ಮಿಜೋರಾಂನಲ್ಲಿ ಕೊವಿಡ್-19 ಸೋಂಕಿಗೆ ಮೊದಲ ಸಾವು
ನವದೆಹಲಿ, ಅಕ್ಟೋಬರ್.28: ಭಾರತದಲ್ಲಿ ಕೊರೊನಾವೈರಸ್ ಸೋಂಕಿಗೆ ಈವರೆಗೂ 1,20,010 ಜನರು ಪ್ರಾಣ ಬಿಟ್ಟಿದ್ದಾರೆ. ಕೊವಿಡ್-19 ಸೋಂಕಿತರ ಸಂಖ್ಯೆ 80 ಲಕ್ಷದ ಗಡಿ ದಾಟಿದ್ದರೂ ಕೂಡಾ ಮೀಜೋರಾಂನಲ್ಲಿ ಈವರೆಗೂ ಒಬ್ಬರೇ ಒಬ್ಬರು ಮಹಾಮಾರಿಯಿಂದ ಸಾವನ್ನಪ್ಪಿರುವ ಬಗ್ಗೆ ವರದಿ ಆಗಿರಲಿಲ್ಲ.
ಕೊರೊನಾವೈರಸ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ 62 ವರ್ಷದ ವ್ಯಕ್ತಿಯೊಬ್ಬರು ಬುಧವಾರ ಪ್ರಾಣ ಬಿಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿಗೆ ಮೊದಲ ಬಾರಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕದಲ್ಲಿ 2500 ರೂ. ಒಂದು ಕೊವಿಡ್-19 ನೆಗೆಟಿವ್ ಸರ್ಟಿಫಿಕೇಟ್!
ಕಳೆದ 24 ಗಂಟೆಗಳಲ್ಲಿ ಐವರು ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ಮಿಜೋರಾಂನಲ್ಲಿ ಒಟ್ಟು 2607 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 368 ಸಕ್ರಿಯ ಪ್ರಕರಣಗಳಿವೆ. ಉಳಿದಂತೆ 2238 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಭಾರತದಲ್ಲಿ ನಿಯಂತ್ರಣಕ್ಕೆ ಬಂದ ಕೊವಿಡ್-19:
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳಿಗಿಂತ ಗುಣಮುಖ ಪ್ರಕರಣಗಳ ಸಂಖ್ಯೆಯಲ್ಲೇ ಏರಿಕೆ ಕಂಡು ಬಂದಿದೆ. ಒಂದು ದಿನದಲ್ಲಿ 43893 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 58,439 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, 508 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶಾದ್ಯಂತ ಕೊವಿಡ್-19 ಸೋಂಕಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ. ಭಾರತದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ79,90,322ಕ್ಕೆ ಏರಿಕೆಯಾಗಿದೆ. ಮಹಾಮಾರಿಗೆ ದೇಶದಲ್ಲಿ ಈವರೆಗೂ 1,20,010 ಮಂದಿ ಪ್ರಾಣ ಬಿಟ್ಟಿದ್ದಾರೆ. 72,59,509 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಉಳಿದಂತೆ 6,10,803 ಸಕ್ರಿಯ ಪ್ರಕರಣಗಳಿವೆ.
Recommended Video