ವೈರಲ್ ಜ್ವರಕ್ಕೆ ಡೆಂಗ್ಯೂ ಚಿಕಿತ್ಸೆ: ಮಗುವಿನ ಸಾವಿನ 6 ವರ್ಷದ ಮೇಲೆ FIR ದಾಖಲು
ದೆಹಲಿ, ನವೆಂಬರ್ 23: ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕೋ ಗಾದೆ ಕೇಳಿದ್ದೀವಿ. ಆದರೆ ವೈರಲ್ ಫಿವರ್ ಬಂದ್ರೆ ಡೆಂಗ್ಯೂಕ್ಕೆ ಚಿಕಿತ್ಸೆ ನೀಡುವ ಕಥೆ ಕೇಳಿದ್ದೀರಾ? ಇಂಥದೊಂದು ಆಘಾತಕಾರಿ ಘಟನೆಗೆ ದೆಹಲಿಯಲ್ಲಿ 10 ವರ್ಷದ ಮುದ್ದು ಕಂದಮ್ಮ ಬಲಿಯಾಗಿ, ಆರು ವರ್ಷವಾಗಿದೆ!
ಹಣಕ್ಕಾಗಿ ಹೆಣಕ್ಕೆ ಚಿಕಿತ್ಸೆ ನೀಡಿ 18 ಲಕ್ಷ ರೂ.ಬಿಲ್ಲು ಕೇಳಿತೇ ಫೋರ್ಟೀಸ್?!
ಆದರೆ ಬಾಲಕಿಯ ತಂದೆ-ತಾಯಿ ತಮ್ಮ ಮಗಳ ಸಾವಿಗೆ ಕಾರಣರಾದ ಡಾ.ಸುನಿಲ್ ಸರೀನ್ ಮತ್ತು ಡಾ ವಿವೇಕ್ ಕುಮಾರ್ ಎಂಬ ಇಬ್ಬರು ವೈದ್ಯರಿಗೆ ಶಿಕ್ಷೆ ನೀಡಬೇಕೆಂದು ಕಳೆದ ಆರು ವರ್ಷಗಳಿಂದ ಹೋರಾಡುತ್ತಿದ್ದಾರೆ. ಕೊನೆಗೂ ಇದೀಗ ಪೊಲೀಸರು ವೈದ್ಯರ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ವೈರಲ್ ಜ್ವರದಿಂದ ಬಳಲುತ್ತಿದ್ದ ರಿತು ಎಂಬ 10 ವರ್ಷದ ಬಾಲಕಿಯನ್ನು ಅಕ್ಟೋಬರ್ 21, 2011 ರಂದು ದೆಹಲಿಯ ಆರ್ ಎಲ್ ಕೆಸಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಆಕೆಯನ್ನು ಸರಿಯಾಗಿ ತಪಾಸಣೆ ಮಾಡದ ಡಾ.ಸುನಿಲ್ ಸರೀನ್ ಮತ್ತು ಡಾ ವಿವೇಕ್ ಕುಮಾರ್ ಎಂಬ ಇಬ್ಬರು ವೈದ್ಯರು, ಆಕೆಗೆ ಡೆಂಗ್ಯೂ ಇದೆ ಎಂದು ಚಿಕಿತ್ಸೆ ನೀಡಿದ್ದರು.
ಹಣಕ್ಕಾಗಿ ಹೆಣಕ್ಕೆ ಚಿಕಿತ್ಸೆ: ಸಮಜಾಯಿಷಿ ನೀಡಿದ ಫೋರ್ಟೀಸ್ ಆಸ್ಪತ್ರೆ
ಆದರೆ ದಿನ ಕಳೆಯುತ್ತಾ ಮಗುವಿನ ಸ್ಥಿತಿ ಚಿಂತಾಜನಕವಾಗುತ್ತಿದ್ದಂತೆಯೇ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಮಗುವನ್ನು ಸ್ಥಳಾಂತರಿಸಲಾಗಿತ್ತು. ಅಲ್ಲಿ ಸೇರಿಸಿದ ಕೆಲವೇ ದಿನಗಳಲ್ಲಿ ಮಗು ಅಸುನೀಗಿತ್ತು!
ಮಗುವಿಗೆ ವೈರಲ್ ಜ್ವರ ಬಂದಿದ್ದರೂ, ಆಕೆಗೆ ಡೆಂಗ್ಯೂ ಬಂದಿದೆ ಎಂದು ತಪ್ಪಾಗಿ ತಪಾಸಿಸಿ ಚಿಕಿತ್ಸೆ ನೀಡಲಾಗಿತ್ತು ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಪುತ್ರಿಯನ್ನು ಕಳೆದುಕೊಂಡ ಶೋಕದಲ್ಲಿದ್ದ ಪಾಲಕರು ಕಾನೂನಿನ ಮೊರೆಹೋಗಿದ್ದರು. ಈ ಸಂಬಂಧ ದೆಹಲಿ ಮೆಡಿಕಲ್ ಕೌನ್ಸಿಲ್ ಬಳಿ ಮಾಹಿತಿ ಕೇಳಿದ್ದ ಪೊಲೀಸರಿಗೆ, 'ಇದು ವೈದ್ಯರ ನಿಲರ್ಕ್ಷ್ಯದಿಂದ ನಡೆದ ಘಟನೆಯಲ್ಲ' ಎಂಬ ಸಮಜಾಯಿಷಿ ಸಿಕ್ಕಿದೆ!
ತಪ್ಪು ಚಿಕಿತ್ಸೆ ನೀಡಿದ್ದಕ್ಕಾಗಿ ಆಸ್ಪತ್ರೆ ಹೇಳಿದ ಬಿಲ್ ಅನ್ನು ಪಾವತಿಸದಿರುವಂತೆ ನವದೆಹಲಿ ಮುನ್ಸಿಲಿಪಲ್ ಕೌನ್ಸಿಲ್ ಹೇಳಿತ್ತು. ಅಷ್ಟೇ ಅಲ್ಲ, ಮೆಡಿಕಲ್ ಪ್ಯಾನೆಲ್ ನಿಂದ ಈ ಆಸ್ಪತ್ರೆಯ ಹೆಸರನ್ನು ತೆಗೆದುಹಾಕಲಾಗಿತ್ತು. "ಎಲ್ಲವೂ ಸರಿ, ಆದರೆ ಮುದ್ದು ಕಂದಮ್ಮನ ಜೀವವನ್ನು ಮರಳಿ ಕೊಡುವ ಶಕ್ತಿ ಆ ವೈದ್ಯರಿಗಿದೆಯಾ?, ಆ ವೈದ್ಯರಿಗೆ ಈಗಲೂ ಶಿಕ್ಷೆಯಾಗುತ್ತದೆ ಎಮಬ ನಂಬಿಕೆ ನನಗಿಲ್ಲ" ಎನ್ನುತ್ತಾರೆ ಪುತ್ರಿಯನ್ನು ಕಳೆದುಕೊಂಡ ತಂದೆ.
ಆರು ವರ್ಷದ ನಂತರ ದೂರು ದಾಖಲಿಸಿಕೊಂಡಿರುವ ಪೊಲೀಸರು ಈ ತಂದೆ-ತಾಯಿಗೆ ನ್ಯಾಯ ನೀಡಿ, ಆ ವೈದ್ಯರಿಗೆ ಶಿಕ್ಷೆಯಾಗುವಂತೆ ಮಾಡುತ್ತಾರಾ ಎಂಬುದೇ ಈಗಿರುವ ಕುತೂಹಲದ ಪ್ರಶ್ನೆ.