'ಪಟಾಕಿ ನಿಷೇಧ ಒಂದು ಸಮುದಾಯದ ವಿರುದ್ಧವಲ್ಲ': ಸುಪ್ರೀಂ ಕೋರ್ಟ್
ನವದೆಹಲಿ, ಅಕ್ಟೋಬರ್ 28: ಪಟಾಕಿಗಳನ್ನು ನಿಷೇಧ ಮಾಡುವುದು ಒಂದು ಸಮುದಾಯಕ್ಕೆ ವಿರೋಧವಾದುದ್ದು ಎಂಬ ವಿವಾದದ ಬಗ್ಗೆ ಗುರುವಾರ ತೀರ್ಪಿನ ಸಂದರ್ಭದಲ್ಲಿ ಹೇಳಿಕೆ ನೀಡಿರುವ ಸುಪ್ರೀಂ ಕೋರ್ಟ್, "ಪಟಾಕಿಯನ್ನು ನಿಷೇಧ ಮಾಡುವುದು ಯಾವುದೇ ಒಂದು ಸಮುದಾಯದ ವಿರುದ್ಧವಾದುದ್ದು ಅಲ್ಲ. ಆನಂದದ ನೆಪದಲ್ಲಿ ನಾಗರಿಕರ ಹಕ್ಕಿನ ಉಲ್ಲಂಘನೆ ಮಾಡಲು ಆಸ್ಪದ ನೀಡಲಾಗದು," ಎಂದು ತಿಳಿಸಿದೆ.
ನ್ಯಾಯಮೂರ್ತಿಗಳಾದ ಎಂ ಆರ್ ಶಾ ಹಾಗೂ ಎ ಎಸ್ ಬೋಪ್ಪಣ್ಣರನ್ನು ಒಳಗೊಂಡ ಸುಪ್ರೀಂ ಕೋರ್ಟ್ನ ದ್ವಿ ಸದಸ್ಯ ನ್ಯಾಯಪೀಠವು, ತನ್ನ ಆದೇಶವನ್ನು ಸಂಪೂರ್ಣವಾಗಿ ಜಾರಿಗೆ ತರಬೇಕು ಎಂದು ತಿಳಿಸಿದೆ. "ಆನಂದದ ನೆಪದಲ್ಲಿ ನೀವು (ಉತ್ಪಾದಕರು) ನಾಗರಿಕರ ಜೀವದ ಜೊತೆ ಆಟವಾಡಲು ಸಾಧ್ಯವಿಲ್ಲ. ನಾವು ಯಾವುದೇ ಒಂದು ಸಮುದಾಯದ ವಿರುದ್ಧವಾಗಿಲ್ಲ. ನಾವು ಕಠಿಣವಾದ ಸಂದೇಶವನ್ನು ಮಾತ್ರ ನೀಡಲು ಬಯಸುತ್ತೇವೆ. ನಾವು ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಇಲ್ಲಿ ಇದ್ದೇವೆ ಎಂದು ನಾವು ಸಂದೇಶವನ್ನು ನೀಡಲು ಬಯಸುತ್ತೇವೆ," ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.
ಅ. 1 ರಿಂದ 2022 ರ ಜ. 31 ರವರೆಗೆ ರಾಜಸ್ಥಾನದಲ್ಲಿ ಪಟಾಕಿ ನಿಷೇಧ
"ವಿವರವಾದ ಕಾರಣವನ್ನು ನೀಡಿ ಈ ಹಿಂದೆ ಪಟಾಕಿಯನ್ನು ನಿಷೇಧ ಮಾಡಿ ಆದೇಶವನ್ನು ಹೊರಡಿಸಲಾಗಿತ್ತು. ಎಲ್ಲಾ ಪಟಾಕಿಗಳನ್ನು ನಾವು ನಿಷೇಧ ಮಾಡಿಲ್ಲ. ನಾವು ಸಮಾಜದ ಹಿತದೃಷ್ಟಿಯಿಂದ ಈ ಪಟಾಕಿ ನಿಷೇಧವನ್ನು ಮಾಡಿದ್ದೇವೆ. ಆದರೆ ಈಗ ಒಂದು ನಿರ್ದಿಷ್ಟವಾದ ಅನಿಸಿಕೆಯನ್ನು ಸೃಷ್ಟಿ ಮಾಡಲಾಗುತ್ತಿದೆ," ಎಂದು ಸುಪ್ರೀಂ ಕೋರ್ಟ್ ಹೇಳಿದೆ. "ಸುಪ್ರೀಂ ಕೋರ್ಟ್ ಪಟಾಕಿಯನ್ನು ಒಂದು ನಿರ್ದಿಷ್ಟ ಕಾರಣದಿಂದಲೇ ನಿಷೇಧ ಮಾಡಿದೆ ಎಂದು ಬಿಂಬಿಸಬಾರದು. ಈ ಹಿಂದೆಯೇ ನಾವು ಆನಂದ ಪಡುವುದಕ್ಕೆ ಅಡ್ಡಿ ಆಗುತ್ತಿಲ್ಲ ಎಂದು ಹೇಳಿದ್ದೇವೆ. ನಾವು ನಾಗರಿಕರ ಮೂಲಭೂತ ಹಕ್ಕುಗಳಿಗೆ ಅಡ್ಡಿ ಮಾಡಲಾಗದು," ಎಂದು ಕೂಡಾ ಸುಪ್ರೀಂ ಕೋರ್ಟ್ ನ್ಯಾಯಪೀಠವು ಸ್ಪಷ್ಟನೆ ನೀಡಿದೆ.
"ಈ ಕೆಲವು ಪಟಾಕಿಗಳನ್ನು ನಿಷೇಧ ಮಾಡಿರುವ ಸುಪ್ರೀಂ ಕೋರ್ಟ್ನ ಆದೇಶವನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತರುವ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ವಹಿಸಲಾಗಿದೆ. ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಣೆ ಮಾಡಬೇಕು," ಎಂದು ಹೇಳಿದ ನ್ಯಾಯಾಧೀಶರುಗಳು ಇದೇ ಸಂದರ್ಭದಲ್ಲಿ ಈಗ ಪಟಾಕಿಗಳು ಬಹಿರಂಗವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದಿದ್ದಾರೆ.
"ನಾವು ನಾಗರಿಕರ ಹಕ್ಕುಗಳನ್ನು ರಕ್ಷಣೆ ಮಾಡಲು ಇಲ್ಲಿ ಇದ್ದೇವೆ ಎಂದು ಸಂದೇಶವನ್ನು ನೀಡಲು ನಾವು ಬಯಸುತ್ತೇವೆ. ಅಷ್ಟಕ್ಕೂ ನಾವು ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧ ಮಾಡಿಲ್ಲ. ಪಟಾಕಿಯಿಂದ ಉಂಟಾಗಿರುವ ಮಾಲಿನ್ಯದಿಂದಾಗಿ ದೆಹಲಿಯಲ್ಲಿ ಜನರು ಹೇಗೆ ಬಳಲುತ್ತಿದ್ದಾರೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ," ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಹಾಗೂ ಎ ಎಸ್ ಬೋಪ್ಪಣ್ಣರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.
ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗದು ಎಂದಿದ್ದ ಸುಪ್ರೀಂ
ಸುಪ್ರೀಂ ಕೋರ್ಟ್ನ ಆದೇಶವನ್ನು ಉಲ್ಲಂಘನೆ ಮಾಡಿದ ಕಾರಣಕ್ಕೆ ಯಾಕೆ ಶಿಕ್ಷೆ ವಿಧಿಸಬಾರದು ಎಂದು ಕಾರಣ ನೀಡುವಂತೆ ಸುಪ್ರೀಂ ಕೋರ್ಟ್ ಆರು ಪಟಾಕಿ ಉತ್ಪಾದಕ ಸಂಸ್ಥೆಗಳಿಗೆ ಸೂಚನೆ ನೀಡಿದೆ. ನಾವು ಪಟಾಕಿ ನಿಷೇಧದ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಉದ್ಯೋಗ ನೆಪದಲ್ಲಿ ಇತರ ನಾಗರಿಕರ ಬದುಕುವ ಹಕ್ಕಿನ ಉಲ್ಲಂಘನೆ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಾಯು ಮಾಲಿನ್ಯ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಪಟಾಕಿಯ ಉತ್ಪಾದನೆ ಹಾಗೂ ಮಾರಾಟಕ್ಕೆ ಸಂಪೂರ್ಣವಾಗಿ ನಿಷೇಧ ಹೇರಬೇಕು ಎಂದು ಆಗ್ರಹ ಮಾಡಿ ಈ ಹಿಂದೆ ಸುಪ್ರೀಂ ಕೋರ್ಟ್ ಪಟಾಕಿಗಳ ಮೇಲೆ ಸಂಪೂರ್ಣವಾಗಿ ನಿಷೇಧವನ್ನು ಹೇರಲು ನಿರಾಕರಿಸಿತ್ತು. "ಪರವಾನಗಿ ಹೊಂದಿರುವ ಉದ್ಯಮಿಗಳು ಮಾತ್ರ ಪಟಾಕಿಯನ್ನು ಮಾರಾಟ ಮಾಡಬಹುದು. ಅದು ಕೂಡಾ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬಹುದು. ಆನ್ಲೈನ್ ಮೂಲಕ ಪಟಾಕಿಗಳನ್ನು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ," ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
(ಒನ್ಇಂಡಿಯಾ ಸುದ್ದಿ)