ವಿಮಾನ ಪ್ರಯಾಣಕ್ಕೆ ಆರೋಗ್ಯ ಸೇತು ಆಪ್ ಬೇಕೇ: ಇಲ್ಲಿದೆ ಮಾಹಿತಿ
ನವದೆಹಲಿ, ಮೇ.24: ಕೊರೊನಾ ವೈರಸ್ ಹರಡುವಿಕೆ ಭೀತಿ ಹಾಗೂ ನಾಲ್ಕನೇ ಅವಧಿಯ ಭಾರತ ಲಾಕ್ ಡೌನ್ ಜಾರಿಯ ನಡುವೆ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಲಿದೆ.
ಮೇ.25ರಿಂದ ಪ್ರಯಾಣಿಕರ ಸಂಚಾರಕ್ಕೆ ಅವಕಾಶ ನೀಡಿದ್ದು, ಕೊವಿಡ್-19 ಹರಡುವಿಕೆ ಕಡಿವಾಣ ಹಾಕುವಂತಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪ್ರತಿನಿತ್ಯ 190 ವಿಮಾನಗಳ ಆಗಮನ ಮತ್ತು 190 ವಿಮಾನಗಳ ನಿರ್ಗಮನಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ಕನಿಷ್ಠ 40 ಸಾವಿರ ಪ್ರಯಾಣಿಕರು ಪ್ರಯಾಣಿಸಲು ಸಾಧ್ಯವಾಗುತ್ತದೆ.
ಪ್ರಯಾಣಿಕರ ಸ್ವಾಗತಕ್ಕೆ ಸಿದ್ಧವಾದ ಬೆಂಗಳೂರು ವಿಮಾನ ನಿಲ್ದಾಣ
ಸೋಮವಾರ ಬೆಳಗ್ಗೆ 4.30ಕ್ಕೆ ಮೊದಲ ವಿಮಾನ ಹಾರಾಟ ನಡೆಸಲಿದೆ. ವಿಮಾನ ಪ್ರಯಾಣಿಕರಿಗೆ ಆರೋಗ್ಯ ಸೇತು ಆಪ್ ಕಡ್ಡಾಯವಲ್ಲ ಎಂದು ವಿಮಾನಯಾನ ಪ್ರಾಧಿಕಾರವು ತಿಳಿಸಿದೆ. ಪ್ರಯಾಣಿಕರು ಸ್ವವಿವರದ ಅರ್ಜಿಯನ್ನು ತುಂಬಬೇಕು. ಅಗತ್ಯ ಬಿದ್ದಲ್ಲಿ ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.
ಅತಿಹೆಚ್ಚು ಲಗೇಜ್ ಗಳಿಗೆ ಅನುಮತಿ ಇಲ್ಲ:
ವಿಮಾನ ಪ್ರಯಾಣಿಕರ ಸಂಚಾರಕ್ಕೆ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಒಂದು ಲಗೇಜ್ ಹಾಗೂ ಒಂದು ಚಿಕ್ಕ ಬ್ಯಾಗ್ ತೆಗೆದುಕೊಂಡು ಹೋಗುವುದಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಎಲ್ಲ ಲಗೇಜ್ ಗಳನ್ನು ತಪಾಸಣೆ ಮಾಡುವುದಕ್ಕೆ ಆಗುವುದಿಲ್ಲ. ಲಗೇಜ್ ಟ್ಯಾಗ್ ನ್ನು ಮೊದಲಿನಂತೆ ವಿಮಾನ ನಿಲ್ದಾಣಗಳಲ್ಲಿ ನೀಡಲಾಗುವುದಿಲ್ಲ, ಬದಲಿಗೆ ಪ್ರಯಾಣಿಕರೇ ಸಿದ್ಧಪಡಿಸಿಕೊಳ್ಳಬೇಕು.
ಇನ್ನು, ಎಲ್ಲ ಪ್ರಯಾಣಿಕರಿಗೆ ಆಹಾರ ಮತ್ತು ಪಾನೀಯ ವಿಭಾಗಕ್ಕೆ ಪ್ರವೇಶ ಇರುವುದಿಲ್ಲ. ಈ ಪ್ರದೇಶದಲ್ಲಿ ಪ್ರಯಾಣಿಕರಿಗೆ ಸ್ಯಾನಿಟೈಸಿಂಗ್ ವ್ಯವಸ್ಥೆ ಇರುತ್ತದೆ. ಶೌಚಾಲಯದ ವಿಭಾಗದಲ್ಲೂ ಪ್ರಯಾಣಿಕರಿಗೆ ವಿಶೇಷ ಸ್ಯಾನಿಟೈಸಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದೆಲ್ಲದ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.