ಸಜ್ಜನ್ ಕುಮಾರ್ ರನ್ನು ಜೈಲಿಗಟ್ಟಿದ ತಂದೆ ಮಗಳ ವಕೀಲ ಜೋಡಿ
ನವದೆಹಲಿ, ಡಿಸೆಂಬರ್ 19 : 1984 ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ 34 ವರ್ಷಗಳ ನಂತರ ನೀಡಿರುವ ತೀರ್ಪು ಸಮಸ್ತ ಸಿಖ್ ಸಮುದಾಯಕ್ಕೆ ಭಾವನಾತ್ಮಕ ಸಂಗತಿಯಾಗಿದೆ. ಸತ್ಯಕ್ಕೆ ಕಡೆಗೂ ಜಯ ಸಂದಿದೆ ಎಂದು ಕೆಲವರು ಸಂಭ್ರಮಿಸುತ್ತಿದ್ದರೆ, ಬಂಧುಗಳನೇಕರನ್ನು ಕಳೆದುಕೊಂಡಿರುವ ಕೆಲವರು ಕಂಬನಿ ಮಿಡಿಯುತ್ತಿದ್ದಾರೆ.
ಇಂದಿರಾ ಗಾಂಧಿಯ ಹತ್ಯೆ ನಂತರ, ಮೂರು ಸಾವಿರಕ್ಕೂ ಹೆಚ್ಚು ಸಿಖ್ಖರನ್ನು ಬಲಿ ತೆಗೆದುಕೊಂಡಿದ್ದ 1984ರ ನವೆಂಬರ್ 1ರಿಂದ 4ರವರೆಗೆ ನಡೆದಿದ್ದ ನರಮೇಧಕ್ಕೆ ಕುಮ್ಮಕ್ಕು ಕೊಟ್ಟಿದ್ದರೆಂಬ ಆರೋಪದ ಮೇಲೆ ವಿಚಾರಣೆಯಾಗಿ, ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಮತ್ತಿಬ್ಬರಿಗೆ ದೆಹಲಿ ಹೈಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ. ಸಜ್ಜನ್ ಅವರು ಡಿಸೆಂಬರ್ 31ರೊಳಗೆ ನ್ಯಾಯಾಲಯಕ್ಕೆ ಶರಣಾಗಬೇಕಿದೆ.
1984ರ ಸಿಖ್ ದಂಗೆ:ಕಾಂಗ್ರೆಸ್ಸಿನ ಸಜ್ಜನ್ ಕುಮಾರ್ ಗೆ ಜೀವಾವಧಿ ಶಿಕ್ಷೆ
34 ವರ್ಷಗಳಿಂದ ನ್ಯಾಯಕ್ಕಾಗಿ ಕಾದು ಕುಳಿತಿದ್ದ ಸಿಖ್ಖರಿಗೆ ಮಾತ್ರ ಈ ತೀರ್ಪಿನಿಂದ ಖುಷಿಯಾಗಿಲ್ಲ, ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಕೂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಅಲ್ಲದೆ, ಈ ಪ್ರಕರಣದಲ್ಲಿ ವಿಚಾರಣೆ ನಡೆಸಿದ ತಂದೆ ಮತ್ತು ಮಗಳನ್ನು ಒಳಗೊಂಡ ತಂಡದಲ್ಲಿ ಇದ್ದವರೆಲ್ಲರೂ ಸಿಖ್ ಸಮುದಾಯದವರೇ. ಸಂತ್ರಸ್ತರನ್ನು ಪ್ರತಿನಿಧಿಸಿದ್ದು ಕೂಡ ಎಚ್ಎಸ್ ಫೂಲ್ಕಾ ಎಂಬ ಸಿಖ್ ಸಮುದಾಯಕ್ಕೆ ಸೇರಿದ ಜನಪ್ರಿಯ ವಕೀಲ.
ಸಜ್ಜನ್ ರನ್ನು ಜೈಲಿಗಟ್ಟಿದ ಅಪ್ಪ ಮಗಳು
2010ರಲ್ಲಿ ಆರ್ ಎಸ್ ಚೀಮಾ ಎಂಬುವವರನ್ನು ಸಿಬಿಐ ವಿಶೇಷ ಪಬ್ಲಿಕ್ ಪ್ರಾಸಿಕ್ಯುಟರ್ ಆಗಿ ನೇಮಿಸಿತ್ತು. ಕಲ್ಲಿದ್ದಲು ಹಗರಣದಲ್ಲಿ ಹಲವಾರು ಐಎಎಸ್ ಅಧಿಕಾರಿ ಮತ್ತು ಮಾಜಿ ಕಲ್ಲಿದ್ದಲು ಖಾತೆಯ ಕಾರ್ಯದರ್ಶಿ ಎಚ್ ಸಿ ಗುಪ್ತಾ ಅವರನ್ನು ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದ ಚೀಮಾ ಅವರು 1984ರ ಸಿಖ್ ವಿರೋಧಿ ದಂಗೆಯ ಪ್ರಕರಣದಲ್ಲಿ ವಾದ ಮಂಡಿಸಲು ಚಂಡೀಗಢದಿಂದ ದೆಹಲಿಗೆ ಹಲವಾರು ಬಾರಿ ಪಯಣಿಸಬೇಕಾಯಿತು. ಅವರ ಮಗಳು ತರನ್ನುಮ್ ಚೀಮಾ ಅವರು ಕೂಡ ಕಾನೂನು ಪದವಿ ಪಡೆದಿದ್ದು, ತಮ್ಮ ತಂದೆಗೆ ಈ ಪ್ರಕರಣದಲ್ಲಿ ಸಹಾಯ ಮಾಡಿದ್ದಾರೆ.
ಚಿತ್ರ ಕೃಪೆ : barandbench.com
ಶ್ರೇಯ ಸಲ್ಲಬೇಕಾದ್ದು ತರನ್ನುಮ್ ಚೀಮಾಗೆ
ಈ ಪ್ರಕರಣವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಕ್ಕಾಗಿ ನಾನು ನನ್ನ ಮಗಳಿಗೆ ಶ್ರೇಯವನ್ನು ನೀಡುತ್ತೇನೆ. ಅವಳೇ ದೆಹಲಿಗೆ ಹೋಗಿ ಎಲ್ಲ ಸಾಕ್ಷಿಗಳನ್ನು ಭೇಟಿ ಮಾಡಿ, ಅವರನ್ನು ತಯಾರು ಮಾಡಿ, ಕೇಸನ್ನು ನಿಭಾಯಿಸಿದ್ದಾರೆ ಎಂದು ಎನ್ಡಿಟಿವಿಗೆ ಚೀಮಾ ಅವರು ತಿಳಿಸಿದ್ದಾರೆ. ಅದರಲ್ಲಿಯೂ ಇಬ್ಬರು ಪ್ರಮುಖ ಪ್ರತ್ಯಕ್ಷ ಸಾಕ್ಷಿಗಳಾಗಿದ್ದ ಜಗ್ದೀಶ್ ಕೌರ್ ಮತ್ತು ನಿರ್ಪ್ರೀತ್ ಕೌರ್ ಅವರು ನೀಡಿದ ಮಾಹಿತಿಯ ಆಧಾರದ ಮೇಲೆ ಸಜ್ಜನ್ ಕುಮಾರ್ ಅವರ ಆರೋಪ ಸಾಬೀತಾಗಿದೆ. ಈ ಇಬ್ಬರು ಮಹಿಳೆಯರೂ ತಮ್ಮ ಮನೆಯ ಸದಸ್ಯರನ್ನು 34 ವರ್ಷಗಳ ಹಿಂದೆ ನಡೆದ ನರಮೇಧದಲ್ಲಿ ಕಳೆದುಕೊಂಡಿದ್ದರು.
ಚಿತ್ರ ಕೃಪೆ : facebook
ಸತ್ಯ ಗೆಲ್ಲಲಿದೆ ಎಂದಿರುವ ಸಜ್ಜನ್ ಕುಮಾರ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ
ಪಂಜಾಬ್ ಹೌಸ್ ನಲ್ಲಿ ನೆಲೆಸಿದ್ದ ನಿರ್ಪ್ರೀತ್
ಸಿಬಿಐ ಪರ ವಾದ ಮಂಡಿಸುವುದು ಮಾತ್ರವಲ್ಲ, ಆರೋಪಿ ವಕೀಲರಿಂದ ಕ್ರಾಸ್ ಎಕ್ಸಾಮಿನೇಷನ್ ನಡೆಯುವಾಗ ಸಾಕ್ಷಿಗಳು ದಾರಿ ತಪ್ಪದಂತೆ ಎಚ್ಚರ ವಹಿಸುವುದು ಮತ್ತು ಅವರಲ್ಲಿ ಧೈರ್ಯ ತುಂಬುವುದು ಕೂಡ ಅಗತ್ಯವಿತ್ತು. ಆ ಕಾರಣಕ್ಕಾಗಿಯೇ ತರನ್ನುಮ್ ಚೀಮಾ ಅವರು ಕೂಡ ಚಂಡೀಗಢದಿಂದ ದೆಹಲಿಗೆ ಸ್ಥಳಾಂತರಗೊಂಡು, ಪ್ರಕರಣ ದಾರಿತಪ್ಪದಂತೆ ನೋಡಿಕೊಂಡಿದ್ದರು. ಅಂದು ಕೇವಲ 16 ವರ್ಷದವರಿದ್ದಾಗ ತಂದೆಯನ್ನು ಜೀವಂತ ಸುಟ್ಟುಹಾಕುವುದನ್ನು ಕಣ್ಣಾರೆ ಕಂಡಿದ್ದ ನಿರ್ಪ್ರೀತ್ ಕೌರ್ ಅವರು ಕೂಡ ಅಮೃತಸರದಿಂದ ಬಂದು ದೆಹಲಿಯ ಪಂಜಾಬ್ ಭವನದಲ್ಲಿ ವಿಚಾರಣೆ ಮುಗಿಯುವವರೆಗೆ ಎರಡು ತಿಂಗಳು ಇದ್ದರು.
1984 ಸಿಖ್ ಹತ್ಯಾಕಾಂಡ : ಸೀಮೆಎಣ್ಣೆ ಸುರಿದು ಸರ್ದಾರ್ಜಿಗೆ ಬೆಂಕಿ ಹಚ್ಚಿದ್ದ ದುರುಳರು
ಸಾಕ್ಷಿಗಳಲ್ಲಿ ಧೈರ್ಯ ತುಂಬಿದ್ದ ತರನ್ನುಮ್
ನಿರ್ಪ್ರೀತ್ ಕೌರ್ ಸೇರಿದಂತೆ ಪ್ರಮುಖ ಸಾಕ್ಷಿಗಳ ದಾರಿ ತಪ್ಪಿಸಲು ಯತ್ನಿಸಲಾಯಿತು, ಅವರನ್ನು ಸುಳ್ಳುಗಾರ ಎಂಬ ಹಣೆಪಟ್ಟಿ ಕಟ್ಟಲಾಯಿತು, ನಿರ್ಪ್ರೀತ್ ಕೌರ್ ಅವರು ವಿದ್ಯಾರ್ಥಿ ಜೀವನದಲ್ಲಿ ಹೋರಾಟ ಮಾಡಿ ಜೈಲು ಸೇರಿದ್ದರಿಂದ ಅವರ ವಿರುದ್ಧ ಭಯೋತ್ಪಾದಕಿ ಎಂಬ ಆರೋಪವನ್ನೂ ವಹಿಸಲಾಯಿತು. ಆದರೆ, ಎಲ್ಲ ಆರೋಪಗಳನ್ನು ನಂತರ ಕೈಬಿಡಲಾಗಿತ್ತು. ಅವರು ಯಾವುದೇ ಬೆದರಿಕೆ ಕರೆಗಳಿಗೆ ಬಲಿಯಾಗದೆ, ಸತ್ಯಕ್ಕೆ ಮಾತ್ರ ಅಂಟಿಕೊಳ್ಳುವಂತೆ ಅವರಿಗೆ ಸಾಕಷ್ಟು ಧೈರ್ಯ ತುಂಬಬೇಕಾಯಿತು ಎಂದು ತರನ್ನುಮ್ ಚೀಮಾ ಅವರು ಹೇಳುತ್ತಾರೆ. ಸಜ್ಜನ್ ಕುಮಾರ್ ಅವರು ಆರೋಪಿಯಾಗಿರುವ, ಸುಲ್ತಾನ್ ಪುರಿಯಲ್ಲಿ ನಡೆದ ಇನ್ನೊಂದು ಘಟನೆಗೆ ಸಂಬಂಧಿಸಿದ ಪ್ರಕರಣದಲ್ಲೂ ತರನ್ನುಮ್ ಅವರು ವಿಶೇಷ ಪಬ್ಲಿಕ್ ಪ್ರಾಸಿಕ್ಯುಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಿಖ್ಖರ ಹತ್ಯಾಕಾಂಡದ ಅಪರಾಧಿ: ಯಾರು ಈ ಸಜ್ಜನ್ ಕುಮಾರ್?
ನಿರ್ಪ್ರೀತ್ ತಂದೆಯನ್ನು ಸುಟ್ಟುಹಾಕಿದ್ದ ದೊಂಬಿ
ನವೆಂಬರ್ 1ರಂದು ನಡೆದ ದಂಗೆಯಲ್ಲಿ ನಿರ್ಪ್ರೀತ್ ಕೌರ್ ಅವರ ತಂದೆಯನ್ನು ಮನೆಯಿಂದ ಹೊರಗೆಳೆದುಕೊಂಡು ಬಂದು, ಅವರ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲಾಗಿತ್ತು. ಅವರು ತಪ್ಪಿಸಿಕೊಳ್ಳಲು ಚರಂಡಿಗೆ ಜಿಗಿದಿದ್ದರೂ ಬಿಡದ ಕೊಲೆಗಡುಕರ ದೊಂಬಿ, ಚರಂಡಿಯಿಂದ ಎಳೆದು ಕಂಬಕ್ಕೆ ಕಟ್ಟಿ ಮತ್ತೆ ಬೆಂಕಿ ಹಚ್ಚಿದ್ದರು. ನಂತರವೂ ಹೋರಾಟ ಮುಂದುವರಿಸಿದ ಅವರು ಮತ್ತೆ ತಪ್ಪಿಸಿಕೊಳ್ಳಲು ಯತ್ನಿಸಿದರೂ ಅವರಿಗೆ ಕಬ್ಬಿಣದ ಸಲಾಕೆಯಿಂದ ಹೊಡೆದು, ಮೈಮೇಲೆ ರಂಜಕ ಎಸೆದು ಸುಟ್ಟುಹಾಕಲಾಗಿತ್ತು.