ಕೇದಾರನಾಥಕ್ಕೆ ಸಾಕುನಾಯಿ ಕರೆದುಕೊಂಡು ಹೋದ ಭಕ್ತನ ವಿರುದ್ಧ ಎಫ್ಐಆರ್!
ಡೆಹ್ರಾಡೂನ್, ಮೇ 24: ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಕೇದಾರನಾಥ ದೇವಸ್ಥಾನದ ನಂದಿ ವಿಗ್ರಹ ಸ್ಪರ್ಶಿಸಿ ನಮಸ್ಕರಿಸಿದ್ದ 'ನವಾಬ್' ಹೆಸರಿನ ನಾಯಿಯ ಮಾಲೀಕ ರೋಹಿತ್ ತ್ಯಾಗಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ದೇವಸ್ಥಾನ ಸಮಿತಿಯ ದೂರಿನ ಮೇರೆಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನೋಯ್ಡಾ ಮೂಲದ ರೋಹಿತ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಫ್ಐಆರ್ ದಾಖಾಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೋಹಿತ್ ತ್ಯಾಗಿ, "ತನ್ನನ್ನು ತಾನು ರಕ್ಷಿಸಿಕೊಳ್ಳಲಾಗದ ಜೀವಿಯನ್ನು ಬಿಡದಿರುವಷ್ಟು ಕಠಿಣವಾಗಬಾರದು ಎಂದು" ಬೇಸರ ವ್ಯಕ್ತಪಡಿಸಿದ್ದಾರೆ.
ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್ ದಂಪತಿ
"ಪವಿತ್ರ ದೇವಸ್ಥಾನದಲ್ಲಿ ನಾಯಿಯನ್ನು ನೋಡಿ ಜನ ಆಶ್ಚರ್ಯ ವ್ಯಕ್ತಪಡಿಸಿದರು" ಎಂದು ಅವರು ತಿಳಿಸಿದರು. ನಾಲ್ಕೂವರೆ ವರ್ಷ ವಯಸ್ಸಿನ ಹಸ್ಕಿ ತಳಿಯ ನಾಯಿ "ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಅನೇಕ ದೇವಾಲಯಗಳಿಗೆ ಭೇಟಿ ನೀಡಿತ್ತು, ಚಾರ್ಧಾಮ್ ಯಾತ್ರೆಯ ಸಂದರ್ಭದಲ್ಲಿ ಕೇದಾರನಾಥ ದೇವಾಲಯದ ಭೇಟಿ ವೇಳೆ ಅನೇಕ ಜನ ನವಾಬ್ನನ್ನು ನೋಡಿ ಮೆಚ್ಚಿಕೊಂಡರು" ಎಂದು ಮಾಲೀಕರು ಹೇಳಿದ್ದಾರೆ.
ನೊಂದಣಿಯಿಲ್ಲದೆ ಚಾರ್ಧಾಮ್ ದರ್ಶನಕ್ಕೆ ಜನರ ದಂಡು: 2013ರ ದಾಖಲೆ ಬ್ರೇಕ್
|
ನಾಯಿ ಬಗ್ಗೆ ದೇವಾಲಯ ಸಮಿತಿಯಿಂದ ದೂರು
ತ್ಯಾಗಿ ಅವರ ನಾಯಿಯೊಂದಿಗಿನ ವೀಡಿಯೋ ವೈರಲ್ ಆದ ನಂತರ, ಬದರಿನಾಥ-ಕೇದಾರನಾಥ ದೇವಾಲಯದ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಅದನ್ನು ಗಮನಿಸಿದ್ದರು. ಘಟನೆ ಕುರಿತಂತೆ ದೇವಾಲಯದ ಸಮಿತಿಯು ಕೇದಾರನಾಥ ಹೊರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಂದಿಯನ್ನು ನಾಯಿ ಸ್ಪರ್ಶಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಈ ರೀತಿಯ ಘಟನೆಗಳು ಮತ್ತೆ ಸಂಭವಿಸದಂತೆ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ
ಎಫ್ಐಆರ್ ದಾಖಲಾದ ನಂತರ #MakeIndiaPetFriendly ಎಂಬ ಟ್ಯಾಗ್ನೊಂದಿಗೆ ರೋಹಿತ್ ತ್ಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ, "ಕೇದಾರನಾಥನ ಆಶೀರ್ವಾದವು ನಮ್ಮ ಮೇಲಿದೆ. ಹಲವರು ನಮಗೆ ಬೆಂಬಲ ನೀಡಿದ್ದಾರೆ. 'ನವಾಬ' ಹೊಸ ಇತಿಹಾಸ ಸೃಷ್ಟಿಸಲಿ, ಭಾರತವನ್ನು ಸಾಕುಪ್ರಾಣಿ ಸ್ನೇಹಿ ದೇಶವನ್ನಾಗಿ ಮಾಡಬಹುದು ಎಂಬುದಕ್ಕೆ ಇದು ಉದಾಹರಣೆಯಾಗಲಿ!" ಎಂದು ತಿಳಿಸಿದ್ದಾರೆ. ತ್ಯಾಗಿ ಪೋಸ್ಟ್ಗೆ ಸಾಕಷ್ಟು ಜನ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವರು ನಾಯಿಯನ್ನು ದೇವಸ್ಥಾನಕ್ಕೆ ಏಕೆ ಕರೆದುಕೊಂಡು ಹೋಗಿದ್ದೀರಿ ಎಂದು ಪ್ರಶ್ನಿಸಿದ್ದಾರೆ, ಅವರಿಗೆ ಉತ್ತರ ನೀಡಿರುವ ತ್ಯಾಗಿ, ನವಾಬ್ ನಮ್ಮ ಮನೆಯ "ಮಗು" ಇದ್ದಂತೆ, ಕುಟುಂಬಗಳು ಪ್ರವಾಸ ಹೋದಾಗ ಮಕ್ಕಳನ್ನು ಮನೆಯಲ್ಲಿ ಬಿಡುವುದಿಲ್ಲ" ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ರೋಹಿತ್ಗೆ ಬೆಂಬಲ
ತ್ಯಾಗಿ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅನೇಕರು ಮೆಚ್ಚಿಕೊಂಡಿದ್ದರು. ಈಗ ಎಫ್ಐಆರ್ ದಾಖಲಿಸಿರುವದಕ್ಕೆ ಹಲವು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾಯಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋದರೆ ತಪ್ಪೇನು ಎಂದು ಪ್ರಶ್ನೆ ಮಾಡಿದ್ದಾರೆ.
"ತಾನು ಸಾಕಿರುವ ನಾಯಿಯನ್ನು ಪ್ರೀತಿಸುವ ರೋಹಿತ್ ತ್ಯಾಗಿಯದ್ದು ಯಾವ ತಪ್ಪು ಇಲ್ಲ, ಕೇದಾರನಾಥ ದೇವಸ್ಥಾನಕ್ಕೆ ನಾಯಿಯನ್ನು ಕರೆದೊಯ್ದ ಅವರ ನಡೆ ಸರಿಯಾಗಿದೆ" ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ.
ಚಾರ್ ಧಾಮ್ ಯಾತ್ರೆಗೆ ಭಕ್ತಸಾಗರ
ಚಾರ್ ಧಾಮ್ ಯಾತ್ರೆಗೆ ದಾಖಲೆ ಪ್ರಮಾಣದ ಯಾತ್ರಾರ್ಥಿಗಳು ಭೇಟಿ ನೀಡುತ್ತಿದ್ದಾರೆ. ಇದುವರೆಗೆ ದೇಶ, ವಿದೇಶಗರಿಂದ ಸುಮಾರು 8 ಲಕ್ಷ ಜನ ಉತ್ತಾರಖಂಡದ ಬದರಿನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮನೋತ್ರಿ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ಇನ್ನೂ ಒಂದು ಲಕ್ಷ ಜನ ಯಾತ್ರೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬದರಿನಾಥಕ್ಕೆ ಒಂದು ದಿನಕ್ಕೆ 16,000 ಯಾತ್ರಾರ್ಥಿಗಳಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಕೇದಾರನಾಥಕ್ಕೆ ದಿನಕ್ಕೆ 13,000, ಗಂಗೋತ್ರಿಗೆ 8,000 ಮತ್ತು ಯಮುನೋತ್ರಿ, ಹೇಮಕುಂಡ್ ಸಾಹಿಬ್ಗೆ 5000 ಯಾತ್ರಾರ್ಥಿಗಳು ಮಾತ್ರ ಭೇಟಿ ನೀಡಲು ಅವಕಾಶ ನೀಡಲಾಗಿದೆ.