನಾಡಿನ ಹಲವಾರು ಕೇಂದ್ರಗಳಲ್ಲಿ ಲಸಿಕೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೊಮ್ಮೆ, ಲಸಿಕೆಗಳು ಮುಗಿದ ಕಾರಣ ತಮಿಳುನಾಡಿನ ಹಲವಾರು ಕೇಂದ್ರಗಳಲ್ಲಿ ಲಸಿಕೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಮನ್ಸುಖ್, ಗುಜರಾತ್ನ ಭಾವ್ನಗರ್ ಜಿಲ್ಲೆಯ ಪಲಿತಾನ್ ತಾಲ್ಲೂಕಿನ ಹಾನೋಲ್ ಎಂಬ ಸಣ್ಣ ಹಳ್ಳಿಯಿಂದ ಬಂದವರು. ಗುಜರಾತ್ ಕೃಷಿ ವಿಶ್ವವಿದ್ಯಾಲಯದಲ್ಲಿ ಪಶುವೈದ್ಯ ವಿಜ್ಞಾನ ಕಲಿತ ಅವರು, ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪೂರೈಸಿದ್ದಾರೆ.
ವಿದ್ಯಾರ್ಥಿ ದೆಸೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ (ಎಬಿವಿಪಿ) ಸದಸ್ಯರಾಗಿದ್ದ ಮಾಂಡವೀಯ, ಬಿಜೆಪಿಯ ಅನೇಕ ಹುದ್ದೆಗಳನ್ನು ನಿಭಾಯಿಸಿದ್ದಾರೆ. 2002ರಲ್ಲಿ ಅತಿ ಕಿರಿಯ ಶಾಸಕರಾಗಿ ಗುಜರಾತ್ ವಿಧಾನಸಭೆಗೆ ಆಯ್ಕೆಯಾದರು. ಆಗ ಅವರ ವಯಸ್ಸು 28. 2012ರಲ್ಲಿ ಅವರನ್ನು ಗುಜರಾತ್ನಿಂದ ರಾಜ್ಯಸಭೆಗೆ ಚುನಾಯಿಸಲಾಯಿತು.
2016ರಲ್ಲಿ ಮೊದಲ ಬಾರಿ ನರೇಂದ್ರ ಮೋದಿ ಸಂಪುಟವನ್ನು ಸೇರ್ಪಡೆಯಾದರು. ಆಗ ಅವರು ರಾಜ್ಯ ಸಾರಿಗೆ ಮತ್ತು ಹೆದ್ದಾರಿ, ಬಂದರು ಖಾತೆ ರಾಜ್ಯ ಸಚಿವರಾಗಿದ್ದರು. ಜತೆಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಕಿರಿಯ ಸಚಿವರೂ ಆಗಿದ್ದರು.